
ಬಾರ್ ಕೌನ್ಸಿಲ್ ಅಧ್ಯಕ್ಷರ ವಿರುದ್ಧ ಲೀಗಲ್ ಕಾಕ್ರೋಚ್ಗಳು ಒಂದಾಗಿದ್ದಾರೆ: ಸಿಜೆಪಿ
ನವದೆಹಲಿ: ನಲ್ಸಾರ್ ವಿವಾದಕ್ಕೆ ಸಂಬಂಧಿಸಿದಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾದ(ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ರಾಜೀನಾಮೆಗೆ ಆಗ್ರಹಿಸಿ ‘ಲೀಗಲ್ ಕಾಕ್ರೋಚ್’ಗಳು ಇಂದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಆಲ್ ಇಂಡಿಯಾ ಯಂಗ್ ಅಡ್ವೊಕೇಟ್ಸ್ ಅಸೋಸಿಯೇಷನ್ ಈ ಪ್ರತಿಭಟನೆಗೆ ಕರೆ ನೀಡಿದೆ. ಬದಲಾವಣೆಯನ್ನು ಬಯಸುವ ಯಾವುದೇ ರೀತಿಯ ಶಾಂತಿಯುತ ಪ್ರತಿಭಟನೆಯನ್ನು ಸಿಜೆಪಿ ಬೆಂಬಲಿಸುತ್ತದೆ’ ಎಂದು ದಾಸ್ ಬರೆದುಕೊಂಡಿದ್ದಾರೆ.
‘ಪ್ರತಿಷ್ಠಿತ ಬಾಂಬೆ ಬಾರ್ ಅಸೋಸಿಯೇಷನ್ ಕೂಡ ಮನನ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿದೆ’ ಎಂದು ದಾಸ್ ಹೇಳಿದ್ದಾರೆ.
ಕಳೆದ ವಾರ ಘಟಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಆಹ್ವಾನಿಸಿದ್ದನ್ನು ನಲ್ಸಾರ್(ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್) ಕಾನೂನು ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿಗಳು ವಿರೋಧಿಸಿದ್ದರು.
ವಿದ್ಯಾರ್ಥಿಗಳ ನಡೆಯನ್ನು ಖಂಡಿಸಿದ್ದ ಬಿಸಿಐ, ನಲ್ಸಾರ್ ವಿಶ್ವವಿದ್ಯಾಲಯದ 2026 ರ ಸಾಲಿನ ಪದವೀಧರರನ್ನು ನೋಂದಣಿ ಮಾಡಿಕೊಳ್ಳದಿರುವಂತೆ ತನ್ನ ರಾಜ್ಯ ಘಟಕಗಳಿಗೆ ಆದೇಶಿಸಿತ್ತು. ವಿರೋಧದ ನಂತರ ಆದೇಶವನ್ನು ಹಿಂತೆಗೆದುಕೊಳ್ಳಲಾಗಿತ್ತು.