
ಶಿರಸಿ: ಕೃಷಿಕರ ಬಳಕೆಯಿಂದ ದೂರವಾದ ರೈತ ಭವನ
ಶಿರಸಿ: ಮಾರುಕಟ್ಟೆಗೆ ಆಗಮಿಸುವ ಕೃಷಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ರೈತ ಭವನವು ನಿಧಾನವಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಲೆಎತ್ತಿದ ಭವನವು ದಶಕಗಳಿಂದ ಸರಿಯಾದ ಉಸ್ತುವಾರಿಯಿಲ್ಲದೆ ದುಸ್ಥಿತಿಗೆ ತಲುಪಿದ್ದು, ಕೃಷಿಕರ ಬಳಕೆಗೆ ಸಿಗದೆ ವ್ಯರ್ಥವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ದೂರದ ಗ್ರಾಮಗಳಿಂದ ಅಡಿಕೆ ಮತ್ತಿತರ ಬೆಳೆಗಳನ್ನು ತರುತ್ತಿದ್ದ ರೈತರು ರಾತ್ರಿ ವೇಳೆ ಉಳಿದುಕೊಳ್ಳಲು ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ದಶಕಗಳ ಹಿಂದೆ ಎಪಿಎಂಸಿ ಹಿಂಭಾಗದಲ್ಲಿ ರೈತ ಭವನ ನಿರ್ಮಿಸಲಾಗಿತ್ತು. ಪ್ರಾರಂಭದಲ್ಲಿ ರೈತ ಭವನದಲ್ಲಿ ರೈತರು ಉಳಿದುಕೊಳ್ಳುತ್ತಿದ್ದರು. ‘ಕೆಲ ವರ್ಷಗಳಿಂದ ಯಾವೊಬ್ಬ ರೈತರು ಉಳಿದುಕೊಂಡ ದಾಖಲೆಗಳಿಲ್ಲ. ಉಪಯೋಗಕ್ಕೆ ಬಾರದ ಕಟ್ಟಡ ಇದಾಗಿದ್ದು, ಭವನದಲ್ಲಿ ವಿದ್ಯುತ್ ಸಂಪರ್ಕದ ತಂತಿ, ಬೋರ್ಡ್ಗಳು ಕೆಲವೆಡೆ ಕಿತ್ತು ಹೋಗಿವೆ. ಮಂಚ, ಹಾಸಿಗೆಗಳು ಹಾಳಾಗುವ ಹಂತ ತಲುಪಿವೆ. ನೀರಿನ ಪೈಪ್ಗಳಲ್ಲಿ ಶುದ್ಧ ನೀರು ಬರುತ್ತಿಲ್ಲ. ಬಹುತೇಕ ರೈತರು ಭವನವಿದೆ ಎನ್ನುವುದು ಮರೆತು ಹೋಗಿದ್ದಾರೆ’ ಎನ್ನುತ್ತಾರೆ ರೈತ ಉಮೇಶ ನಾಯ್ಕ.
‘ನಿರ್ವಹಣೆಯ ಕೊರತೆ ಪ್ರಮುಖವಾಗಿ ರೈತ ಭವನ ದುಸ್ಥಿತಿಗೆ ತಲುಪಲು ಪ್ರಮುಖ ಕಾರಣವಾಗಿದೆ. ವಿಶಾಲ ಕಟ್ಟಡವು ಸೂಕ್ತ ಸ್ವಚ್ಛತೆಯಿಲ್ಲದೆ ಭೂತ ಬಂಗಲೆಯಂತೆ ಭಾಸವಾಗುತ್ತದೆ. ಕೆಲವು ಕೊಠಡಿಗಳು ಹಾಗೂ ಅವುಗಳ ಶೌಚಾಲಯಗಳು ಬಳಕೆಗೆ ಅಯೋಗ್ಯವಾಗಿವೆ. ಭವನದ ಸುತ್ತಮುತ್ತ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ನಾತ ಆವರಿಸಿದೆ. ಕಟ್ಟಡ ಚಾವಣಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕಟ್ಟಡದ ಸುತ್ತಲೂ ಗಿಡಗಂಟಿ ಬೆಳೆದು ನಿಂತಿವೆ. ತೇವಾಂಶದಿಂದ ಕಟ್ಟಡದಿಂದ ಗೋಡೆ ಸಂಪೂರ್ಣ ಶಿಥಿಲವಾಗುವ ಹಂತ ತಲುಪಿದೆ’ ಎನ್ನುತ್ತಾರೆ ಅವರು.
‘ಪ್ರಸ್ತುತ ಸುಧಾರಿತ ಸಾರಿಗೆ ವ್ಯವಸ್ಥೆಯಿಂದಾಗಿ ಹೆಚ್ಚಿನ ರೈತರು ರಾತ್ರಿಯಾಗುವಷ್ಟರಲ್ಲಿ ಮನೆ ತಲುಪುತ್ತಾರೆ. ಆದರೂ ತುರ್ತು ಸಂದರ್ಭದಲ್ಲಿ ತಂಗಲು ಇಷ್ಟಪಡುವ ರೈತರಿಗೆ ಇಲ್ಲಿನ ಅಸಹನೀಯ ವಾತಾವರಣವು ಹಿಂಜರಿಯುವಂತೆ ಮಾಡುತ್ತಿದೆ. ಮೂಲಸೌಕರ್ಯಗಳ ಕೊರತೆಯಿಂದಾಗಿ ಇಲ್ಲಿ ಯಾರೂ ಹೆಚ್ಚಾಗಿ ತಂಗದಿರುವುದು ಭವನದ ಶೋಚನೀಯ ಸ್ಥಿತಿಗೆ ಸಾಕ್ಷಿಯಾಗಿದೆ’ ಎಂಬುದು ಬಹುತೇಕ ರೈತರ ಮಾತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-20-1967701595