
ವಡಗೇರಾ: ಗ್ರಾಮೀಣ ರಸ್ತೆಗಳು ಮಳೆಯಿಂದಾಗಿ ಸಂಪೂರ್ಣ ಹಾಳು
ವಡಗೇರಾ: ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇನ್ನೂ ಕೆಲವೆಡೆ ಟಾರ್ ಕಿತ್ತುಹೋಗಿ ಜಲ್ಲಿಕಲ್ಲುಗಳು ತೇಲಿದ್ದು, ಇದರಿಂದಾಗಿ ಗ್ರಾಮೀಣ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ವಡಗೇರಾ ಪಟ್ಟಣದಿಂದ – ಕೊನಹಳ್ಳಿ – ವಡಗೇರಾ ಪಟ್ಟಣದಿಂದ ಮೊರಾರ್ಜಿ ವಸತಿ ಶಾಲೆ ಹಳೆ ಪೊಲೀಸ್ ಠಾಣೆಯಿಂದ ಕುರಕುಂದಾ ಹೋಗುವ ರಸ್ತೆ, ಮಾಚನೂರದಿಂದ – ಬೆಂಡೆಬೆಂಬಳಿ – ಅಡಕಲ ಬಂಡೆಯಿಂದ ಕೊಂಗಂಡಿ – ತೇಕರಾಳದಿಂದ ಕುರುಕುಂದ – ನಾಯ್ಕಲ್ನಿಂದ ಕುರುಕುಂದ, ಕುರಕುಂದಾದಿಂದ ಅನಕಸೂಗುರು, ಬೆಂಡೆಬೆಂಬಳಿಯಿಂದ ಬೀರನೂರು ಹೀಗೆ ತಾಲ್ಲೂಕಿನ ವಿವಿಧ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ.
ಈ ರಸ್ತೆಗಳಲ್ಲಿ ಕೆಲವೊಂದು ಪಂಚಾಯತ್ರಾಜ್ ಇಲಾಖೆಗೆ ಇನ್ನೂ ಕೆಲವು ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿವೆ. ರಸ್ತೆ ದುರಸ್ತಿ ಬಗ್ಗೆ ಅಧಿಕಾರಿಗಳಿಗೆ ಕೇಳಲು ಗ್ರಾಮಸ್ಥರು ಹೋದರೆ ಈ ರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿ ಲೋಕೋಪಯೋಗಿ ಇಲಾಖೆಗೆ ಹೋಗಲು ಹೇಳುತ್ತಾರೆ ‘ಅಲ್ಲಿ ಕೇಳಿದರೆ ಪಂಚಾಯತ್ರಾಜ್ ಇಲಾಖೆಗೆ ಹೋಗಿ ಕೇಳಿ ಎಂದು ಅಧಿಕಾರಿಗಳು ಹೇಳುತ್ತಾರೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಗಳು ಹದಗೆಟ್ಟಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತಿದ್ದಾರೆ. ವ್ಯಾಪಾರ, ವಹಿವಾಟಿಗಾಗಿ ತಾಲ್ಲೂಕು ಕೇಂದ್ರದಿಂದ ಸೈದಾಪುರ – ರಾಯಚೂರು – ತೆಲಂಗಾಣದ ಗಡಿ ಹಾಗೂ ವಡಗೇರಾದಿಂದ ಶಹಾಪುರ ಮತ್ತು ಇನ್ನಿತರ ಗ್ರಾಮಗಳಿಗೆ ತೆರಳಲು ವಾಹನ, ಸಾರ್ವಜನಿಕರು, ವ್ಯಾಪಾರಸ್ಥರು ಹರಸಾಹಸ ಪಡುವಂತಾಗಿದೆ.
‘ಹದಗೆಟ್ಟ ರಸ್ತೆಗಳ ದೆಸೆಯಿಂದ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿ ಅಪಘಾತಗಳಾಗಿ ಸಾವು –ನೋವುಗಳಾದ ಉದಾಹರಣೆಗಳು ಇವೆ. ಹಾಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ಮುಂದಾಗಬೇಕು’ ಎನ್ನುವುದು ಜನರ ಒತ್ತಾಸೆಯಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-30-160744401