
ದತ್ತೂರಿ ಹಣ್ಣು ಮಾರಾಟ: ಇ–ಕಾಮರ್ಸ್ ವೇದಿಕೆಗಳ ಆಹಾರ ಪರವಾನಗಿ ಅಮಾನತು!
ಬೆಂಗಳೂರು: ಇ–ಕಾಮರ್ಸ್ ವೇದಿಕೆಗಳಾದ ಅಮೆಜಾನ್, ಸ್ವಿಗ್ಗಿ, ಇನ್ಸ್ಟಾಮಾರ್ಟ್ ಮತ್ತು ಬಿಗ್ಬಾಸ್ಕೆಟ್ಗೆ ನೀಡಲಾಗಿರುವ ಆಹಾರ ಪರವಾನಗಿಯನ್ನು ಅಮಾನತು ಮಾಡುವಂತೆ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್ಡಿಎ) ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸು ಮಾಡಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು 2011ರ ನಿಯಮಗಳ ಅಡಿಯಲ್ಲಿ ಈ ಶಿಫಾರಸು ಮಾಡಲಾಗಿದ್ದು, ಒಂದು ವೇಳೆ ಪರವಾನಗಿ ಅಮಾನತು ಆದರೆ ಈ ವೇದಿಕೆಗಳು ಯಾವುದೇ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.
ಕೆಲ ಇ–ಕಾಮರ್ಸ್ ವೇದಿಕೆಗಳು ವಿಷಪೂರಿತ ದತ್ತೂರಿ ಹಣ್ಣು ಮತ್ತು ಅದರ ಬೀಜಗಳನ್ನು ಸೇವನೆಗೆ ಯೋಗ್ಯ ಎಂಬಂತೆ ತೋರಿಸಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಐ) ಪರವಾನಗಿ ಮತ್ತು ನೋಂದಣಿ ಸಂಖ್ಯೆಯೊಂದಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ನೋಟಿಸ್ ನೀಡಿದ ನಂತರವೂ ನಿಯಮಗಳ ಪಾಲನೆಯಾಗಿಲ್ಲ. ಹೀಗಾಗಿ, ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ದತ್ತೂರಿಯನ್ನು ಇಂಗ್ಲಿಷ್ನಲ್ಲಿ ‘ಡೆವಿಲ್ಸ್ ಟ್ರಂಪೆಟ್’ ಅಥವಾ ‘ಮ್ಯಾಡ್ ಆ್ಯಪಲ್’ ಎನ್ನಲಾಗುತ್ತದೆ. ಇದರ ಬೀಜ, ಹೂಗಳು ಉಸಿರಾಟದ ತೊಂದರೆ ಹಾಗೂ ಅಮಲೇರಿಸುತ್ತವೆ. ಸಾವಿಗೂ ಕಾರಣವಾಗಬಹುದು.
‘ದತ್ತೂರಿ ಹಣ್ಣು ಹಾಗೂ ಬೀಜಗಳು ವಿಷಕಾರಿ. ಇದರ ಸೇವನೆಯು ಮಾನವನ ಆರೋಗ್ಯಕ್ಕೆ ಗಂಭೀರ ಹಾನಿ ಮಾಡಬಹುದು. ಇಂತಹ ಉತ್ಪನ್ನಗಳು ಸೇವನೆಗೆ ಯೋಗ್ಯ ಎಂದು ಆನ್ಲೈನ್ ವೇದಿಕೆಗಳಲ್ಲಿ ಮಾರಾಟ ಮಾಡುವುದು, ವಿತರಿಸುವುದು ಹಾಗೂ ಪ್ರಚಾರ ಮಾಡುವುದು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ’ ಎಂದು ತಿಳಿಸಲಾಗಿತ್ತು.
ಇವುಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು, ಇವುಗಳಿಗೆ ಸಂಬಂಧಿಸಿದಂತೆ ನೀಡಲಾಗಿರುವ ಎಲ್ಲ ಜಾಹೀರಾತುಗಳನ್ನು ತೆರವುಗೊಳಿಸಬೇಕು ಹಾಗೂ ಲಿಖಿತ ಉತ್ತರದೊಂದಿಗೆ ಎಫ್ಡಿಎ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಇ-ಕಾಮರ್ಸ್ ವೇದಿಕೆಗಳಿಗೆ ಸೂಚಿಸಲಾಗಿತ್ತು.
ಅದರಂತೆ ಇ-ಕಾಮರ್ಸ್ ವೇದಿಕೆಗಳ ಪ್ರತಿನಿಧಿಗಳು ಎಫ್ಡಿಎ ನ್ಯಾಯಾಲಯದ ಮುಂದೆ ಸೋಮವಾರ ಹಾಜರಾಗಿದ್ದರು. ಅಮೆಜಾನ್ ಯಾವುದೇ ಉತ್ತರ ನೀಡಿಲ್ಲ. ನೋಟಿಸ್ಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ಸ್ವಿಗ್ಗಿ, ಇನ್ಸ್ಟಾಮಾರ್ಟ್ ವಿಫಲವಾಗಿದ್ದು, ಸಮಯ ಕೋರಿವೆ.
ಈ ಪದಾರ್ಥಗಳ ಮಾರಾಟ ನಿಲ್ಲಿಸಲಾಗಿದೆ. ದೋಷ ಸರಿಪಡಿಸಿಕೊಳ್ಳಲಾಗುವುದು ಮತ್ತು ಈ ಹಣ್ಣು ಮನುಷ್ಯರ ಸೇವನೆಗೆ ಯೋಗ್ಯವಲ್ಲ ಎಂದು ಪಟ್ಟಿ ಹಾಕುವುದಾಗಿ ತಿಳಿಸಿದೆ.
ಈ ಉತ್ತರಗಳು ಎಫ್ಡಿಎಗೆ ಸಮಾಧಾನ ತಂದಿಲ್ಲ. ಆದೇಶ ಪಾಲಿಸುವವರೆಗೆ ಅವುಗಳ ಪರವಾನಗಿ ಅಮಾನತು ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
‘ಇ–ಕಾಮರ್ಸ್ ವೇದಿಕೆಗಳಾದ ಅಮೆಜಾನ್, ಸ್ವಿಗ್ಗಿ, ಇನ್ಸ್ಟಾಮಾರ್ಟ್ ಮತ್ತು ಬಿಗ್ಬಾಸ್ಕೆಟ್ ಸೇರಿದಂತೆ ಇ–ಕಾಮರ್ಸ್ ವೇದಿಕೆಗಳಿಗೆ ನೀಡಿರುವ ಆಹಾರ ಪರವಾನಗಿಯನ್ನು ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006’ರ ಅಡಿಯಲ್ಲಿ ಅಮಾನತು ಮಾಡಬೇಕು ಎಂದು ಬೆಂಗಳೂರಿನ ಕೇಂದ್ರ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ಆದೇಶಿಸಲಾಗಿದೆ. ಸಂಬಂಧಪಟ್ಟ ವೇದಿಕೆಗಳು ನಿಯಮ ಪಾಲನೆಗೆ ಸಂಬಂಧಿಸಿದಂತೆ ಸಲ್ಲಿಸುವ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.