
ಹುಣಸೂರು | ಭತ್ತದ ನಾಟಿಗೆ ಇಲ್ಲ ನೀರು: ಆತಂಕದಲ್ಲಿ ರೈತ
ಹುಣಸೂರು: ತಾಲ್ಲೂಕಿನ ಶಿರಿಯೂರು ಹಾಗೂ ಹುಸೇನಪುರ ನಾಲೆಗಳಲ್ಲಿ ಏಕಾಎಕಿ ನೀರು ಸ್ಥಗಿತಗೊಳಿಸಿದ್ದು, ನಾಲೆಯ ಅಚ್ಚುಕಟ್ಟು ಪ್ರದೇಶದ 800 ಹೆಕ್ಟೇರ್ ಭತ್ತದ ಗದ್ದೆಯಲ್ಲಿನ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.
ಇಲ್ಲಿನ ಉಂಡುವಾಡಿ ಗ್ರಾಮದ ಬಳಿಯ ಶಿರಿಯೂರು ಅಣೆಕಟ್ಟೆಯ ಈ ಎರಡು ನಾಲೆಗಳು 30 ಗ್ರಾಮಗಳಲ್ಲಿನ ಕೃಷಿಗೆ ಆಸರೆಯಾಗಿದೆ. ಆದರೆ, ಈ ಬಾರಿ ನಾಲೆಯನ್ನು ನಂಬಿ ಭತ್ತದ ನಾಟಿಗೆ ಸಿದ್ಧತೆ ನಡೆಸಿದವರು ಆತಂಕದಲ್ಲಿ ದಿನ ದೂಡುವಂತಾಗಿದೆ.
20 ದಿನಗಳಿಂದ ನಾಲೆಯಲ್ಲಿ ನೀರು ಬಿಟ್ಟಿದ್ದರಿಂದ ಗದ್ದೆ ಸಿದ್ಧಗೊಳಿಸಿ ಭತ್ತದ ಪೈರು ನಾಟಿಗೆ ತಯಾರಿ ಮಾಡಲಾಗಿತ್ತು. ಆದರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಸೂಚನೆಯನ್ನೂ ನೀಡದೇ ನಾಲ್ಕು ದಿನದಿಂದ ನಾಲೆ ನೀರು ಸ್ಥಗಿತಗೊಳಿಸಿದ್ದಾರೆ ಎಂದು ರೈತರು ದೂರಿದ್ದಾರೆ.
ನಾಲೆಯನ್ನು ಅವಲಂಬಿಸಿ ದಶಕದಿಂದ ಬೇಸಾಯ ನಡೆಸುತ್ತಿದ್ದೇವೆ. ಬರದಲ್ಲಿಯೂ ಸಾಲ ಮಾಡಿ ಎಕರೆಗೆ ₹ 20 ಸಾವಿರ ಖರ್ಚು ಮಾಡಿದ್ದೇವೆ. ಈ ಹಂತದಲ್ಲಿ ನೀರು ಸ್ಥಗಿತವಾಗಿದೆ. ನೀರಿಲ್ಲದೆ ಗದ್ದೆ ಬಯಲು ಒಣಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಅಚ್ಚುಕಟ್ಟು ಪ್ರದೇಶದ ರೈತ ಬಾಲರಾಜ್.
ಏತ ನೀರಾವರಿ ಕಂಟಕ: ಅಣೆಕಟ್ಟೆಯ ಮೂಲ ಲಕ್ಷ್ಮಣ ತೀರ್ಥ ನದಿಯಲ್ಲಿ ನೀರು ಹರಿದರೂ, ಅಲ್ಲಿನ ನೀರನ್ನು ಮರದೂರು ಏತ ನೀರಾವರಿ ಯೋಜನೆ ಮೂಲಕ 48 ಕೆರೆಗಳ ಭರ್ತಿಗೆ ಬಳಸಲಾಗುತ್ತಿದೆ. ಇದರಿಂದ ನದಿಯು ಬರಿದಾಗಿ ಅಣೆಕಟ್ಟೆಗೆ ನೀರಿಲ್ಲವಾಗಿದೆ. ನಾಲಾ ಬಯಲಿನ ರೈತರಿಗೆ ಈ ಯೋಜನೆ ಕಂಟಕವಾಗಿದೆ.
ಕೆ.ಆರ್.ಎಸ್ ಹಿನ್ನೀರಿಗೆ ಏತ ನೀರಾವರಿ ನಿರ್ಮಿಸಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಬದಲಿಗೆ ಲಕ್ಷ್ಮಣತೀರ್ಥ ನದಿಗೆ ನಿರ್ಮಿಸಿ ಶಿರಿಯೂರು ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ನಮ್ಮ ನೀರಾವರಿ ವ್ಯವಸ್ಥೆಗೆ ಹಾನಿಯಾಗಿದೆ. ಕ್ಷೇತ್ರದ ಶಾಸಕರು ಸಂಬಂಧಿಸಿದ ಅಧಿಕಾರಿಗೊಂದಿಗೆ ಈ ಸಮಸ್ಯೆಯನ್ನು ಚರ್ಚಿಸಿ ಕ್ರಮವಹಿಸಬೇಕು ಎಂದು ರೈತ ಬೋರೇಗೌಡ ಆಗ್ರಹಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-38-776288238