
ಧಾರವಾಡ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ಮಣ್ಣು ಕುಸಿತ, ಸಂಚಾರಕ್ಕೆ ಸಂಕಷ್ಟ
ಧಾರವಾಡ: ಹುಬ್ಬಳ್ಳಿ–ಧಾರವಾಡ ಬೈಪಾಸ್ ಮಾರ್ಗದ (ಎನ್ಎಚ್ 48) ಸರ್ವಿಸ್ ರಸ್ತೆ (ಕೆಲಗೇರಿ ಕೈಗಾರಿಕಾ ಪ್ರದೇಶ ಭಾಗದ ಸ್ವಾಮಿ ಸಮರ್ಥನಗರ ಸಮೀಪ) ಬದಿಯ ದಿಬ್ಬದ ಮಣ್ಣು ಜರಿದು ಮರವೊಂದು ಬುಡಸಮೇತ ನೆಲಕ್ಕುರುಳಿದೆ. ದಿಬ್ಬದ ಅಂಚಿನ ಭಾಗದ ಮರಗಳು ಬೇರು ಸಡಿಲಾಗಿ ಬೀಳುವ ಸ್ಥಿತಿಯಲ್ಲಿದ್ದು, ಚಾಲಕರು ಆತಂಕದಲ್ಲೇ ವಾಹನ ಓಡಿಸುವಂತಾಗಿದೆ.
ಟ್ರಕ್ಗಳು, ಕಾರುಗಳು ಸಹಿತ ಬಹಳಷ್ಟು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ದಿಬ್ಬದ ಅಂಚಿನ ಮಣ್ಣು ಜರಿದು ಸರ್ವಿಸ್ ರಸ್ತೆಗೆ ಬೀಳುವುದು ಸಮಸ್ಯೆಯಾಗಿ ಪರಿಣಮಿಸಿದೆ.
‘ಸರ್ವಿಸ್ ರಸ್ತೆ ಬದಿಯ ಮಣ್ಣು ಜರಿದು ದಿಬ್ಬದ ಅಂಚಿನ ನೀಲಗಿರಿ ಮರವೊಂದು ಬಿದ್ದಿದೆ. ಜೆಸಿಬಿಯಿಂದ ದಿಬ್ಬ ಅಗೆದು ರಸ್ತೆ ನಿರ್ಮಿಸಲಾಗಿದೆ. ಮಳೆಯಾದಾಗ ದಿಬ್ಬದ ಅಂಚಿನ ಮಣ್ಣು ಜರಿದು ರಸ್ತೆಯಲ್ಲಿ ರಾಶಿ ಬೀಳುತ್ತದೆ. ಹಲವು ಬಾರಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮಣ್ಣು ಕುಸಿಯದಂತೆ ದಿಬ್ಬದ ಭಾಗವನ್ನು ಸಜ್ಜುಗೊಳಿಸಬೇಕು’ ಎನ್ನುತ್ತಾರೆ ಟ್ರಕ್ ಚಾಲಕ ರಾಮು ಲಕ್ಕಮ್ಮನವರ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ಎನ್ಎಚ್ಎಐ) ಹುಬ್ಬಳ್ಳಿ–ಧಾರವಾಡ ಬೈಪಾಸ್ ಮಾರ್ಗದಲ್ಲಿ ಷಟ್ಪಥ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.
‘ಕೆಲಗೇರಿ ಕೆರೆ ದಂಡೆ ಭಾಗದಲ್ಲಿ ಒಂದು ಕಡೆ (ಸೇತುವೆ ಸಮೀಪ) ಸರ್ವಿಸ್ ರಸ್ತೆ ಬಹಳ ಕಿರಿದಾಗಿದೆ. ಶಾಲಾ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಎರಡು ವಾಹನಗಳು ಒಮ್ಮೆಲೆ ಸಂಚರಿಸಲು ಆಗಲ್ಲ. ಸಂಬಂಧಪಟ್ಟವರಿಗೆ ತಿಳಿಸಿದರೂ ಗಮನ ಹರಿಸಿಲ್ಲ’ ಎಂದು ಶಾಲಾ ವಾಹನ ಚಾಲಕ ಪ್ರಶಾಂತ ಗಿರಿಗೌಡ್ರ ದೂರಿದರು.
‘ಸರ್ವೀಸ್ ರಸ್ತೆ ಭಾಗದಲ್ಲಿ ಎಲ್ಲೆಲ್ಲಿ ಮಣ್ಣು ಕುಸಿಯುವ ಸಮಸ್ಯೆ ಇದೆ ಎಂದು ಪರಿಶೀಲಿಸಲಾಗುವುದು. ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು’ ಎಂದು ಹುಬ್ಬಳ್ಳಿ ಎನ್ಎಚ್ಎಐ ಯೋಜನಾ ನಿರ್ದೇಶಕ ಹಿಮಾಂಶು ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-24-822539493