
ರಾಬರ್ಟ್ಸನ್ಪೇಟೆ ಬಸ್ ನಿಲ್ದಾಣ: ಅಡುಗೆ, ವಿಶ್ರಾಂತಿ ಕೋಣೆಯಾದ ಶೌಚಾಲಯ
ಕೆಜಿಎಫ್: ರಾಬರ್ಟ್ಸನ್ಪೇಟೆ ಬಸ್ ನಿಲ್ದಾಣದಲ್ಲಿರುವ ಶೌಚಾಲಯದಲ್ಲಿ ಅಸಹನೀಯ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಶೌಚಕ್ಕೆ ಹೋಗಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಬಸ್ ನಿಲ್ದಾಣದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯವನ್ನು ಅಕ್ಕಪಕ್ಕದಲ್ಲಿಯೇ ನಿರ್ಮಿಸಲಾಗಿದೆ. ಪ್ರಸ್ತುತ ಎರಡೂ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ, ಈ ಶೌಚಾಲಯಗಳಲ್ಲಿ ಕಾಲಿಡಲು ಹೇಸಿಗೆ ಪಟ್ಟುಕೊಳ್ಳುವಂತಾಗಿದೆ.
ಶೌಚಾಲಯ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರನ ಅವಧಿ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಮುಗಿದಿದೆ. ನಂತರ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಸುಲಭ ಶೌಚಾಲಯ ನಿರ್ವಹಣೆ ಮಾಡುತ್ತಿದ್ದ ಉತ್ತರ ಭಾರತದ ಮೂಲದವರಿಗೆ ಅನಧಿಕೃತವಾಗಿ ನೋಡಿಕೊಳ್ಳಲು ಹೇಳಲಾಗಿದೆ. ಅವರು ಶೌಚಾಲಯದ ಒಂದು ಭಾಗವನ್ನು ಅಡುಗೆ ಮನೆಯನ್ನಾಗಿ ಮಾಡಿಕೊಂಡಿದ್ದಾರೆ.
ಅವರು ಶೌಚಾಲಯವನ್ನೇ ವಿಶ್ರಾಂತಿ ಗೃಹವಾಗಿಯೂ ಮಾಡಿಕೊಂಡಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಎಂ.ಆರ್.ರವಿ ನಗರದಲ್ಲಿ ಸೈಕಲ್ ಸಂಚಾರ ಬಂದಿದ್ದಾಗ, ಶೌಚಾಲಯದಲ್ಲಿ ವಾಸ ಮಾಡುತ್ತಿದ್ದವರನ್ನು ಕಂಡು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಶೌಚಾಲಯದಲ್ಲಿ ಜೀವನ ಮಾಡುವುದು ಅನಾಗರಿಕ ಸಮಾಜದ ಪರಿಕಲ್ಪನೆ. ಶೌಚಾಲಯದಲ್ಲಿ ಯಾರೂ ವಾಸ ಮಾಡದಂತೆ ಕ್ರಮ ವಹಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಆದರೆ ಅವರ ಎಚ್ಚರಿಕೆಗೆ ಬೆಲೆ ಸಿಗಲಿಲ್ಲ. ಎಂದಿನಂತೆ ನಿರ್ವಹಣೆ ಮಾಡುತ್ತಿರುವ ಉತ್ತರಭಾರತೀಯರು ಇಂದಿಗೂ ಸಾರ್ವಜನಿಕರ ಶೌಚಾಲಯವನ್ನೇ ತಮ್ಮ ವಾಸದ ಕೋಣೆಯಾಗಿಯೂ ಮಾಡಿಕೊಂಡಿದ್ದಾರೆ.
ಶೌಚಾಲಯದಲ್ಲಿ ಪುರುಷರಿಗಾಗಿ ನಿರ್ಮಾಣವಾಗಿರುವ ಮೂತ್ರ ವಿಸರ್ಜನೆ ಭಾಗದಲ್ಲಿ ಅಡ್ಡ ಕಟಕಟೆಯೇ ಇಲ್ಲ. ಶೌಚಾಲಯದ ನೆಲಭಾಗ ಕಿತ್ತಿಹೋಗಿದೆ. ಅಲ್ಲಲ್ಲಿ ನೀರು ಸಂಗ್ರಹವಾಗಿದೆ. ಮೂತ್ರ ವಿಸರ್ಜನೆ ಮತ್ತು ಶೌಚ ಕಾರ್ಯಕ್ಕಾಗಿ ಬರುವವರಿಗೆ ದುರ್ವಾಸನೆಯೇ ಸ್ವಾಗತಿಸುತ್ತದೆ. ಕಟ್ಟಡದ ಮೇಲ್ಛಾವಣಿ ಕಿತ್ತಿಬಂದಿದೆ. ಗಿಡ ಗಂಟಿಗಳು ಬೆಳೆದುನಿಂತಿವೆ. ಮಳೆ ಬಂದರೆ ಎಂದು ಕುಸಿಯುವುದೋ ಎಂಬ ಭೀತಿ ಇದೆ ಎಂದು ಶೌಚಾಲಯ ಉಪಯೋಗಿಸುವ ಬಸ್ ನಿಲ್ದಾಣದ ವರ್ತಕರು ಆರೋಪಿಸುತ್ತಾರೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣವಿದ್ದರೂ, ಸಂಸ್ಥೆಯ ಎಲ್ಲ ಬಸ್ಗಳು ಈ ಬಸ್ ನಿಲ್ದಾಣಕ್ಕೆ ಬಂದೇ ಹೋಗುತ್ತವೆ. ನೂರಕ್ಕೂ ಹೆಚ್ಚು ಖಾಸಗಿ ಬಸ್ಗಳು ಮತ್ತು ತಮಿಳುನಾಡು ಹಾಗೂ ಆಂಧ್ರಪ್ರದೇಶದ ಬಸ್ಗಳು ಇದೇ ಬಸ್ನಿಲ್ದಾಣದಲ್ಲಿ ನಿಲ್ಲುತ್ತಿವೆ. ಪ್ರತಿನಿತ್ಯಸಾವಿರಾರು ಪ್ರಯಾಣಿಕರು ಉಪಯೋಗಿಸುವ ಸಾರ್ವಜನಿಕ ಶೌಚಾಲಯವನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
ನಗರಸಭೆ ಬಸ್ ನಿಲ್ದಾಣವನ್ನು ಡಿಯುಎಲ್ಟಿ ಯೋಜನೆಯಡಿ ₹10 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲು ಯೋಜನೆ ಸಿದ್ಧವಾಗಿದೆ. ಪ್ರಸ್ತುತ ಇರುವ ಶೌಚಾಲಯವನ್ನು ತೆರವು ಮಾಡಿ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಲಾಗುವುದು. ಸುಲಭ ಶೌಚಾಲಯದ ಸಿಬ್ಬಂದಿ ಶೌಚಾಲಯದ ನಿರ್ವಹಣೆ ಮಾಡುತ್ತಿದ್ದಾರೆ ಎಂದು ನಗರಸಭೆ ಆಯುಕ್ತ ಶ್ರೀಧರ್ ಹೇಳುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-18-1548877458