
ಆಹಾರ ಸುರಕ್ಷತೆ ಪರಿಶೀಲನೆಗೆ 'ವಾಚ್ ಟೀಂ': ಸಚಿವ ಯು.ಟಿ. ಖಾದರ್
ಮಂಗಳೂರು: ಆಹಾರ ಸುರಕ್ಷತೆ ಮತ್ತು ನಕಲಿ ಔಷಧಗಳ ಬಗ್ಗೆ ನಿರಂತರ ನಿಗಾವಹಿಸುವ ನಿಟ್ಟಿನಲ್ಲಿ 'ವಾಚ್ ಟೀಂ' ಅನ್ನು ಪ್ರತಿ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ರಚಿಸಲು ಯೋಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸುರಕ್ಷಿತ ಆಹಾರ ಮತ್ತು ನಕಲಿ ಔಷಧಗಳ ಬಗ್ಗೆ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ಯೂಆರ್ ಕೋಡ್ ರಚಿಸಲಾಗಿದೆ. ಇದನ್ನು ಪ್ರತಿ ಹೋಟೆಲ್, ಔಷಧ ಮಳಿಗೆಗಳ ಎದುರು ಹಾಕಲು ಸೂಚಿಸಲಾಗುವುದು. ಕ್ಯೂಆರ್ ಕೋಡ್ ರಚಿಸಿದ ಎರಡು ದಿನಗಳಲ್ಲೇ 400 ಕ್ಕೂ ಅಧಿಕ ದೂರುಗಳು ಬಂದಿವೆ. ದೂರು ಬಂದ ಸ್ಥಳಕ್ಕೆ ಆಹಾರ ಸುರಕ್ಷತಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದರು.
ಹಾಲಿ ಇರುವ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಕಾರ್ಯ ಮಾಡಬಹುದು. ಆದರೆ, ಇದು ವ್ಯಾಪಕವಾಗಿ ನಡೆಯಬೇಕು ಮತ್ತು ಈ ಎಚ್ಚರ ಜನರಲ್ಲಿ ನಿರಂತರವಾಗಿ ಉಳಿಯಬೇಕು. ಅದಕ್ಕಾಗಿ ಸಾಮಾಜಿಕ ಕೆಲಸದಲ್ಲಿ ಆಸಕ್ತಿ ಇರುವ ನಿವೃತ್ತ ಅಧಿಕಾರಿಗಳು, ನಿವೃತ್ತ ಪ್ರಾಧ್ಯಾಪಕರು, ತಜ್ಞರು, ಹಿರಿಯರನ್ನು ಒಳಗೊಂಡ 'ವಾಚ್ ಟೀಂ' ರಚಿಸಿ, ಅವರಿಗೆ ನಿರ್ದಿಷ್ಟ ಅಧಿಕಾರ ನೀಡಲು ಯೋಚಿಸಲಾಗಿದೆ. ಕಾನೂನು ವ್ಯಾಪ್ತಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ನಕಲಿ ಔಷಧ ಜಾಲವು ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿಲ್ಲ, ಹೊರರಾಜ್ಯಗಳಲ್ಲಿ ನಕಲಿ ಔಷಧ ಸಿದ್ಧವಾಗಿ ನಮ್ಮ ರಾಜ್ಯಕ್ಕೆ ಬರುವ ಸಾಧ್ಯತೆ ಇರುತ್ತದೆ. ಅದರ ಸಮಗ್ರ ಪರಿಶೀಲನೆಗೆ ಎಸ್ಐಟಿ ರಚಿಸಲಾಗಿದೆ ಎಂದು, ಬಿಡದಿ ಬಳಿ ಪತ್ತೆಯಾದ ನಕಲಿ ಔಷಧ ತಯಾರಿಕಾ ದಂಧೆಯನ್ನು ಉಲ್ಲೇಖಿಸಿ ಹೇಳಿದರು.