
ಕೊಟಬಾಗಿ ಏತ ನೀರಾವರಿ ಯೋಜನೆ: ಕಾಲುವೆ ಕೊನೆಯ ಭಾಗಕ್ಕೆ ಹರಿಯದ ನೀರು
ಚಿಕ್ಕೋಡಿ: ತಾಲ್ಲೂಕು ವ್ಯಾಪ್ತಿಯ ಕೊಟಬಾಗಿ ಏತ ನೀರಾವರಿ ಯೋಜನೆಗೆ ಚಾಲನೆ ದೊರೆತು ಎರಡು ದಶಕ ಕಳೆದಿದೆ. ಆದರೆ, ಕಾಲುವೆ ಕೊನೇ ಭಾಗದವರೆಗೆ ನೀರು ಹರಿಯುತ್ತಿಲ್ಲ.
ಒಂದೆಡೆ ಮಳೆಯಾಗುತ್ತಿಲ್ಲ. ಮತ್ತೊಂದೆಡೆ 17 ಕಿ.ಮೀ ಉದ್ದದ ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿಯದ್ದರಿಂದ ರೈತರು ಕಂಗಾಲಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯಿಂದ ಹಿರಣ್ಯಕೇಶಿ ನದಿ ತುಂಬಿ ಹರಿಯುತ್ತಿದೆ. ಈ ನದಿಯಿಂದ ಕೊಟಬಾಗಿ ಏತ ನೀರಾವರಿ ಯೋಜನೆಗೆ ಪೂರೈಕೆಗೆ ನೀರಿನ ಅಭಾವ ಇಲ್ಲ. ಆದರೆ, ಯೋಜನೆಯ ಎರಡನೇ ಹಂತದ ಜಾಕವೆಲ್ನಲ್ಲಿ ನಿರ್ವಹಣೆ ಕೊರತೆ ಹಾಗೂ ಯಂತ್ರೋಪಕರಣಗಳ ದೋಷದಿಂದ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ.ಕರ್ನಾಟಕ ನೀರಾವರಿ ನಿಗಮದಿಂದ ನಿರ್ವಹಣೆ ಆಗಬೇಕಿರುವ 17 ಕಿ.ಮೀ ಉದ್ದದ ಕಾಲುವೆಯಲ್ಲಿ ಪ್ರತಿದಿನ 178.62 ಕ್ಯುಸೆಕ್ ನೀರು ಹರಿಯಬೇಕಿತ್ತು. 5,375 ಹೆಕ್ಟೇರ್ ಕೃಷಿಭೂಮಿ ನೀರಾವರಿಗೆ ಒಳಪಡಬೇಕಿತ್ತು.
ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಲುವೆ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ದೋಷಪೂರಿತ ಯಂತ್ರಗಳಿಂದಾಗಿ ನಿಗದಿತ ಭಾಗಕ್ಕೆ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ. ಹಾಗಾಗಿ ಸಮಸ್ಯೆ ಬಗೆಹರಿಸಿ, ಕಾಲುವೆ ಅಂತ್ಯದವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ 16 ದಿನಗಳಿಂದ ಕಾಲುವೆ ವ್ಯಾಪ್ತಿಯ ರೈತರು ಕೊಟಬಾಗಿ ಜಾಕವೆಲ್ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಕರಗಾಂವ, ಬೆಳಕೂಡ, ಡೋಣವಾಡ, ಬಂಬಲವಾಡ, ಹಂಚಿನಾಳ, ವಿದ್ಯಾನಗರ, ಬೆಳಗಲಿ ಮತ್ತಿತರ ಗ್ರಾಮಗಳ ರೈತರು ನಡೆಸುತ್ತಿರುವ ಧರಣಿಗೆ ವಿವಿಧ ಸಂಘ–ಸಂಸ್ಥೆಯವರು ಹಾಗೂ ಮಠಾಧೀಶರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಶಾಶ್ವತ ಪರಿಹಾರ ಕಲ್ಪಿಸುವವರೆಗೂ ಧರಣಿ ನಿರತ ಸ್ಥಳದಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ, ರೈತರ ಬೇಡಿಕೆ ಈಡೇರಿಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಕೆಲವೆಡೆ ಕಾಲುವೆಯಲ್ಲಿ ಹೂಳು ತುಂಬಿದೆ.
‘ಆಗಾಗ ಸುರಿದ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ್ದೇವೆ. ಈಗ ಮಳೆಯೂ ಸುರಿಯುತ್ತಿಲ್ಲ. ಕಾಲುವೆಗೆ ನೀರು ಪೂರೈಕೆಯೂ ಆಗುತ್ತಿಲ್ಲ. ಹೀಗಾಗಿ ಬೆಳೆಗೆ ನೀರು ಉಣಿಸುವುದು ಒತ್ತಟ್ಟಿಗಿರಲಿ, ಜನ–ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ’ ಎಂಬುದು ರೈತರ ಅಳಲು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-21-942119966