
ನೋವಿನಲ್ಲಿ ಇರುವವರಿಗೆ ಜೆಡಿಎಸ್ ಬಾಗಿಲು ತೆರೆದಿದೆ: ಎಚ್.ಡಿ. ಕುಮಾರಸ್ವಾಮಿ
ಹಾಸನ: ‘ಸಚಿವ ಸ್ಥಾನ ಸಿಗದಿರುವುದು ಸೇರಿದಂತೆ ಹಲವು ವಿಚಾರಗಳಿಂದ ಕೆಲವರು ಅಸಮಾಧಾನ ಗೊಂಡಿರುವುದು ಸಹಜ. ನೋವಿನಲ್ಲಿ ಇರುವವರಿಗೆ ಜೆಡಿಎಸ್ ಸದಾ ಬಾಗಿಲು ತೆರೆದಿದೆ. ಅವರ ಸಮಸ್ಯೆಗಳಿಗೆ ಪಕ್ಷದಲ್ಲಿ ಪರಿಹಾರ ಸಿಗಲಿದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಮನಸ್ಸಿಗೆ ನೋವಾಗಿದೆ. ಮಾತು ಕೊಟ್ಟಿದ್ದರು, ಅದರಂತೆ ನಡೆದು ಕೊಂಡಿಲ್ಲ ಎಂದು ಕೆಲವರು ಹೇಳಿಕೊಂಡಿದ್ದಾರೆ. ಅವರ ನೋವು ನನಗೆ ಅರ್ಥವಾಗುತ್ತದೆ’ ಎಂದರು. ‘ಜೆಡಿಎಸ್ ತೊರೆದು ಹೋದವರು ಮಾತ್ರವಲ್ಲ, ಯಾವುದೇ ಪಕ್ಷದಲ್ಲಿ ದ್ದರೂ, ಜನರ ಬಗ್ಗೆ ಗೌರವ ಹೊಂದಿರುವವರು ಮತ್ತು ಜನಪರ ಕೆಲಸ ಮಾಡಲು ಬಯಸುವವರು ಪಕ್ಷಕ್ಕೆ ಬರಲು ಮುಂದಾದರೆ ಸ್ವಾಗತಿಸಲಾಗುವುದು. ರಾಜ್ಯದಲ್ಲಿ ಈಗಿರುವ ಪರಿಸ್ಥಿತಿಯನ್ನು ಬದಲಿಸಿ, ಉತ್ತಮ ಆಡಳಿತ ನೀಡುವ ಶಕ್ತಿ ಬೆಳೆಯಬೇಕು. ಆ ಉದ್ದೇಶದಿಂದ ಉತ್ತಮ ಮನಸ್ಥಿತಿ ಹೊಂದಿರುವವರಿಗೆ ಜೆಡಿಎಸ್ ಮುಕ್ತವಾಗಿ ಸಹಕಾರ ನೀಡಲಿದೆ’ ಎಂದರು.
ಒತ್ತಡದ ಶಂಕೆ: ಬಸವರಾಜ ಹೊರಟ್ಟಿ ಅವರ ಮೇಲೆ ಒತ್ತಡ ಹೇರಿ, ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂಬ ಆರೋಪಗಳ ಬಗ್ಗೆ ನನಗೂ ಮಾಹಿತಿ ಬಂದಿದೆ ಎಂದು ಹೇಳಿದರು.
ರಾಜೀನಾಮೆ ಪತ್ರ ಗಮನಿಸಿದಾಗ ಅನುಮಾನಗಳು ಮೂಡುತ್ತವೆ. ಪತ್ರದಲ್ಲಿ ದಿನಾಂಕ ಖಾಲಿ ಬಿಟ್ಟು, ನಂತರ ಕೈಬರಹದಲ್ಲಿ ದಿನಾಂಕ ನಮೂದಿಸಿರುವುದು ಕಂಡುಬರುತ್ತದೆ. ಇದರಿಂದ, ಮೊದಲೇ ಪತ್ರ ಸಿದ್ಧಪಡಿಸಿಕೊಂಡು, ನಂತರ ಅವರನ್ನು ಕರೆಸಿ ರಾಜೀನಾಮೆ ಕೊಡಿಸಿರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಮೂಡುತ್ತದೆ ಎಂದು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-51-493074299