
ಹುನಗುಂದದಲ್ಲಿ ಸೂರ್ಯಕಾಂತಿ ಬೆಳೆಗೆ ರೋಗ, ಇಳುವರಿ ಕುಂಠಿತ ಭೀತಿ
ಹುನಗುಂದ: ಮಳೆ ಕೊರತೆ ನಡುವೆ ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆ ಹವಾಮಾನ ವೈಪರಿತ್ಯದಿಂದ ರೋಗ ಬಾಧೆ ಹಾಗೂ ಕೀಟ ಬಾಧೆಗೆ ತುತ್ತಾಗಿದ್ದು ಇಳುವರಿ ಕುಂಠಿತಗೊಳ್ಳುವ ಭೀತಿ ಎದುರಾಗಿದೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಮುಂಗಾರು ಹಂಗಾಮಿನ ಜೂನ್ ತಿಂಗಳ ಆರಂಭದಲ್ಲಿ ಸುರಿದ ಸಾಧಾರಣ ಮಳೆಗೆ ತಾಲ್ಲೂಕಿನ 8,775 ಹೆಕ್ಟೇರ್ ಹಾಗೂ ಇಳಕಲ್ ತಾಲ್ಲೂಕಿನ 6,372 ಹೆಕ್ಟರ್ ಸೇರಿದಂತೆ ಒಟ್ಟು 15,147 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆ ಬಿತ್ತನೆ ಮಾಡಲಾಗಿದೆ.
ಎರಡು ತಾಲ್ಲೂಕಿನ ಅಮೀನಗಡ, ಹುನಗುಂದ ಕರಡಿ ಹಾಗೂ ಇಳಕಲ್ ಹೋಬಳಿಗಳ ವ್ಯಾಪ್ತಿಯಯಲ್ಲಿನ ಬಹುತೇಕ ಪ್ರದೇಶಗಳಲ್ಲಿ ಮಳೆ ಕೊರತೆ ಉಂಟಾಗಿದೆ, ಬೆಳೆಗಳ ಬೆಳೆವಣಿಗೆ ಕುಂಠಿತಗೊಂಡಿದೆ. ಬಿಸಿಲಿಗೆ ಬೆಳೆ ಅಲ್ಲಲ್ಲಿ ಕಮರಿ ಹೋಗಿದೆ.
ಸೂರ್ಯಕಾಂತಿ ಹೂವು ಬಿಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿದೆ. ಈ ಸಮಯದಲ್ಲಿ ಬೆಳೆ ಬೂದಿ ರೋಗ, ರಸ ಹೀರುವ ಹಸಿರು ಕೀಟ, ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗಕ್ಕೆ ತುತ್ತಾಗಿದೆ. ಇನ್ನೊಂದಡೆ ಸೂರ್ಯಕಾಂತಿ ಬೆಳೆ ಹೂವು ಒಳಗೊಂಡ ಒಂದೊಂದು ತೆನೆಯಲ್ಲಿ ಮೂರ್ನಾಲ್ಕು ಕೀಟ (ಕಿಡೆ) ಕಂಡು ಬರುತ್ತಿದ್ದು, ತೆನೆಯ ಒಳಭಾಗದಲ್ಲಿ ಸೇರಿ ಕೊರೆದು ಹಾನಿ ಮಾಡುತ್ತಿದೆ ಜೊತಗೆ ತೆನೆಯಲ್ಲಿ ಅಲ್ಲಲ್ಲಿ ಜೆಡ ಅವರಿಸಿದ್ದು, ಕಾಳುಗಳು ಜೊಳ್ಳುಗಳಾಗಿ ಇಳುವರಿ ಕುಂಠಿತ ಗೊಳ್ಳುವ ಭೀತಿ ಎದುರಾಗಿದೆ.
ಈ ಬಾರಿ ಎರಡು ತಾಲ್ಲೂಕುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜೋರು ಮಳೆ ಆಗಲಿ ಅಥವಾ ನೀರು ಹರಿಯುವ ಮಳೆ ಆಗಿಲ್ಲ. ಹೀಗಾಗಿ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಕೊರತೆ ಉಂಟಾಗಿದೆ.
ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಿದ್ದರೆ ಮತ್ತೆ ಕೆಲ ಪ್ರದೇಶಗಳಲ್ಲಿ ಮಳೆ ಕೊರತೆಯಾಗಿದೆ. ಒಂದು ಹೊಲಕ್ಕೆ ಮಳೆ ಆದರೆ ಮತ್ತೊಂದು ಹೊಲಕ್ಕೆ ಮಳೆ ಇಲ್ಲದಂತಾಗಿದೆ. ಇಂತಹ ವಿಚಿತ್ರ ಪರಿಸ್ಥಿತಿಗೆ ಎರಡು ತಾಲ್ಲೂಕುಗಳು ಸಾಕ್ಷಿಯಾಗಿವೆ.
ಆಗಸ್ಟ್ ತಿಂಗಳಲ್ಲಿ ಹುನಗುಂದ ತಾಲ್ಲೂಕಿನಲ್ಲಿ ಶೇ59 ಹಾಗೂ ಇಳಕಲ್ ತಾಲ್ಲೂಕಿನಲ್ಲಿ 49ರಷ್ಟು ಮಳೆ ಕೊರತೆ ಉಂಟಾಗಿದೆ. ಇದು ಬೆಳೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ತಾಲ್ಲೂಕಿನ ಬೇವಿನಮಟ್ಟಿ ಗ್ರಾಮದಲ್ಲಿರುವ ಮೂರುವರೆ ಎಕರೆ ಸೂರ್ಯಕಾಂತಿ ಬಿತ್ತನೆ ಮಾಡಲಾಗಿತ್ತು. ಈಗ ಬೆಳೆಗೆ ಕೀಟ ಬಾಧೆ ಮಿತಿಮೀರಿದೆ. ಏನು ಮಾಡಬೇಕು ಎಂದು ತಿಳಿಯದಾಗಿದೆ ಎಂದು ಹುನಗುಂದದ ರೈತ ಬಸವರಾಜ ಗೊಣ್ಣಾಗರ ಆತಂಕ ವ್ಯಕ್ತಪಡಿಸಿದರು.