
ದಾಳಿಂಬೆ ಕೃಷಿಯಿಂದ ಕೋಟಿ ಆದಾಯ ಗಳಿಸಿದ ನಾಗರಸಕೊಪ್ಪ ರೈತ
ಗಜೇಂದ್ರಗಡ: ಕೃಷಿಯಿಂದ ವಿಮುಖರಾಗುತ್ತಿರುವ ಹಲವು ರೈತರ ನಡುವೆ, ಕೃಷಿಯಲ್ಲೇ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಗಜೇಂದ್ರಗಡ ಸಮೀಪದ ನಾಗರಸಕೊಪ್ಪ ಗ್ರಾಮದ ಪ್ರಗತಿಪರ ರೈತ ಕುಬೇರಪ್ಪ ಮಳಿಯಪ್ಪ ಬಡಿಗೇರ.
ಗಜೇಂದ್ರಗಡದಿಂದ 5 ಕಿ.ಮೀ ದೂರದ ನಾಗರಸಕೊಪ್ಪ ಗ್ರಾಮದಲ್ಲಿ ಕುಬೇರಪ್ಪ ಅವರ 13 ಎಕರೆ ಮಸಾರಿ ಜಮೀನಿದೆ. ಇಲ್ಲಿ ಮಹಾರಾಷ್ಟ್ರದ ಜೈನ್ ಕಂಪನಿಯ ಕೇಸರ್ ತಳಿಯ ದಾಳಿಂಬೆ ಬೆಳೆದಿದ್ದು, ಗಿಡಗಳ ತುಂಬೆಲ್ಲ ಉತ್ತಮ ಗಾತ್ರದ ದಾಳಿಂಬೆ ಹಣ್ಣುಗಳು ಕಣ್ಮನ ಸೆಳೆಯುತ್ತಿವೆ. ಈ ಸಮೃದ್ಧತೆಯ ಹಿಂದೆ ಕುಬೇರಪ್ಪ ಹಾಗೂ ಅವರ ಸಹೋದರರ ಅವಿರತ ಶ್ರಮವಿದೆ.
ಕುಬೇರಪ್ಪ ಅವರು 2016ರಲ್ಲಿ ನುಗ್ಗೆ ಬೆಳೆದು, ಅಂತರ ಬೆಳೆಯಾಗಿ 2 ಸಾವಿರ ದಾಳಿಂಬೆ ಸಸಿಗಳನ್ನು ನಾಟಿ ಮಾಡಿದ್ದರು. ಅವರು ಬೆಳೆದ ನುಗ್ಗೆಕಾಯಿಗಳು ಬೆಳಗಾವಿ, ಬೆಂಗಳೂರು ನಗರಗಳನ್ನೂ ತಲುಪುತ್ತಿದ್ದವು. ದಾಳಿಂಬೆ ಗಿಡಗಳು ದೊಡ್ಡದಾಗುತ್ತಿದ್ದಂತೆ ನುಗ್ಗೆ ಗಿಡಗಳನ್ನು ಕಟಾವು ಮಾಡಿದ್ದಾರೆ.
ದಾಳಿಂಬೆ ಹುಲುಸಾಗಿ ಬೆಳೆದಿದ್ದು, ಮೊದಲ ವರ್ಷ ₹3 ಲಕ್ಷ, ಎರಡನೇ ವರ್ಷ ₹22 ಲಕ್ಷ, ಆನಂತರದ ವರ್ಷಗಳಲ್ಲಿ ₹50 ಲಕ್ಷದಿಂದ ₹70 ಲಕ್ಷದವರೆಗೆ ಆದಾಯ ಗಳಿಸಿದ್ದಾರೆ. ಪ್ರತಿ ವರ್ಷ ಲಾಭ ಹೆಚ್ಚುತ್ತಿದ್ದಂತೆ ಅವರ ದಾಳಿಂಬೆ ಬೆಳೆಯುವ ಪ್ರದೇಶವನ್ನು ವಿಸ್ತರಿಸಿದ್ದಾರೆ.
‘ಚೆನ್ನೈ ಹಾಗೂ ಬೆಂಗಳೂರು ಮೂಲದ ವ್ಯಾಪಾರಿಗಳು ಕೆ.ಜಿಗೆ ₹111ರಂತೆ ತೋಟದಲ್ಲಿರುವ ಹಣ್ಣುಗಳನ್ನು ಖರೀದಿಸಿ, ಕೊಂಡೊಯ್ಯುತ್ತಿದ್ದಾರೆ. ದರ ಹೀಗೆ ಮುಂದುವರಿದರೆ, ಖರ್ಚು ಸೇರಿ ₹1 ಕೋಟಿಯಷ್ಟು ಲಾಭ ಸಿಗಲಿದೆ’ ಎನ್ನುತ್ತಾರೆ ಕುಬೇರಪ್ಪ.
ಅವರ ತೋಟಕ್ಕೆ ಹಲವು ರೈತರು ಭೇಟಿ ನೀಡಿ, ಮಾಹಿತಿ ಪಡೆಯುತ್ತಾರೆ. 20ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ಸಹೋದರರಾದ ಮೌನೇಶ, ಶೇಖರ, ಗಂಗಾಧರ ಮತ್ತು ಅಳಿಯ ಶಂಕರಪ್ಪ ಅವರು ಸಹ ಕೃಷಿ ಕಾಯಕಕ್ಕೆ ನೆರವು ನೀಡುತ್ತಿದ್ದಾರೆ.
‘ವಿಬಿಜಿ ರಾಮ್ಜಿ ಯೋಜನೆಯಡಿ ಅವಕಾಶ’
‘ವಿಬಿಜಿ ರಾಮ್ಜಿ ಯೋಜನೆಯಡಿ ದಾಳಿಂಬೆ, ಡ್ರ್ಯಾಗನ್ ಫ್ರೂಟ್, ದ್ರಾಕ್ಷಿ ಸೇರಿದಂತೆ ಹಲವು ಬಹು ವಾರ್ಷಿಕ ಬೆಳೆಗಳ ಪ್ರದೇಶ ವಿಸ್ತರಣೆಗೆ ಅವಕಾಶವಿದೆ. ಕುಬೇರಪ್ಪ ಬಡಿಗೇರ ಹಾಗೂ ಸಹೋದರರು ಶೇ 60ರಷ್ಟು ಸಾವಯವ ಪದ್ಧತಿಯಲ್ಲೇ ಕೃಷಿ ಮಾಡುತ್ತಿದ್ದು, ಶ್ರದ್ಧೆ, ಪರಿಶ್ರಮದಿಂದ ದಾಳಿಂಬೆ ಬೆಳೆದು ಯಶಸ್ಸು ಕಂಡಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡುವ ಮೂಲಕ ಇತರೆ ರೈತರಿಗೂ ಯಶಸ್ವಿ ಕೃಷಿಯ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದುತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಮಹಾಂತೇಶ ಅಂಟಿನ ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-23-1289814449