
ವಿಜಯಪುರದಲ್ಲಿ ಅಂತರ್ಜಲ ಮಟ್ಟ ಕುಸಿತ: ಕೊಳವೆ ಬಾವಿಗಳಲ್ಲಿ ನೀರು ಇಳಿಮುಖ
ವಿಜಯಪುರ (ದೇವನಹಳ್ಳಿ): ಮಳೆ ಇಲ್ಲದೇ ಬಹುತೇಕ ಕೆರೆ, ಕುಂಟೆ, ಕಾಲುವೆಗಳು ಬತ್ತುತಿರುವುದರಿಂದ ಜಿಲ್ಲೆಯಲ್ಲಿ ಪ್ರಸ್ತಕ ವರ್ಷ ಅಂತರ್ಜಲ ಮಟ್ಟ ಇಳಿಮುಖವಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1.69 ಮೀಟರ್ ನಷ್ಟು ಕುಸಿದಿದೆ. ಇದರಿಂದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. 2025ರ ಸರಾಸರಿ 23.70 ಮೀಟರ್ ಆಳದಲ್ಲಿ ಸಿಗುತ್ತಿದ್ದ ನೀರು, 2026ರ ಜುಲೈ ವೇಳೆ 25.39 ಮೀಟರ್ಗೆ ಇಳಿದಿದೆ.
ಜಿಲ್ಲೆ ಪ್ರಧಾನ ಕಸಬು ಕೃಷಿ. ಸುಮಾರು 2,23,651 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಬೇಸಾಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 46,842 ಬೋರ್ವೇಲ್ಗಳಿದ್ದು, ಯಾವುದೇ ನದಿ ಮೂಲ ಇಲ್ಲದ ಕೃಷಿಕರಿಗೆ ಕೊಳವೆ ಬಾವಿಗಳೆ ಆಸೆರೆಯಾಗಿವೆ. ಈ ವರ್ಷ ಮಳೆ ಕೈಕೊಟ್ಟಿರುವ ಜತೆ ಕೊಳವೆ ಬಾವಿಯ ನೀರು ಪ್ರಮಾಣ ಕಡಿಮೆ ಆಗಿರುವುದು ರೈತರಲ್ಲಿ ಆತಂಕ ಮೂಡಿಸಿದ್ದು, ಶೀಘ್ರ ಮಳೆ ಸುರಿದು ಅಂತರ್ಜಲ ಮರುಪೂರಣವಾಗಲೆಂದು ಪ್ರಾರ್ಥಿಸಿದ್ದಾರೆ.
ಜಿಲ್ಲೆಯಲ್ಲಿ ಅಂತರ್ಜಲ ನಿರ್ದೇಶನಾಲಯ ಒಟ್ಟು 26 ಅಧ್ಯಯನ ನಿರೀಕ್ಷಣಾ ಕೊಳವೆಬಾವಿಗಳಲ್ಲಿ ಪ್ರತಿ ತಿಂಗಳು ಜಲಮಟ್ಟವನ್ನು ದಾಖಲಿಸಲಾಗುತ್ತಿದೆ. 26 ಕೊಳವೆ ಬಾವಿಗಳಲ್ಲಿನ ಅಂತರ್ಜಲ ಮಟ್ಟವನ್ನು ಆಧರಿಸಿ ಜಿಲ್ಲೆಯಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಿದೆಯೇ ಅಥವಾ ಕುಸಿದಿದೆಯೇ? ಎನ್ನುವ ಲೆಕ್ಕಾಚಾರ ಮಾಡಲಾಗುತ್ತದೆ. ಇದು ಜಿಲ್ಲೆಯ ಅಂತರ್ಜಲ ಮಟ್ಟಕ್ಕೆ ಕೈಗನ್ನಡಿಯಾಗಿದೆ.
ಪ್ರಸ್ತಕ ಸಾಲಿನಲ್ಲಿ ನೆಲಮಂಗಲ ತಾಲ್ಲೂಕಿನಲ್ಲಿ ಗರಿಷ್ಠ ಕುಸಿತ ಕಂಡಿದ್ದು, 39.87 ಮೀ. ನಷ್ಟಿದ್ದರೆ, ಹೊಸಕೋಟೆ ತಾಲ್ಲೂಕಿನಲ್ಲಿ ಕನಿಷ್ಠ ಕುಸಿತದೊಂದಿಗೆ 19.38 ಮೀ. ರಷ್ಟಿದೆ. ಉಳಿದಂತೆ ದೇವನಹಳ್ಳಿ 22.81 ಮೀ., ದೊಡ್ಡಬಳ್ಳಾಪುರ 24.81 ಮೀ. ನಷ್ಟಿದೆ.
2025ರ ಜುಲೈ ಹಾಗೂ 2026ರ ಜುಲೈರ ಅಂತರ್ಜಲಮಟ್ಟ ಹೋಲಿಕೆ ಮಾಡಿದರೆ ದೇವನಹಳ್ಳಿ 1.78 ಮೀ., ದೊಡ್ಡಬಳ್ಳಾಪುರ 1.42 ಮೀ., ಹೊಸಕೋಟೆ 1.3 ಮೀ., ನೆಲಮಂಗಲ ತಾಲ್ಲೂಕಿನಲ್ಲಿ 1.97 ಮೀ. ನಷ್ಟು ಇಳಿಕೆಯಾಗಿದೆ.
ಪ್ರಸ್ತು ಜಿಲ್ಲೆಯಲ್ಲಿ ನೀರು ಸಿಗಲು 850ರಿಂದ 1200 ಅಡಿ ಕೊರೆಸಬೇಕಿದೆ. ಲಕ್ಷಾಂತರ ಹಣ ಖರ್ಚು ಮಾಡಿದರೂ ನೀರು ದೊರೆಯುವುದೇ ಈಗ ರೈತರಿಗೆ ಅಗ್ನಿ ಪರೀಕ್ಷೆಯಾಗಿದೆ.
ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ 6, ದೊಡ್ಡಬಳ್ಳಾಪುರ 10, ಹೊಸಕೋಟೆ 5, ನೆಲಮಂಗಲ ತಾಲ್ಲೂಕಿನಲ್ಲಿ 5 ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಈ ಕೊಳವೆ ಬಾವಿಗಳಲ್ಲಿ ಪ್ರತಿ ತಿಂಗಳು ಜಿಲ್ಲೆಯ ಅಂತರ್ಜಲ ಕಚೇರಿಯಿಂದ ಜಲಮಟ್ಟವನ್ನು ಪ್ರತಿ ತಿಂಗಳು ಮಾಪನ ಮಾಡುತ್ತದೆ. ಆಯಾ ವರ್ಷದ ಸರಾಸರಿಯ ಮಳೆಯ ಪ್ರಮಾಣವನ್ನು ಪರಿಗಣಿಸಿ ಅಂತರ್ಜಲ ಮಟ್ಟವನ್ನು ನಿರ್ಧರಿಸಲಾಗುತ್ತದೆ.
ಮರುಪೂರಣಕ್ಕೆ ಒತ್ತು ನೀಡಬೇಕು
ಮಳೆ ಪ್ರಮಾಣ ಹಾಗೂ ಕೆರೆಗಳಿಗೆ ನೀರಿನ ಸಂಗ್ರಹ ಮಟ್ಟ ಕಡಿಮೆಯಾಗಿರುವುದು ಅಂತರ್ಜಲ ಮಟ್ಟ ಕುಸಿದಿದೆ. ಕೊಳವೆಬಾವಿ ಹೊಂದಿರುವಂತವರು ಮರುಪೂರಣಕ್ಕೆ ಒತ್ತು ನಿಡಬೇಕು. ನೀರಿನ ಮಿತ ಬಳಕೆ ಮಾಡಬೇಕು. ಮನೆಯ ಮೇಲ್ಛಾವಣಿಯನ್ನು ನೀರನ್ನು ಮರುಬಳಕೆಗೆ ಆದ್ಯತೆ ನೀಡಬೇಕು. ಕೃಷಿಕರು ಮಳೆ ನೀರನ್ನು ವ್ಯರ್ಥವಾಗಿ ಹರಿಯಲು ಬಿಡದೆ ಜಮೀನುಗಳಲ್ಲಿ ಇಂಗು ಗುಂಡಿಗಳ ನಿರ್ಮಾಣಕ್ಕೆ ಒತ್ತು ನೀಡಿದರೆ ಅಂತರ್ಜಲ ಸುಧಾರಿಸಬಹುದು.
ಪಿ.ಜಾನಕಿ, ಅಧಿಕಾರಿ, ಜಿಲ್ಲಾ ಅಂತರ್ಜಲ ಕಚೇರಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-15-1474021549