
ಜಮಖಂಡಿಯಲ್ಲಿ ಮಳೆ ಮುನಿಸು: ಒಣಗುತ್ತಿರುವ ಬೆಳೆ, ರೈತರಿಗೆ ಭಾರಿ ನಷ್ಟ
ಜಮಖಂಡಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಮಳೆಯಾಶ್ರಿತ ಕೃಷಿಕ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಕ್ಕೆಜೋಳ, ತೊಗರಿ, ಉದ್ದು, ಸೂರ್ಯಕಾಂತಿ, ಈರುಳ್ಳಿ, ಕಬ್ಬು, ಅರಿಸಿನ ಸೇರಿದಂತೆ ಪ್ರಮುಖ ಬೆಳೆಗಳನ್ನು ರೈತರು ಮಳೆ ನಂಬಿ ಬಿತ್ತನೆ ಮಾಡಿದ್ದು, ಮಳೆ ಕೈಕೊಟ್ಟಿರುವುದರಿಂದ ರೈತರಿಗೆ ಭಾರಿ ಪ್ರಮಾಣದಲ್ಲಿ ಇಳುವರಿ ಕುಂಠಿತವಾಗುವ ಆತಂಕ ಎದುರಾಗಿದೆ.
ತಾಲ್ಲೂಕಿನಲ್ಲಿ ಶೇ 90ರಷ್ಟು ಬಿತ್ತನೆಯಾಗಿದ್ದು, ಜೂನ್ ಹಾಗೂ ಜುಲೈ ತಿಂಗಳಲ್ಲಿ ಸ್ವಲ್ಪ ಪ್ರಮಾಣದ ತುಂತುರು ಮಳೆಯಾಗಿ ಬಿತ್ತನೆ ಮಾಡಿದ ಬೀಜಗಳು ಅರ್ಧದಷ್ಟು ಮಾತ್ರ ನಾಟಿವೆ. ತುಂತುರು ಮಳೆಗೆ ಬೆಳವಣಿಗೆಯಾಗದೇ ಜೀವ ಹಿಡಿದುಕೊಂಡು ನಿಂತಿದ್ದವು. ಆದರೆ ಆಗಸ್ಟ್ನಲ್ಲಿ ಬಿಸಿಲು ಹಾಗೂ ಒಣ ಗಾಳಿ ಹೆಚ್ಚಾಗಿರುವದರಿಂದ ಮಣ್ಣಿನ ತೇವಾಂಶ ಪೂರ್ಣವಾಗಿ ಹೋಗಿರುವುದರಿಂದ ನಾಟಿರುವ ನಾಟಿಗೆಗಳು ಒಣಗುತ್ತಿವೆ.
ರೈತರು ಸಾಕಷ್ಟು ಖರ್ಚು ಮಾಡಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದು ಮುಂದೇನು ಎಂಬ ಚಿಂತೆಯಲ್ಲಿದ್ದಾನೆ. ಮುಂಗಾರು ಮಳೆಯಾಗದ ಕಾರಣ ಹಲವು ರೈತರ ಕೊಳವೆ ಬಾವಿಗಳಲ್ಲಿ ನೀರೂ ಬತ್ತಿದೆ. ಜನ ಜಾನುವಾರಿಗೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಮಳೆ ಕೊರತೆಯಿಂದ ದನ ಕರುಗಳಿಗೆ ಮೇವಿಗೆ ತೊಂದರೆಯಾಗಿದ್ದು ಅವಶ್ಯಕತೆ ಇರುವ ಕಡೆ ಗೋಶಾಲೆ ಆರಂಭ ಮಾಡಬೇಕು ಎಂದು ರೈತ ಮುಖಂಡ ಕಲ್ಲಪ್ಪ ಬಿರಾದಾರ ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಸಾವಳಗಿ ಭಾಗದಲ್ಲಿ ತುಂಗಳ ಏತ ನೀರಾವರಿ ಯೋಜನೆ, ಕೊಣ್ಣೂರ ಭಾಗದಲ್ಲಿ ಘಟಪ್ರಭಾ ಎಡದಂಡೆ ಕಾಲುವೆ, ತೋದಲಬಾಗಿ ಭಾಗದಲ್ಲಿ ಕೆರಕಲಮಟ್ಟಿ ಏತ ನೀರಾವರಿ ಯೋಜನೆಗಳಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಮೂರೂ ಯೋಜನೆಗಳ ಸ್ಥಿತಿ ಒಂದೊಂದು ರೀತಿ ಇದೆ. ಈ ಯೋಜನೆಗಳಿಂದ ನೀರು ಬೀಡಿಸಬೇಕು ಎಂದು ರೈತರು ಹೋರಾಟ ಮಾಡುತ್ತಿದ್ದರೂ ಪ್ರಯೋಜನ ಇಲ್ಲದಂತಾಗಿದೆ.
‘ಬರಗಾಲ ಘೋಷಣೆ ಮಾಡಿ ಅಧಿಕಾರಿಗಳು ಎಜೆಂಟರಿಗೆ ಅನುಕೂಲ ಮಾಡುವುದನ್ನು ಬಿಟ್ಟು ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ಪರಿಹಾರವನ್ನು ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಮೇಲಧಿಕಾರಿಗಳಿಗೆ ರೈತರ ಪರಿಸ್ಥಿತಿ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ಕೂಡಲೇ ರೈತರೊಂದಿಗೆ ಅಧಿಕಾರಿಗಳು ಸಭೆ ನಡೆಸಿ ಬರದ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಬೇಕು’ ಎಂದು ರೈತ ಮುಖಂಡ ರಾಜು ನದಾಫ್ ಒತ್ತಾಯಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-19-544358872