
ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆಗೆ ಕರ್ನಾಟಕ ಮುನ್ನುಡಿ, 5 ಹೋಬಳಿಗಳಲ್ಲಿ ಜಾರಿ
ಬೆಂಗಳೂರು: ಕರ್ನಾಟಕ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲು ಹೆಜ್ಜೆ ಇಟ್ಟಿದೆ.
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆ [DPAR (e-Governance)] ಯು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಹಾಗೂ ಐಟಿ-ಬಿಟಿ (ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ) ಇಲಾಖೆಗಳ ಸಹಯೋಗದೊಂದಿಗೆ ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ (Composite Digital Crop Survey - CDCS)ಗೆ ಮುಂದಾಗಿದೆ.
ಈ ಕುರಿತು ಪಾಲುದಾರರ ಮಹತ್ವದ ಕಾರ್ಯಾಗಾರವನ್ನು ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಸಿಎಎಸ್ (CAAS) ಅಧಿಕಾರಿಗಳ ಸಂಶೋಧನೆ ಮತ್ತು ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ಸರ್ಕಾರವು 2018 ರಿಂದ ಜಿಐಎಸ್ ಆಧಾರಿತ ಮೊಬೈಲ್ ಆ್ಯಪ್ ಮೂಲಕ "ಡಿಜಿಟಲ್ ಬೆಳೆ ಸಮೀಕ್ಷೆ" (DCS) ಅನುಷ್ಠಾನಗೊಳಿಸುತ್ತಿದ್ದು, ಪ್ಲಾಟ್ ಮಟ್ಟದಲ್ಲಿ ದೃಢೀಕೃತ ಬೆಳೆ ಮಾಹಿತಿ ಸಂಗ್ರಹಿಸುತ್ತಿದೆ. ಪ್ರಸ್ತುತ ಈ ಸಮೀಕ್ಷೆಯ ದತ್ತಾಂಶದ ನಿಖರತೆ, ವಿಶ್ವಾಸಾರ್ಹತೆ ಹಾಗೂ ವೈಜ್ಞಾನಿಕ ಪರಿಶೀಲನೆಯನ್ನು ಮತ್ತಷ್ಟು ಉತ್ತಮಪಡಿಸುವ ಉದ್ದೇಶದ ಹೊಂದಿದೆ.
ಇದರಡಿ ಉನ್ನತ ರೆಸಲ್ಯೂಶನ್ ಉಪಗ್ರಹ ಚಿತ್ರಣ ,ಎಸ್ಎಆರ್ (Synthetic Aperture Radar), ಡ್ರೋನ್ ಸಮೀಕ್ಷೆ (Drone Survey). ಜಿಐಎಸ್ ದತ್ತಾಂಶ (GIS Data), ಕೃತಕ ಬುದ್ಧಿಮತ್ತೆ (AI) ಹಾಗೂ ಮೆಷಿನ್ ಲರ್ನಿಂಗ್ (ML). ಈ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರಸ್ತುತ ಲಭ್ಯವಿರುವ ಬೆಳೆ ಸಮೀಕ್ಷೆಯ ದತ್ತಾಂಶದೊಂದಿಗೆ ಸಂಯೋಜಿಸಿ ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ ಮಾದರಿ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು,
ಐದು ಹೋಬಳಿಗಳಲ್ಲಿ ಪೈಲಟ್ ಅನುಷ್ಠಾನ
ರಾಜ್ಯದ ಎಲ್ಲಾ ಭೌಗೋಳಿಕ ವಿಭಾಗಗಳನ್ನು ಪ್ರತಿನಿಧಿಸುವಂತೆ ಆಯ್ದ ಐದು ಹೋಬಳಿಗಳಲ್ಲಿ ಪ್ರಾಯೋಗಿಕವಾಗಿ ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ನೀತಿ ನಿರೂಪಕರು, ತಾಂತ್ರಿಕ ತಜ್ಞರು, ಸಂಶೋಧನಾ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಪಾಲುದಾರರನ್ನು ಒಂದೇ ವೇದಿಕೆಗೆ ತಂದು, ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ (CDCS) ಯಶಸ್ವಿ ಅನುಷ್ಠಾನಕ್ಕೆ ಅಗತ್ಯವಿರುವ ಸದೃಢ ತಾಂತ್ರಿಕ ಚೌಕಟ್ಟಿನ (Technical Framework) ಕುರಿತು ಚರ್ಚಿಸುವ ಉದ್ದೇಶದಿಂದ ಸಮಾಲೋಚನಾ ಕಾರ್ಯಾಗಾರ ಆಯೋಜಿಸಲಾಗಿತ್ತು.
ಇ-ಆಡಳಿತ ಇಲಾಖೆ, KSRSAC ಮತ್ತು ISRO-NRSC ಸಂಸ್ಥೆಗಳ ವತಿಯಿಂದ CDCS ತಾಂತ್ರಿಕ ಚೌಕಟ್ಟು, ಮೂಲಸೌಕರ್ಯ ಅಗತ್ಯತೆಗಳು, ಅನುಷ್ಠಾನ ಕಾರ್ಯತಂತ್ರ ಹಾಗೂ ತಂತ್ರಜ್ಞಾನ ಸಂಯೋಜನೆ ಕುರಿತು ವಿಸ್ತೃತ ಚತ್ಚೆಗಳು ನಡೆದವು.
ಖಾಸಗಿ ತಂತ್ರಜ್ಞಾನ ಸಂಸ್ಥೆಗಳು ಮತ್ತು ಸ್ಟಾರ್ಟ್ಅಪ್ಗಳು ತಮ್ಮ ತಾಂತ್ರಿಕ ಸಾಮರ್ಥ್ಯ ಹಾಗೂ ಅನುಷ್ಠಾನ ವಿಧಾನಗಳನ್ನು ಪ್ರದರ್ಶಿಸಿದವು. ತಜ್ಞರು, ಸರ್ಕಾರಿ ಅಧಿಕಾರಿಗಳು ಹಾಗೂ ತಂತ್ರಜ್ಞಾನ ಪಾಲುದಾರರ ನಡುವೆ ಸಂವಾದಾತ್ಮಕ ಚರ್ಚೆಗಳು ನಡೆಯಿತು.
ರಾಜ್ಯದಲ್ಲಿ ಸುದೃಢ ಹಾಗೂ ತಂತ್ರಜ್ಞಾನ ಆಧಾರಿತ ಡಿಜಿಟಲ್ ಬೆಳೆ ಸಮೀಕ್ಷೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮುಂದಿನ ಕ್ರಮಗಳನ್ನು ಕೈಗೊಳ್ಳಲು ಈ ಕಾರ್ಯಾಗಾರದಲ್ಲಿ ನಿರ್ಧರಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಡಾ. ಕೆ.ರಾಜೇಂದ್ರ, ಸ್ಮಾರ್ಟ್ ಗವರ್ನೆನ್ಸ್ ಸೆಂಟರ್, ಕಾರ್ಯನಿರ್ವಾಹಕ ನಿರ್ದೇಶಕ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯನಿರ್ದೇಶಕ. ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕ, ರಾಷ್ಟ್ರೀಯ ಮಾಹಿತಿ ಕೇಂದ್ರ ಉಪ ಮಹಾಪ್ರಾಬಂಧಕ, ರಾಷ್ಟ್ರೀಯ ದೂರಸಂವೇದಿ ಕೇಂದ್ರ ಯೋಜನಾ ನಿರ್ದೇಶಕರು ಉಪಸ್ಥಿತರಿದ್ದರು.