
ಕೂಡಲಸಂಗಮದಲ್ಲಿ ಸೋಲಾರ್ ಚಾಲಿತ ದೋಣಿ ವಿಹಾರ ಪ್ರಾರಂಭ
ಕೂಡಲಸಂಗಮ: ಪ್ರವಾಸಿಗರ ದೋಣಿ ವಿಹಾರದಿಂದ ಪರಿಸರ ಮಾಲಿನ್ಯ ಉಂಟಾಗಬಾರದು ಎಂಬ ಉದ್ದೇಶದಿಂದ ದೋಣಿಗೆ ಸೋಲಾರ ಅಳವಡಿಸಿ, ಸೋಲಾರ್ ವಿದ್ಯುತ್ನಿಂದ ನಿತ್ಯ ಪ್ರವಾಸಿಗರಿಗೆ ದೋಣಿ ವಿಹಾರವನ್ನು ಕೂಡಲಸಂಗಮದ ಕೃಷ್ಣಾ ನದಿ ದಡದಲ್ಲಿ ಬಸವ ದೋಣಿ ವಿಹಾರದ ದೋಣಿಗಳು ಮಾಡುತ್ತಿವೆ.
ನಿತ್ಯ ಸುಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಮನುರಂಜನೆ ನೀಡಬೇಕು ಎಂಬ ಉದ್ದೇಶದಿಂದ ಬಸವ ದೋಣಿ ವಿಹಾರದ ಎರಡು ದೋಣಿಗಳನ್ನು ಕಳೆದ ವರ್ಷ ಆರಂಭಿಸಿದೆ. ನಿತ್ಯ ಸಂಗ್ರಹವಾದ ಹಣದಲ್ಲಿ ಶೇ 40ರಷ್ಟು ಇಂಧನಕ್ಕೆ ಖರ್ಚು ಆಗುತ್ತಿತ್ತು. ನದಿಯಲ್ಲಿ ಸ್ನಾನ ಮಾಡುವವರಿಗೆ ಜಲ, ಶಬ್ದ, ವಾಯು ಮಾಲಿನ್ಯ ಉಂಟಾಗಬಾರದು ಎಂದು ಆಲೋಚಿಸಿ ದೋಣಿಗೆ ಸೋಲಾರ್ ಅಳವಡಿಸಿ, ಚಲಾಯಿಸಿದರೆ ಮಾಲಿನ್ಯ ತಡೆಗಟ್ಟಬಹುದು ಎಂದು ಯೋಚಿಸಿದೆ.
ವಿವಿಧ ಸೋಲಾರ್, ದೋಣಿ ಯಂತ್ರದ ಕಂಪನಿಗಳನ್ನು ಸಂಪರ್ಕಿಸಿದೆ, ಚೆನೈದಿಂದ ಯಂತ್ರ, ಬೆಂಗಳೂರಿನಿಂದ ಸೋಲಾರ್ ಪ್ಲೇಟ್, ಸೇಲಂನಿಂದ ವಿದ್ಯುತ್ ಬ್ಯಾಟರಿ ತರಿಸಿ ಬೆಂಗಳೂರಿನ ಇನ್ವ್ಯಾಗಿನಲ್ ಕಂಪನಿಯವರಿಂದ ಅಳವಡಿಸಿ, ಕಳೆದ ಒಂದು ವಾರ ದಿಂದ ಸೋಲಾರ್ ವಿದ್ಯುತ್ನಿಂದ ದೋಣಿ ಚಲಿಸುತ್ತಿವೆ ಎಂದು ಬಸವ ದೋಣಿ ಮಾಲಿಕ ಬಸವರಾಜ ಅನಗವಾಡಿ ಹೇಳಿದರು.
‘ನದಿಯ ನೀರಿನಲ್ಲಿ ಚಾಲಾಯಿಸುವ ದೋಣಿಗೆ ಪ್ರಥಮ ಬಾರಿಗೆ ಸೋಲಾರ್ ಅಳವಡಿಸಿದೆ. ನಾನು ಎರಡು ದೋಣಿಗೆ ಅಳವಡಿಸಿದ್ದೇನೆ. ಪ್ರತಿ ದೋಣಿಗೆ 4 ಮತ್ತು 3 ಅಡಿಯ 8 ಸೋಲಾರ್ ಪ್ಲೇಟ್ಗಳನ್ನು ಅಳವಡಿಸಿದೆ. ದೋಣಿಯ ಮೇಲ್ಭಾಗದಲ್ಲಿ ಅಳವಡಿಸಿದ್ದರಿಂದ ವಿಹಾರಿಗಳಿಗೆ ನೆರಳು ದೊರೆಯುವುದು, ಮಳೆ ಬಂದರೆ ರಕ್ಷಣೆಯು ಆಗುವುದು. ನಿರಂತರ ಬಿಸಿಲಿಗೆ ವಿದ್ಯುತ್ ದೊರೆಯುವುದರಿಂದ ವಿದ್ಯುತ್ ಕೊರತೆಯಾಗುವುದಿಲ್ಲ, ಮಳೆ ಬಂದಾಗ, ಬಿಸಿಲು ಇರದೇ ಇದ್ದಾಗ 10 ದೋಣಿ ವಿಹಾರ ಸುತ್ತು ಸುತ್ತುವಷ್ಟು ವಿದ್ಯುತ್ ಸಂಗ್ರಹವಾಗಿರುತ್ತದೆ ಎಂದು ಬಸವರಾಜ ಹೇಳಿದರು.
ದೋಣಿಗೆ ಸೋಲಾರ್ ಅಳವಡಿಸಲು ₹ 12 ರಿಂದ ₹ 15 ಲಕ್ಷ ವೆಚ್ಚವಾಗುವುದು. ಪ್ರತಿ ದೋಣಿಯಲ್ಲಿ ಎರಡು ಯಂತ್ರಗಳು ಇರುತ್ತವೆ. ಒಂದು ಸೋಲಾರ್ದಿಂದ ಕಾರ್ಯನಿರ್ವಹಿಸಿದರೆ ಇನ್ನೊಂದು ಪೆಟ್ರೋಲ್ನಿಂದ ಕಾರ್ಯ ನಿರ್ವಹಿಸುವುದು. ಪೆಟ್ರೋಲ್ ಯಂತ್ರವನ್ನು ತುರ್ತು ಸಂದರ್ಭದಲ್ಲಿ ಮಾತ್ರ ಬಳಸುವರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-19-975100449