ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಬೆಳೆದಿದೆ
ಕಾರವಾರ: ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಅವಧಿ ಮುಗಿದ ಕಾರಣ ಹೊಸಬರ ನೇಮಕಕ್ಕೆ ಸಿದ್ಧತೆ ನಡೆದಿದೆ. ಪಕ್ಷ ಅಧಿಕಾರದಲ್ಲಿರುವುದರಿಂದ ಸಹಜವಾಗಿ ಈ ಬಾರಿ ಆಕಾಂಕ್ಷಿಗಳ ಪಟ್ಟಿ ಬೆಳೆದಿದೆ. ಅವರಲ್ಲಿ ಪಕ್ಷ ಮುನ್ನಡೆಸಲು ಸೂಕ್ತ ಸಾರಥಿ ಯಾರೆಂಬುದರ ಆಯ್ಕೆಯೂ ಸವಾಲಾಗಿದೆ.
ಕಾಂಗ್ರೆಸ್ ಜಿಲ್ಲಾ ಘಟಕಕ್ಕೆ ಅಧ್ಯಕ್ಷರಾಗಲು ಬಯಸಿ 36 ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಅವರ ಪೈಕಿ ಶಿರಸಿಯಿಂದಲೇ ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ ಎಂಬುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕೆಲವು ಹಿರಿಯ ಮುಖಂಡರ ಜೊತೆಗೆ ಯುವಕರು ಈ ಬಾರಿ ಅರ್ಜಿ ಸಲ್ಲಿಸಿರುವುದು ವಿಶೇಷ ಎನಿಸಿದೆ. ಮುಖಂಡರಾದ ಎಸ್.ಕೆ. ಭಾಗವತ್, ರವೀಂದ್ರ ನಾಯ್ಕ, ಸತೀಶ ಪಿ. ನಾಯ್ಕ, ದೀಪಕ ದೊಡ್ಡೂರು, ಆರ್.ಎಚ್. ನಾಯ್ಕ, ಮಂಜುನಾಥ ನಾಯ್ಕ ಸೇರಿ ಹಲವು ಹಿರಿಯರು ಅರ್ಜಿ ಸಲ್ಲಿಸಿದ್ದಾರೆ. ಜ್ಯೋತಿ ಪಾಟೀಲ, ನಾಗರಾಜ ಮಡಿವಾಳ, ಸಂತೋಷ ಶೆಟ್ಟಿ ಸೇರಿದಂತೆ ಯುವ ಮುಖಂಡರಿಂದಲೂ ಅರ್ಜಿ ಸಲ್ಲಿಕೆಯಾಗಿದೆ. ಕೆಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಸಂಘಟನೆ ಸೃಜನ್ ಅಭಿಯಾನದ ಮೂಲಕ ಜಿಲ್ಲಾ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಲು ಎಐಸಿಸಿ ಮುಂದಾಗಿದೆ. ಆಕಾಂಕ್ಷಿಗಳಿಂದ ಅರ್ಜಿ ಪಡೆದು, ಕಾರ್ಯಕರ್ತರ ಅಭಿಪ್ರಾಯ ಆಲಿಕೆ ಮೂಲಕ ಪಕ್ಷದ ಸಾರಥಿ ನೇಮಿಸಲು ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಸಿದೆ.
ಎಐಸಿಸಿ ಕಾರ್ಯದರ್ಶಿಯಾಗಿರುವ ಅಸ್ಸಾಂನ ರೋಸ್ಲಿನ್ ಟಿರ್ಕೆ ಅವರು ಜಿಲ್ಲೆಯ ಪ್ರತಿ ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ಸಭೆ ನಡೆಸಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದೇ ವೇಳೆ ಅಧ್ಯಕ್ಷ ಹುದ್ದೆಗೆ ಏರಲು ಬಯಸುವ ಆಕಾಂಕ್ಷಿಗಳಿಂದಲೂ ಅರ್ಜಿ ಪಡೆದಿದ್ದಾರೆ.
‘ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗುವವರನ್ನು ಅಳೆದು ತೂಗಿ ನೇಮಿಸಲು ಎಐಸಿಸಿ ಮುಂದಾಗಿದ್ದು, ಆಕಾಂಕ್ಷಿಗಳಿಂದ ಅರ್ಜಿ ಸಂಗ್ರಹ ಮೊದಲ ಹಂತವಾಗಿದೆ. ಅರ್ಜಿ ಸಲ್ಲಿಸಿದವರಲ್ಲಿ 6 ಮಂದಿಯ ಹೆಸರು ಎಐಸಿಸಿಗೆ ತಲುಪುವ ಅಂತಿಮ ಪಟ್ಟಿಯಲ್ಲಿ ಇರಲಿದೆ. ಅಪರಾಧ ಹಿನ್ನೆಲೆ ಇಲ್ಲದ, ಪಕ್ಷದಲ್ಲಿ ಸಕ್ರಿಯರಾಗಿರುವವರನ್ನು ಮಾತ್ರ ಪರಿಗಣಿಸಲಿದ್ದಾರೆ. ಅಲ್ಲದೇ, ಜಾತಿವಾರು ಲೆಕ್ಕಾಚಾರವೂ ನಡೆಯಲಿದೆ. ಅರ್ಜಿ ನಮೂನೆಯಲ್ಲಿ ವಿಸ್ತೃತ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.
‘ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಏರಲು ಕೆಲ ವರ್ಷಗಳಿಂದ ಅಷ್ಟೇನೂ ಪೈಪೋಟಿ ಇರಲಿಲ್ಲ. ಈಗ ಶಿರಸಿ ಶಾಸಕರಾಗಿರುವ ಭೀಮಣ್ಣ ನಾಯ್ಕ 13 ವರ್ಷ ನಿರಂತರವಾಗಿ ಅಧ್ಯಕ್ಷರಾಗಿದ್ದರು. ಆಗ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇದ್ದದ್ದು ಕಡಿಮೆ. ಆದರೂ, ಸಂಘಟನೆ ಬಲಗೊಳಿಸುವ ಕೆಲಸ ಮಾಡಿದ್ದರು’ ಎಂಬುದಾಗಿ ಕಾರ್ಯಕರ್ತರು ಹೇಳುತ್ತಾರೆ.
‘ಈಗ ಪಕ್ಷ ಅಧಿಕಾರದಲ್ಲಿದ್ದು, ಕಾಂಗ್ರೆಸ್ನ ನಾಲ್ವರು, ಒಬ್ಬರು ಪಕ್ಷದ ಬೆಂಬಲಿತ ಶಾಸಕರಿದ್ದಾರೆ. ಕೆಲವೇ ತಿಂಗಳಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಇದೇ ಕಾರಣಕ್ಕೆ ಈ ಬಾರಿ ಅಧ್ಯಕ್ಷರಾಗಲು ತುರುಸು ಹೆಚ್ಚಿದೆ’ ಎಂದು ಮುಖಂಡರೊಬ್ಬರು ಹೇಳಿದರು.
ಹೊಸ ಅಧ್ಯಕ್ಷರ ಆಯ್ಕೆಗೆ ವರಿಷ್ಠರಿಂದ ಪ್ರಕ್ರಿಯೆ ನಡೆದಿದ್ದು, ನನಗೆ ಅವಕಾಶ ಮುಂದುವರಿಸುವಂತೆಯೂ ಮನವಿ ಮಾಡಿದ್ದೇನೆ
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-20-471348421