
ನಿರೀಕ್ಷಣಾ ಜಾಮೀನು ಪ್ರಕ್ರಿಯೆ; ವಂಚನೆ ಮೊತ್ತ ವಸೂಲಿ ಸಾಧನವಾಗದಿರಲಿ: ಸುಪ್ರೀಂ
ನವದೆಹಲಿ: ವಂಚನೆ ನಡೆದಿದೆ ಎನ್ನಲಾದ ಮೊತ್ತವನ್ನು ವಸೂಲಿ ಮಾಡುವ ಸಾಧನವನ್ನಾಗಿ ನಿರೀಕ್ಷಣಾ ಜಾಮೀನು ಪ್ರಕ್ರಿಯೆಯನ್ನು ನ್ಯಾಯಾಲಯಗಳು ಪರಿವರ್ತಿಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಹೂಡಿಕೆಗೆ ಸಂಬಂಧಿಸಿದಂತೆ ಮೊಹಾಲಿಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ, ₹4 ಕೋಟಿ ಭದ್ರತಾ ಠೇವಣಿ ಇರಿಸುವ ಷರತ್ತಿನ ಮೇಲೆ ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರ ಪೀಠವು ರದ್ದುಗೊಳಿಸಿದೆ.
‘ಹಣವನ್ನು ಠೇವಣಿ ಇಟ್ಟು ಸ್ವಾತಂತ್ರ್ಯವನ್ನು ಪಡೆದುಕೊಳ್ಳಬಹುದು ಎಂಬ ಭಾವನೆ ಇಂಥ ಆದೇಶಗಳಿಂದ ಮೂಡುತ್ತದೆ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.
‘ತನಿಖಾಧಿಕಾರಿ ಹಾಗೂ ನ್ಯಾಯಾಲಯದ ಮುಂದೆ ಆರೋಪಿಯು ಹಾಜರಾಗಲು ಅಗತ್ಯವಿರುವ ನ್ಯಾಯಯುತ ಮತ್ತು ಪರಿಣಾಮಕಾರಿ ಷರತ್ತುಗಳನ್ನು ಮಾತ್ರ ನ್ಯಾಯಾಲಯಗಳು ವಿಧಿಸಬೇಕು. ಜಾಮೀನಿನ ಉದ್ದೇಶವನ್ನೇ ವಿಫಲಗೊಳಿಸುವಂಥ ಅತಿಯಾದ, ಕಠಿಣ ಷರತ್ತುಗಳು ಸ್ವೀಕಾರಾರ್ಹವಲ್ಲ’ ಎಂದು ತಿಳಿಸಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260803-51-1877890582