
ಮೈಸೂರು ದಸರಾದಲ್ಲಿ ಕಂಬಳ ಕೈಬಿಡುವಂತೆ ಸಿದ್ದರಾಮಯ್ಯಗೆ ಮನವಿ
ಮೈಸೂರು: ದಸರಾದಲ್ಲಿ ಕಂಬಳ ಕ್ರೀಡೆ ಆಯೋಜನೆ ಕೈಬಿಡುವಂತೆ ಆಗ್ರಹಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದ ನಿಯೋಗವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಬೆಂಗಳೂರಿನಲ್ಲಿ ಒತ್ತಾಯಿಸಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡುವಂತೆ ಕೋರಿತು.
ಮೈಸೂರು ದಸರಾ ಐತಿಹಾಸಿಕ ಹಿನ್ನೆಲೆ, ಭವ್ಯ ಪರಂಪರೆ, ಸಾಂಸ್ಕೃತಿಕ ವೈಶಿಷ್ಟ್ಯಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಹೊಂದಿದೆ. ಈಚೆಗೆ ಯುವದಸರಾ, ಯುವ ಸಂಭ್ರಮ, ಮಹಿಳಾ ದಸರಾ, ಮಕ್ಕಳ ದಸರಾ, ರೈತ ದಸರಾ ಸೇರ್ಪಡೆಯಾಗಿ ನಗರದಲ್ಲಿ ವಿಪರೀತ ಜನದಟ್ಟಣೆ, ಟ್ರಾಫಿಕ್ ಜಾಮ್, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಸದ ರಾಶಿ ಜನರಲ್ಲಿ ರೇಜಿಗೆ ಹುಟ್ಟಿಸುತ್ತಿವೆ. ಹೀಗಿರುವಾಗ, ಅಪಾರ ಸಂಖ್ಯೆಯಲ್ಲಿ ಜನರು ಸೇರುವ ಕಂಬಳ ಆಯೋಜನೆ ನಿರ್ಧಾರವು ಮೈಸೂರಿನ ಲಕ್ಷಾಂತರ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ಮೂಡಿಸಿದೆ ಎಂದು ತಿಳಿಸಿತು.
ಕರಾವಳಿ ಪ್ರದೇಶದಿಂದ ಕಂಬಳವನ್ನು ಮೈಸೂರಿಗೆ ಹೇರುವುದು ಸರಿಯಲ್ಲ. ಜನರಿಂದಲೂ ವಿರೋಧವಿದ್ದು, ಇದಕ್ಕೆ ಮನ್ನಣೆ ನೀಡಬೇಕು ಎಂದು ಕೋರಿತು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿ ಭೀಕರ ಬರಗಾಲ ಆವರಿಸಿದೆ. ಕೆಲವು ಜಿಲ್ಲೆಗಳಲ್ಲಿ ರೈತರು ಬಿತ್ತನೆಯನ್ನೇ ಮಾಡಲು ಆಗಿಲ್ಲ. ಬಿತ್ತದ್ದು ಒಣಗಿ ಹೋಗಿದೆ. ಕಾವೇರಿ ಜಲ ವಿವಾದ ಉಲ್ಬಣಗೊಳ್ಳುತ್ತಿದೆ. ಅನ್ನದಾತ ತೀವ್ರ ಸಂಕಷ್ಟದಲ್ಲಿರುವಾಗ ಅನಗತ್ಯ ಖರ್ಚು ಮಾಡಿ ಕಂಬಳ ಆಯೋಜನೆ ಮಾಡುವುದು ತಪ್ಪು ಎಂದು ನಿಯೋಗದವರು ತಿಳಿಸಿದರು.
ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂದ ಮುಖಂಡರಾದ ಇಂದೂಧರ ಹೊನ್ನಾಪುರ ಮತ್ತು ಗುರುಪ್ರಸಾದ್ ಕೆರಗೋಡು, ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ, ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಕಾಳಚನ್ನೇಗೌಡ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-39-1376739946