
ಆಲಮಟ್ಟಿಯಲ್ಲಿ ಐದು ಲಕ್ಷ ಸಸಿ ವಿತರಣೆಗೆ ಸಜ್ಜು, ರೈತರಿಗೆ ಪಹಣಿ ಪತ್ರ ಕಡ್ಡಾಯ
ಆಲಮಟ್ಟಿ: ಉತ್ಕೃಷ್ಟ ಗುಣಮಟ್ಟದ 205 ವಿವಿಧ ಜಾತಿಯ ಐದು ಲಕ್ಷ ಸಸಿಗಳ ವಿತರಣೆಗೆ ಆಲಮಟ್ಟಿಯ ಕೆಬಿಜೆಎನ್ಎಲ್ ಅರಣ್ಯ ಇಲಾಖೆ ಸಜ್ಜಾಗಿದೆ.
ಆ.15ರಂದು ವಿಜಯಪುರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಬಸವನಬಾಗೇವಾಡಿಯಲ್ಲಿ ಶಾಸಕ ಶಿವಾನಂದ ಪಾಟೀಲ ಅವರು ಸಾಂಕೇತಿಕವಾಗಿ ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಆ.16ರಿಂದ ಆಲಮಟ್ಟಿ ಡ್ಯಾಂಸೈಟ್ನ ಮೂರು ನರ್ಸರಿಗಳು, ರಾಯಚೂರು ಜಿಲ್ಲೆಯ ರೋಡಲಬಂಡಾದ ಹಿರೇಜಾವೂರ ಬಳಿಯ ನರ್ಸರಿ ಹಾಗೂ ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮದ ನರ್ಸರಿಗಳಲ್ಲಿ ರೈತರಿಗೆ ಸಸಿಗಳನ್ನು ವಿತರಿಸಲಾಗುವುದು ಎಂದು ಆಲಮಟ್ಟಿ ಕೆಬಿಜೆಎನ್ಎಲ್ ಅರಣ್ಯ ವಿಭಾಗದ ಡಿಎಫ್ಒ ಎನ್.ಕೆ. ಬಾಗಾಯತ್ ತಿಳಿಸಿದರು.
ಆಲಮಟ್ಟಿಯಲ್ಲಿ ಮೂರು ನರ್ಸರಿಗಳಿದ್ದು, ರೈತರ ಸಂಖ್ಯೆ ಹೆಚ್ಚಾದಲ್ಲಿ ಟೋಕನ್ ವ್ಯವಸ್ಥೆ ಮಾಡಲಾಗುವುದು. ಸಸಿ ಪಡೆಯಲು ರೈತರು ಜಮೀನಿನ ಪಹಣಿ ಪತ್ರ, ಆಧಾರ್ ಕಾರ್ಡ್ ಹಾಗೂ ಜಿಪಿಎಸ್ ರೀಡಿಂಗ್ ಸಲ್ಲಿಸುವುದು ಕಡ್ಡಾಯವಾಗಿದೆ.
ಸಸಿಗಳ ಗಾತ್ರ ಮತ್ತು ಜಾತಿಗೆ ಅನುಗುಣವಾಗಿ ₹3ರಿಂದ ₹750ರ ವರೆಗೆ ದರ ನಿಗದಿಪಡಿಸಲಾಗಿದೆ.
ಸಚಿವ ಎಂ.ಬಿ. ಪಾಟೀಲರ ಪರಿಕಲ್ಪನೆಯ ಕೋಟಿ ವೃಕ್ಷ ಅಭಿಯಾನದಡಿ 2015ರಿಂದ ಪ್ರತಿವರ್ಷ 10 ಲಕ್ಷ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸುವ ಪರಂಪರೆ ಆರಂಭವಾಗಿತ್ತು. ಆದರೆ, 2024 ಮತ್ತು 2025ರಲ್ಲಿ ಮಾತ್ರ ಸಸಿ ಬೆಳೆಸುವಿಕೆ ನಡೆದಿರಲಿಲ್ಲ.
ಈ ಬಾರಿ ಅರಣ್ಯ ಸಸಿಗಳ ಜತೆಗೆ ಹಣ್ಣು, ಅಲಂಕಾರಿಕ, ಔಷಧೀಯ, ತೋಟಗಾರಿಕೆ, ಕೃಷಿ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸಸಿಗಳು ಸೇರಿದಂತೆ 205 ಜಾತಿಯ ಗುಣಮಟ್ಟದ, ರೋಗಾಣುರಹಿತ ಸಸಿಗಳನ್ನು ಬೆಳೆಸಲಾಗಿದೆ. ಇದರಿಂದ ಸಸಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಆರ್ಎಫ್ಒ ಮಹೇಶ ಪಾಟೀಲ ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ನರ್ಸರಿಗಳು
lಆಲಮಟ್ಟಿ ಡ್ಯಾಂಸೈಟ್ ನರ್ಸರಿ, ಸತೀಶ ಗಲಗಲಿ 9916604399
lಆಲಮಟ್ಟಿ ಎ.ಎಲ್.ಬಿ.ಸಿ. ನರ್ಸರಿ, ಮಹೇಶ ಧೂಳಖೇಡ 9900582812
lಆಲಮಟ್ಟಿ ಎಂ.ಡಿ.ಎಫ್. ನರ್ಸರಿ, ನಾಗಪ್ಪ ಎಚ್.9844453597
lಬೀಳಗಿ ಕುಂದರಗಿ ನರ್ಸರಿ, ರಾಜಶೇಖರ ಲಮಾಣಿ 9686885751
lರೋಡಲಬಂಡಾ ಬಸವಸಾಗರ ನರ್ಸರಿ,ಯಶವಂತ ರಾಠೋಡ 9008449830
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260815-26-343577288