
ಕಾರವಾರದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ
ಕಾರವಾರ: ಜಿಲ್ಲೆಯ ಜನರ ಬಹುಬೇಡಿಕೆಯ ‘ಸೂಪರ್ ಸ್ಪೆಶಾಲಿಟಿ’ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಡಿ ಇಟ್ಟಿದ್ದು, ಕಟ್ಟಡ ನಿರ್ಮಾಣದ ಜೊತೆಗೆ ಮೂಲಸೌಕರ್ಯ ಒದಗಿಸಲು ಹರಾಜು ಪ್ರಕ್ರಿಯೆ ಕೈಗೊಂಡಿದೆ.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಆವರಣದಲ್ಲಿಯೇ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಸ್ಥಾಪನೆಗೆ ₹76.34 ಕೋಟಿ ಮೊತ್ತಕ್ಕೆ ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗವು ಹರಾಜು ಕರೆದಿದೆ. ಇದೇ 31ಕ್ಕೆ ಪ್ರಕ್ರಿಯೆ ಕೊನೆಗೊಳ್ಳಲಿದೆ.
ಜಿಲ್ಲಾಕೇಂದ್ರ ಕಾರವಾರದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ₹100 ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ಮಾರ್ಚ್ನಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಆಸ್ಪತ್ರೆ ಸ್ಥಾಪನೆ ಯೋಜನೆಗೆ ಮೇ ತಿಂಗಳಿನಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ರಾಜ್ಯ ಸರ್ಕಾರ ನೀಡಿತ್ತು.
‘ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಈ ಹಿಂದಿನ ಜಿಲ್ಲಾಸ್ಪತ್ರೆ ಇರುವ ಜಾಗ ಗುರುತಿಸಲಾಗಿದೆ. ಅಲ್ಲಿನ ಕಟ್ಟಡ ಹಳೆಯದಾಗಿದ್ದು, ಅದನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಈಗಾಗಲೆ ವರದಿ ನೀಡಿದೆ. ಅದರ ಆಧಾರದಲ್ಲಿ ಕಟ್ಟಡ ತೆರವಿಗೆ ಅನುಮತಿ ಕೋರಿ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಹರಾಜು ಪಡೆಯುವವರೇ ಹಳೆಯ ಕಟ್ಟಡ ತೆರವುಗೊಳಿಸುವ ಗುತ್ತಿಗೆ ಪಡೆಯುವ ಸಾಧ್ಯತೆ ಇರಬಹುದು’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ ತಿಳಿಸಿದರು.
‘ಹಳೆಯ ಕಟ್ಟಡದಲ್ಲಿನ ಎಲ್ಲ ವಿಭಾಗಗಳನ್ನು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ರಕ್ತನಿಧಿ ಕೇಂದ್ರ ಮಾತ್ರ ಹಳೆಯ ಕಟ್ಟಡದಲ್ಲಿದೆ. ಕೇಂದ್ರವನ್ನು ಸ್ಥಳಾಂತರಿಸಲು ಹೊಸ ಕಟ್ಟಡದ ಮೊದಲ ಮಹಡಿಯಲ್ಲಿ ಜಾಗ ಮೀಸಲಿಡಲಾಗಿದೆ. ಸದ್ಯದಲ್ಲಿಯೇ ರಕ್ತನಿಧಿ ಕೇಂದ್ರವೂ ಸ್ಥಳಾಂತರಗೊಳ್ಳಲಿದೆ’ ಎಂದರು.
‘ಆಸ್ಪತ್ರೆಗೆ ಕಟ್ಟಡ, ಸೌಕರ್ಯಗಳ ಅಳವಡಿಕೆ ಕೆಲ ವರ್ಷಗಳಲ್ಲಿ ಪೂರ್ಣಗೊಳ್ಳಬಹುದು. ಆದರೆ, ಸೂಪರ್ ಸ್ಪೆಶಾಲಿಟಿ ಸೇವೆಗೆ ವೈದ್ಯರನ್ನು ನೇಮಕಗೊಳಿಸುವುದೇ ದೊಡ್ಡ ಸವಾಲಾಗಬಹುದು’ ಎಂದು ಹಿರಿಯ ವೈದ್ಯರೊಬ್ಬರು ಹೇಳಿದರು.
‘ಎಂಆರ್ಐ’ ಸೌಲಭ್ಯ ಆರಂಭ ಶೀಘ್ರ
‘ಎಂಆರ್ಐ ಸ್ಕ್ಯಾನಿಂಗ್ ಯಂತ್ರ ಅಳವಡಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅದರ ಟೆಲಿ ವರದಿ ನಿರ್ವಹಣೆಯ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. ಯಂತ್ರಗಳ ನಿರ್ವಹಣೆಗೆ ಸಿಬ್ಬಂದಿ ನೇಮಕವಾಗಿದ್ದಾರೆ. ಕೆಲವು ದಿನಗಳಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಆರಂಭಗೊಳ್ಳಲಿದೆ’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಇಲ್ಲ ಎಂಬ ಕೊರಗು ಹಲವು ವರ್ಷಗಳಿಂದ ಇತ್ತು. ನೆರೆಯ ಉಡುಪಿ, ಹುಬ್ಬಳ್ಳಿಗೆ ಜನರು ಈ ಸೌಲಭ್ಯ ಅರಸಿ ತೆರಳುತ್ತಿದ್ದರು.