
ಶಿರಸಿ: ಹೆದ್ದಾರಿಯುದ್ದಕ್ಕೂ ಹೊಂಡಗುಂಡಿ; ಸುಗಮ ಸಂಚಾರಕ್ಕೆ ಅಡ್ಡಿ
ಶಿರಸಿ: ನಗರದ ಕೋಟೆಕೆರೆ ಸಮೀಪ ಹಾದು ಹೋಗಿರುವ ಹೆದ್ದಾರಿಯ ಕರಿಗುಂಡಿ ವೃತ್ತದಲ್ಲಿ ಮಳೆನೀರು ನಿಂತು ದೊಡ್ಡ ಗಾತ್ರದ ಹೊಂಡಗಳು ಬಿದ್ದಿವೆ.
ಶಿರಸಿಯಿಂದ ಹುಬ್ಬಳ್ಳಿ, ಹಾವೇರಿ ಸಂಪರ್ಕ ಮಾರ್ಗ ಇದಾಗಿದ್ದು, ಸಾಗರಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಬೇಕಿದೆ. ಆದರೆ ಕಾಮಗಾರಿ ಮಾತ್ರ ಈವರೆಗೂ ನಡೆದಿಲ್ಲ. ನಿರ್ವಹಣೆಯನ್ನೂ ನಡೆಸಿಲ್ಲ ಎಂಬುದು ಜನರ ದೂರು.
ಮಳೆಗಾಲ ಆರಂಭವಾಗುತ್ತಿದ್ದಂತೆ ಹೆದ್ದಾರಿಯ ಕರಿಗುಂಡಿ ಮಾರ್ಗದ ವೃತ್ತದಲ್ಲಿ ಮಳೆನೀರು ನಿಲ್ಲುತ್ತಿದೆ. ಈಚೆಗೆ ಸುರಿದ ಅಬ್ಬರದ ಮಳೆಯಿಂದಾಗಿ ಮೇಲ್ಭಾಗದ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆ ಬದಿಯ ರಾಜಕಾಲುವೆಯನ್ನು ಮುಚ್ಚಿದೆ. ರಸ್ತೆ ತಗ್ಗಿನಲ್ಲಿ ಇರುವುದರಿಂದ ನೀರು ಹರಿದುಹೋಗದೆ ಹೊಂಡಗಳು ನಿರ್ಮಾಣವಾಗಿವೆ ಎಂಬುದು ಜನರ ದೂರು.
‘ಸಾಲು ಸಾಲು ಹೊಂಡಗಳಿಂದ ವಾಹನಗಳು ಸಂಚರಿಸಲು ಅಡ್ಡಿಯಾಗುತ್ತಿದೆ. ಬೈಕ್ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ರಸ್ತೆ ಬದಿಯಲ್ಲಿ ನಡೆದು ಹೋಗುವಾಗ ವೇಗವಾಗಿ ಬರುವ ಭಾರಿ ವಾಹನಗಳು ಈ ಹೊಂಡಗಳಲ್ಲಿ ಹೋದಾಗ, ರಸ್ತೆಯಲ್ಲಿದ್ದ ಕೆಸರು ನೀರು ಪಾದಚಾರಿಗಳ ಮೇಲೆ ಚಿಮ್ಮಿ ಬಟ್ಟೆಗಳು ಹಾಳಾಗುತ್ತಿವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಪವಿತ್ರಾ ನಾಯ್ಕ.
‘ಕೆಲವು ವರ್ಷಗಳ ಹಿಂದೆಯೇ ಲೋಕೋಪಯೋಗಿ ಇಲಾಖೆಯಿಂದ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಗೊಂಡಿದೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದಲ್ಲ’ ಎಂಬುದಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ರಸ್ತೆಯತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಇಲಾಖೆಗಳ ನಡುವಿನ ಈ ಜಟಾಪಟಿಯಿಂದಾಗಿ ನಗರಸಭೆಯೂ ಕಾಮಗಾರಿ ನಡೆಸುತ್ತಿಲ್ಲ’ ಎಂಬುದು ಸಾರ್ವಜನಿಕರ ದೂರಾಗಿದೆ.
‘ಶಿರಸಿ-ಹಾವೇರಿ ಹೆದ್ದಾರಿ ಅವ್ಯವಸ್ಥೆಯು ನಗರದೊಳಗೂ ವ್ಯಾಪಿಸಿದೆ. ಆಡಳಿತದ ಧೋರಣೆಗೆ ಬೇಸತ್ತ ಸಾರ್ವಜನಿಕರು, ಅಪಾಯದ ಮುನ್ನೆಚ್ಚರಿಕೆಯಾಗಿ ಹೊಂಡದಲ್ಲೇ ಗಿಡ ನೆಟ್ಟು ವಿನೂತನವಾಗಿ ಪ್ರತಿಭಟನೆಗೆ ಮುಂದಾಗಿದ್ದು, ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ರಸ್ತೆ ನಿರ್ವಹಣೆಯನ್ನಾದರೂ ಕೈಗೊಳ್ಳಬೇಕು’ ಎನ್ನುತ್ತಾರೆ ಸ್ಥಳೀಯ ವಿಷ್ಣುಕಾಂತ ಗೌಡ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-20-722030726