
ಕಲಬುರಗಿ: ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಮುಂದುವರಿದ ಬಿಜೆಪಿ ಧರಣಿ
ಕಲಬುರಗಿ: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಆರಂಭಿಸಿರುವ ಧರಣಿ ಸತ್ಯಾಗ್ರಹವು ಮಂಗಳವಾರವೂ ಮುಂದುವರಿದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಹಮ್ಮಿಕೊಂಡಿರುವ ಧರಣಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.
'ಭ್ರಷ್ಟ ಮಂತ್ರಿಯನ್ನು ಸಂಪುಟದಿಂದ ವಜಾ ಮಾಡಲೇಬೇಕು. ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು. ಶುದ್ಧ ಹಸ್ತವುಳ್ಳ ಬೇರೆ ಪರಿಶಿಷ್ಟ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು' ಎಂದು ಪ್ರತಿಭಟನಕಾರರು ಆಗ್ರಹಿಸಿದರು.
'ಬಿ.ನಾಗೇಂದ್ರ ಎಷ್ಟು ಬೇಗ ರಾಜೀನಾಮೆ ಕೊಡುತ್ತಾರೋ ಅಷ್ಟೇ ಕಾಂಗ್ರೆಸ್ ಗೆ ಒಳ್ಳೆಯದು. ಒಂದೊಮ್ಮೆ ನಾಗೇಂದ್ರ ರಾಜೀನಾಮೆ ನೀಡದಿದ್ದರೆ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು' ಎಂದು ಎಚ್ಚರಿಸಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಕಮಲಾಪುರ ಮಾತನಾಡಿ, 'ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪ ಬಂದಿದ್ದಕ್ಕಾಗಿಯೇ ಈ ಹಿಂದೆ ನಾಗೇಂದ್ರ ಸಚಿವ ಸ್ಥಾನ ತ್ಯಜಿಸಿದ್ದರು. ಇದೀಗ ಆರೋಪ ಮುಕ್ತರಾಗುವ ಮುನ್ನವೇ ಮತ್ತೆ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೀರಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಅಂಥ ತುರ್ತು ಏನಿತ್ತು? ಹಗರಣದಲ್ಲಿ ಪಾಲು ಹೊಂದಿರುವವ ಪಟ್ಟಿ ಬಹಿರಂಗಪಡಿಸುವ ಹೆದರಿಕೆಯಿಂದ ಅವರಿಗೆ ಸಚಿವ ಸ್ಥಾನ ನೀಡಲಾಗಿದೆಯೇ?' ಎಂದು ಪ್ರಶ್ನಿಸಿದರು.
'ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಸರ್ಕಾರ ಬರೀ ಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿದೆ. ಅದಕ್ಕಾಗಿ ಪರಿಶಿಷ್ಟರ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂದು ಟೀಕಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಕೆಕೆಸಿಸಿಐ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ, ಸಂತೋಷ ಹಾದಿಮನಿ, ರಾಣೋಜಿ ದೊಡ್ಡಮನಿ, ಶಿವಯೋಗಿ ನಾಗನಹಳ್ಳಿ, ಬಸವರಾಜಬೆಣ್ಣೂರ, ಲಿಂಗಾರಾಜ ಬಿರಾದಾರ, ಶೋಭಾ ಬಾಣಿ, ಶಶಿಕಲಾ ಟೆಂಗಳಿ, ನಂದಾ, ಜಯಶ್ರೀ, ಬಸವರಾಜ ಮದ್ದರಕಿ, ಶಿವರಾಜ ಪಾಟೀಲ ರದ್ದೇವಾಡಗಿ, ನಾಗರಾಜ ಮಹಾಗಾಂವಕರ, ಅಣವೀರ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.