
ತೀರ್ಥಹಳ್ಳಿ: ಪ್ರಧಾನಿ ಭಾವಚಿತ್ರಕ್ಕೆ ಸ್ಟಿಕ್ಕರ್; ಬಿಜೆಪಿ ದೂರು
ತೀರ್ಥಹಳ್ಳಿ: ‘ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಮೇಲೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲ್ಲೆ ಮಾಡಿಸಿದೆ. ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸುವ ಕುತಂತ್ರ ನಡೆಸುತ್ತಿದೆ’ ಎಂದು ಆರೋಪಿಸಿ ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಪ್ರಧಾನಿ ಭಾವಚಿತ್ರಕ್ಕೆ ಸ್ಟಿಕ್ಕರ್ ಅಂಟಿಸಲಾಯಿತು.
‘22 ಲಕ್ಷ ವಿದ್ಯಾರ್ಥಿಗಳ ಬದುಕಿನ ಮೇಲೆ ಕೇಂದ್ರ ಸರ್ಕಾರ ಚೆಲ್ಲಾಟ ಆಡಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ ಒತ್ತಾಯಿಸಿದ್ದರು. ಈ ಸಂದರ್ಭ ವಿದ್ಯಾರ್ಥಿಗಳ ಮೇಲೆ ಗನ್ ಪ್ರಯೋಗಿಸಿ ಹತ್ತಿಕ್ಕುವ ಪ್ರಯತ್ನ ನಡೆಸಲಾಗಿದೆ. ಇದು ಸಂವಿಧಾನ ವಿರೋಧಿ ಧೋರಣೆಯಾಗಿದೆ. ಹಾಗಾಗಿ ಪ್ರಧಾನಿ ಭಾವಚಿತ್ರಕ್ಕೆ ಸ್ಟಿಕ್ಕರ್ ಅಂಟಿಸುತ್ತಿದ್ದೇವೆ’ ಎಂದು ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣೇಶ್ ಕೆಳಕೆರೆ, ಶ್ರೇಯಸ್ ರಾವ್ ಇತರರು ದೂರಿದರು.
ಬಿಜೆಪಿ ದೂರು: ‘ದೇಶದ ಅತ್ಯುನ್ನತ ಸಂವಿಧಾನಿಕ ಹುದ್ದೆಯಾಗಿರುವ ಪ್ರಧಾನ ಮಂತ್ರಿಗೆ ಯುವ ಕಾಂಗ್ರೆಸ್ ಅವಮಾನ ಮಾಡಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ್ ದೇವಾಡಿಗ ನೇತೃತ್ವದಲ್ಲಿ ಗುರುವಾರ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದರು.