
ನಾವು ‘ಎಬಿವಿಪಿ’ಯೊಂದಿಗೆ ಎಂದಿಗೂ ಗುರುತಿಸಿಕೊಂಡಿಲ್ಲ: ಬಿಜೆಪಿ ಶಾಸಕಿ
ಕೋಲ್ಕತ್ತ: ಜಾಧವ್ಪುರ ವಿಶ್ವವಿದ್ಯಾಲಯದಲ್ಲಿ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಎಬಿವಿಪಿ ಸದಸ್ಯರನ್ನು ಉತ್ತೇಜಿಸಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕಿ ಸರ್ಬರಿ ಮುಖರ್ಜಿ, ನಾನೂ ಎಂದಿಗೂ ಆ ಕ್ಯಾಂಪಸ್ನೊಳಕ್ಕೆ ಕಾಲಿಟ್ಟಿಲ್ಲ ಎಂದು ಹೇಳಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಸದಸ್ಯರ ನಡುವೆ ಗುರುವಾರ(ಆ.20) ಜರುಗಿದ ಗಲಾಟೆಯ ವೇಳೆ ಹಲವರು ಗಾಯಗೊಂಡಿದ್ದರು. ಇದರಲ್ಲಿ ಬಿಜೆಪಿ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು.
ಈ ಘಟನೆಯಲ್ಲಿ ತಮ್ಮ ಪಾತ್ರವಿದೆಯೆಂಬ ಆರೋಪವನ್ನು ನಿರಾಕರಿಸಿರುವ ಜಾಧವ್ಪುರ ಶಾಸಕಿ ಸರ್ಬರಿ ಮುಖರ್ಜಿ, ಗಲಾಟೆಯ ವೇಳೆ ಎಬಿವಿಪಿ ಸದಸ್ಯರೊಬ್ಬರು ಗಾಯಗೊಂಡ ನಂತರ ಎಸ್ಎಫ್ಐ ಮತ್ತು ಆರ್ಎಸ್ಎಫ್ ಸಂಘಟನೆಗಳು ಎಬಿವಿಪಿ ಕಾರ್ಯಕರ್ತರನ್ನು ಕ್ಯಾಂಪಸ್ಗೆ ಪ್ರವೇಶಿಸುವಂತೆ ಪ್ರಚೋದಿಸಿದವು ಎಂದು ಆರೋಪಿಸಿದ್ದಾರೆ.
‘ನಾನು ಆ ಸ್ಥಳದಲ್ಲೇ ಇರಲಿಲ್ಲ, ಇನ್ನೂ ಕ್ಯಾಂಪಸ್ನೊಳಗೆ ಹೇಗೆ ಪ್ರವೇಶಿಸಲಿ?. ಘಟನೆಯ ನಂತರ ಪೊಲೀಸ್ ಠಾಣೆಯ ಎದುರು ಬಿಜೆಪಿ ಯುವಕರು ನಡೆಸಿದ ಶಾಂತಿಯುತ ಪ್ರತಿಭಟನೆಯಲ್ಲಿ ಮಾತ್ರ ನಾನು ಭಾಗವಹಿಸಿದ್ದೆ. ನಂತರ ನಾನು ಅಲ್ಲಿಂದ ತೆರಳಿದ್ದೆ’ ಎಂದು ಹೇಳಿದ್ದಾರೆ.
ಬಿಜೆಪಿಯು ಎಂದಿಗೂ ‘ಎಬಿವಿಪಿ’ಯೊಂದಿಗೆ ಗುರುತಿಸಿಕೊಂಡಿಲ್ಲ. ನಾನು ಅವರ ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿಲ್ಲ. ಈ ಘಟನೆಯ ವೇಳೆ ನಾನು ಅಲ್ಲಿ ಇರಲಿಲ್ಲ ಎನ್ನುವುದನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪರಿಶೀಲಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಬಿಜೆಪಿಯು ಆರ್ಎಸ್ಎಸ್ ಬೆಂಬಲಿತ ಎಬಿವಿಪಿಯೊಂದಿಗೆ ಅಂತರ ಕಾಯ್ದುಕೊಂಡಿದೆ. ಅದು ನಮ್ಮ ಪಕ್ಷದ ವಿದ್ಯಾರ್ಥಿ ಸಂಘಟನೆಯಲ್ಲ. ಅದು ರಾಷ್ಟ್ರೀಯತೆ ಹೊಂದಿರುವ ವಿದ್ಯಾರ್ಥಿಗಳ ಸ್ವತಂತ್ರ ಸಂಘಟನೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.