
ಉಮರ್ ಖಾಲಿದ್ ಪುಸ್ತಕ ಕುರಿತ ಚರ್ಚೆಗೆ ಸಭಾಂಗಣ ಬುಕಿಂಗ್ ರದ್ದುಗೊಳಿಸಿದ ಜೆಎನ್ಯು
ನವದೆಹಲಿ: ಉಮರ್ ಖಾಲಿದ್ ಬರೆದಿರುವ 'ಫ್ರ್ಯಾಕ್ಚರ್ಡ್ ಕಮ್ಯುನಿಟೀಸ್: ಆದಿವಾಸಿ ಹಿಸ್ಟರೀಸ್ ಅಂಡ್ ದಿ ಪಾಲಿಟಿಕ್ಸ್ ಆಫ್ ಪವರ್' ಪುಸ್ತಕದ ಕುರಿತು ಸೋಮವಾರ(ಆ.10) ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ನಡೆಯಬೇಕಿದ್ದ ಸಂವಾದ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ವಿದ್ಯಾರ್ಥಿ ಒಕ್ಕೂಟ ತಿಳಿಸಿದೆ.
ಜೆಎನ್ಯುನ ಮಾಜಿ ವಿದ್ಯಾರ್ಥಿ ಖಾಲಿದ್ ಬರೆದಿರುವ ಪುಸ್ತಕದ ಕುರಿತ ಚರ್ಚೆ ರದ್ದಾಗಿಲ್ಲ, ಆ ಕಾರ್ಯಕ್ರಮ ನಡೆಯಲಿದೆ. ಇದು ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್ನ ಸಭಾಂಗಣದಲ್ಲಿ ನಡೆಯಬೇಕಿತ್ತು, ಆದರೆ ಈಗ ಆ ಸ್ಥಳದ ಬುಕಿಂಗ್ ರದ್ದುಗೊಳಿಸಲಾಗಿದೆ. ಕಾರ್ಯಕ್ರಮವು ಮತ್ತೊಂದು ಸ್ಥಳದಲ್ಲಿ ನಡೆಯಲಿದೆ ಎಂದು ಜೆಎನ್ಯು ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
ಸಭಾಂಗಣದ ಬುಕಿಂಗ್ ರದ್ದುಗೊಳಿಸಲು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಲಾಗಿಲ್ಲ. ಕಾರ್ಯಕ್ರಮಕ್ಕೆ ಪರ್ಯಾಯ ಸ್ಥಳವನ್ನು ಪ್ರತ್ಯೇಕವಾಗಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಶ್ವ ಆದಿವಾಸಿಗಳ ಅಂತರರಾಷ್ಟ್ರೀಯ ದಿನದ ಅಂಗವಾಗಿ ಜೆಎನ್ಯುಎಸ್ಯು ಆಯೋಜಿಸಿದ್ದ ಈ ಕಾರ್ಯಕ್ರಮವು ಆ.10ರಂದು ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್ ಸಭಾಂಗಣದಲ್ಲಿ ನಿಗದಿಯಾಗಿತ್ತು. ಕಾರ್ಯಕ್ರಮದ ಪೋಸ್ಟರ್ ಪ್ರಕಾರ, ಈ ಸಂವಾದದಲ್ಲಿ ಪ್ರೊಫೆಸರ್ಗಳಾದ ಪ್ರಭು ಮಹಾಪಾತ್ರ ಮತ್ತು ಉಮಾ ಚಕ್ರವರ್ತಿ, ಬರಹಗಾರ ಹಾಗೂ ಪತ್ರಕರ್ತ ಶುದ್ಧಬ್ರತ ಸೆನ್ಗುಪ್ತಾ, ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಮತ್ತು ಬಾನೋಜ್ಯೋತ್ಸ್ನಾ ಲಾಹಿರಿ ಭಾಗವಹಿಸಲಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮತ್ತು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರು 2020ರ ಈಶಾನ್ಯ ದೆಹಲಿ ಗಲಭೆಯ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯಡಿ(ಯುಎಪಿಎ) 2020ರ ಸೆಪ್ಟೆಂಬರ್ನಿಂದ ಜೈಲಿನಲ್ಲಿದ್ದಾರೆ.