ಗಂಗಾವತಿ: ಸಾರ್ವಜನಿಕ ಶೌಚಾಲಯವಿಲ್ಲದೆ ಜನರ ಪರದಾಟ

ಗಂಗಾವತಿ: ಸಾರ್ವಜನಿಕ ಶೌಚಾಲಯವಿಲ್ಲದೆ ಜನರ ಪರದಾಟ

ಗಂಗಾವತಿ: ಸಾರ್ವಜನಿಕ ಶೌಚಾಲಯವಿಲ್ಲದೆ ಜನರ ಪರದಾಟ

ಗಂಗಾವತಿ: ಭತ್ತದನಾಡು, ಹನುಮನನಾಡು, ಅಮೃತಸಿಟಿ ಎಂದೇ ಖ್ಯಾತಿ ಪಡೆದ ಗಂಗಾವತಿ ನಗರದ ಪ್ರಮುಖ ವೃತ್ತ ಸೇರಿ ಜನಜಂಗುಳಿ ಪ್ರದೇಶಗಳಲ್ಲಿ ನಗರಸಭೆ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸದ ಕಾರಣ ಜನರು ಮೂತ್ರ, ಶೌಚಕ್ಕೆ ಬಯಲನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಗಂಗಾವತಿ ನಗರ ತುಂಬ ವೇಗವಾಗಿ ಬೆಳೆಯುತ್ತಿದ್ದು, ನಗರದಲ್ಲಿ 1.20 ಲಕ್ಷ ಜನಸಂಖ್ಯೆ ಇದೆ. ಕೊಪ್ಪಳ ಜಿಲ್ಲೆಯಲ್ಲಿನ ಎಲ್ಲ ತಾಲ್ಲೂಕುಗಳ ಪೈಕಿ ಗಂಗಾವತಿ ಅತಿ ಹೆಚ್ಚು ವ್ಯಾಪಾರ–ವಹಿವಾಟು ನಡೆಯುವ ನಗರವಾಗಿದ್ದು, ಇಲ್ಲಿಗೆ ನಿತ್ಯ 20 ಸಾವಿರಕ್ಕೂ ಸಂಖ್ಯೆಯ ಜನರು ಭೇಟಿ ಕೊಡುತ್ತಾರೆ.

ಇಲ್ಲಿಗೆ ಬಂದ ನಂತರ ತುರ್ತಾಗಿ ಮೂತ್ರ ವಿಸರ್ಜನೆ, ಶೌಚಕ್ಕೆ ತೆರಳಬೇಕು ಎಂದರೆ ಸಾರ್ವಜನಿಕ ಶೌಚಾಲಯಗಳು ಕಾಣುವುದೇ ಇಲ್ಲ. ಒಂದೆರಡು ವೃತ್ತದಲ್ಲಿ ಶೌಚಾಲಯವಿದ್ದರೂ, ಅದರ ನಿರ್ವಹಣೆ ಸರಿಯಾಗಿ ಇರುವುದಿಲ್ಲ. ಈ ಕಾರಣಕ್ಕೆ ಜನರು ನಗರಸಭೆ ವಿರುದ್ದ ನಿತ್ಯ ಹಿಡಿಶಾಪ ಹಾಕುತ್ತಾರೆ.

ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು ಎನ್ನುವ ಸರ್ಕಾರದ ಆದೇಶಕ್ಕೆ ನಗರಸಭೆ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಗಂಗಾವತಿ ನಗರದ ಗಾಂಧಿವೃತ್ತ, ಮಹಾವೀರ ವೃತ್ತ, ಸಿಬಿಎಸ್ ವೃತ್ತ ಸೇರಿ ಜುಲೈನಗರವು ವಿವಿಧ ರೀತಿಯ ವ್ಯಾಪಾರದ ಮಾರುಕಟ್ಟೆ ಹೊಂದಿದೆ.

‘ಈ ಸ್ಥಳಗಳಿಗೆ ಕಾರಟಗಿ, ಕನಕಗಿರಿ, ಕಂಪ್ಲಿ ತಾಲ್ಲೂಕು ಸೇರಿ ಕೊಪ್ಪಳ ತಾಲ್ಲೂಕಿ ಹಿಟ್ನಾಳ ಹೋಬಳಿ ವ್ಯಾಪ್ತಿಗೆ ಬರುವ ಗ್ರಾಮಗಳಿಂದಲೂ ಸಾವಿರಾರು ಸಂಖ್ಯೆ ಜನರು ಖರೀದಿಗಾಗಿ ಬರುತ್ತಾರೆ. ಮೂತ್ರ ಮತ್ತು ಶೌಚಕ್ಕೆ ಶೌಚಾಲಯಗಳು ಇಲ್ಲದ ಕಾರಣ ಜನರು ಗಾಂಧಿವೃತ್ತದಲ್ಲಿ ಡೈಲಿ ಮಾರುಕಟ್ಟೆಗೆ ಹೋಗುವ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ವ್ಯಾಪಾರಸ್ಥರು ಮೂತ್ರ ವಿಸರ್ಜನೆ ಜಾಗವಲ್ಲ ಎಂದರೂ ಜನರು ನಮ್ಮ ವಿರುದ್ಧ ಜಗಳ ಮಾಡುತ್ತಾರೆ’ ಎನ್ನುತ್ತಾರೆ ವ್ಯಾಪಾರಿ ರಾಮು.

ಇನ್ನೂ ಮಹಾವೀರ ವೃತ್ತದಲ್ಲಿ ಜನರು ಮೂತ್ರ ವಿಸರ್ಜನೆಗೆ ಚಂದ್ರಹಾಸ ಚಿತ್ರಮಂದಿರ ರಸ್ತೆ, ದುರ್ಗಮ್ಮಹಳ್ಳ ಎಸ್‌ಬಿಐ ಬ್ಯಾಂಕ್ ಬಳಿಯ ನಗರಸಭೆ ಪಾರ್ಕಿಂಗ್ ಸ್ಥಳದಲ್ಲಿ, ಓ.ಎಸ್.ಬಿ. ರಸ್ತೆಯಲ್ಲಿ ಹಳೆಯ ಸಂದೀಪ ಚಿತ್ರಮಂದಿರ ಬಳಿ, ಬಂಬೂಬಜಾರ್‌ಗೆ ಸಂಪರ್ಕ ಕಲ್ಪಿಸುವ ಕಬ್ಬಿಣದ ಸೇತುವೆ ಬಳಿ ಮೂತ್ರ ವಿಸರ್ಜನೆ ಮಾಡಿ, ಗಬ್ಬುನಾರುವಂತೆ ಮಾಡಿದ್ದಾರೆ. ಪುರುಷರೇನೋ ಬಯಲಿಗೆ ತೆರಳುತ್ತಾರೆ, ಮಹಿಳೆಯರು ಎಲ್ಲಿಗೆ ಹೋಗಬೇಕು ಎನ್ನುತ್ತಾರೆ ನಗರ ನಿವಾಸಿ ಆನಂದ್.

ಮೂತ್ರ, ಶೌಚ ಮಾಡಿದ ಬಯಲು ಸ್ಥಳಗಳು ರೋಗಗಳು ಹರಡುವ ತಾಣಗಳಾಗಿವೆ.

ಕೇಂದ್ರೀಯ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ ಹೊರತುಪಡಿಸಿ‌ ಎಲ್ಲಿಯೂ ಸಾರ್ವಜನಿಕ ಶೌಚಾಲಯಗಳಿಲ್ಲ. ಕನಕದಾಸ ವೃತ್ತ, ನೀಲ ಕಂಠೇಶ್ವರ ವೃತ್ತ, ಬಸವಣ್ಣ ವೃತ್ತ ಸೇವಾಲಾಲ್ ವೃತ್ತಗಳಲ್ಲಿ ಶೌಚಾಲಯಗಳೇ ಇಲ್ಲ. ಇಲ್ಲಿ ಸಹ ನಿವಾಸಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಖಾಲಿ ನಿವೇಶನ ಇಲ್ಲವೇ ಮುಳ್ಳುಕಂಟಿ ಸ್ಥಳದಲ್ಲಿ ನಿತ್ಯ ಕರ್ಮ ಮುಗಿಸಿ ಬರುತ್ತಾರೆ.

ಕ್ರೀಡಾಂಗಣದಲ್ಲೂ ಬಯಲಲ್ಲೇ ಮೂತ್ರ ವಿಸರ್ಜನೆ: ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿ ಯಾವುದೇ ಕಾರ್ಯಕ್ರಮ ನಡೆಯಲಿ ಸಮರ್ಪಕ ಶೌಚಾಲಯದ ವ್ಯವಸ್ಥೆಯಿಲ್ಲ. ಇದ್ದರೂ ದೂರದಲ್ಲಿ ಇರುವ ಕಾರಣ ಹೆಚ್ಚಿನ ಸಂಖ್ಯೆಯ ಜನರು ಬಳಕೆ ಮಾಡಲು ಸಾಧ್ಯವಿಲ್ಲಂದತಹ ಸ್ಥಿತಿ ಇಲ್ಲಿದೆ. ಹಾಗಾಗಿ ಯುವಕರು ಕ್ರೀಡಾಂಗಣ ಮತ್ತು ಅದರ ಸುತ್ತ, ಹೊರವಲಯದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಕ್ರೀಡಾಂಗಣದ ಮೂಲೆಗಳು ದುರ್ನಾತ ಬೀರುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-35-1767644843

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ