
ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿಗೆ ಮೊರೆ
ಕುರುಗೋಡು: ತಾಲ್ಲೂಕಿನಲ್ಲಿ ಮಳೆ ಅಭಾವ, ಅಂತರ್ಜಲ ಕುಸಿತ ಹಾಗೂ ಕಾಲುವೆ ನೀರು ಸಿಗದೆ ಮೆಣಸಿನಕಾಯಿ ಬೆಳೆ ಸಂಪೂರ್ಣ ಬಾಡುತ್ತಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಖಾಸಗಿ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.
ತಾಲ್ಲೂಕಿನ ದಮ್ಮೂರು, ಸಿಂಧಿಗೇರಿ, ಬೈಲೂರು ಹಾಗೂ ಕಲ್ಲುಕಂಭ ಗ್ರಾಮಗಳ ಕೊನೆಯ ಭಾಗದ (ಅಚ್ಚುಕಟ್ಟು) ರೈತರು ನೀರಿನ ತೀವ್ರ ಅಭಾವ ಎದುರಿಸುತ್ತಿದ್ದಾರೆ. ಒಟ್ಟು 9,430 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾದ ಮೆಣಸಿನಕಾಯಿ ಬೆಳೆ ಬೆಳೆಯುವ ಹಂತದಲ್ಲೇ ಸೊರಗಿ ಹೋಗುತ್ತಿದೆ.
ನೀರಿನ ತೀವ್ರ ಅಭಾವದ ಲಾಭ ಪಡೆಯುತ್ತಿರುವ ಟ್ರ್ಯಾಕ್ಟರ್ ಮತ್ತು ಟ್ಯಾಂಕರ್ ಮಾಲೀಕರು ದಿನಕ್ಕೆ ₹2,500 ಬಾಡಿಗೆ ನಿಗದಿಪಡಿಸಿದ್ದರೆ, ಬೋರ್ವೆಲ್ ಮಾಲೀಕರು ಒಂದು ಟ್ಯಾಂಕರ್ ನೀರಿಗೆ ₹300 ವಸೂಲಿ ಮಾಡುತ್ತಿದ್ದಾರೆ.
ಹನಿ ನೀರಾವರಿ ಇದ್ದರೆ ಒಂದು ಎಕರೆಗೆ ಕನಿಷ್ಠ 6 ಟ್ಯಾಂಕರ್ ಹಾಗೂ ನೇರ ನೀರಾವರಿಗೆ 10 ಟ್ಯಾಂಕರ್ ನೀರು ಬೇಕಾಗುತ್ತದೆ. ಈಗಾಗಲೇ ಎಕರೆಗೆ ₹25,000 ವೆಚ್ಚವಾಗಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಕಳೆದ ವರ್ಷ ಬ್ಯಾಡಗಿ ಮತ್ತು ಗುಂಟೂರು ತಳಿಗಳಿಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ ಪ್ರೇರಿತರಾದ ರೈತರು, ತೋಟಗಾರಿಕೆ ಇಲಾಖೆಯ ಸೂಚನೆಯನ್ನೂ ಮೀರಿ ಹೆಚ್ಚು ನೀರು ಬಯಸುವ ಮೆಣಸಿನಕಾಯಿ ಬೆಳೆದಿದ್ದಾರೆ.
ತಾಲ್ಲೂಕಿನ ಮೆಣಸಿನಕಾಯಿ ಬೆಳೆ ಅಂಕಿ-ಅಂಶ
ಒಟ್ಟು ಬೆಳೆಯುವ ಪ್ರದೇಶ: 17,540 ಹೆಕ್ಟೆರ್
ಪ್ರಸ್ತುತ ಬಿತ್ತನೆಯಾದ ಪ್ರದೇಶ: 9,430 ಹೆಕ್ಟೇರ್