
ಮನುಸ್ಮೃತಿ ಹೇಳಿಕೆ; ಮಹಿಳೆಯರನ್ನು ಎತ್ತಿಕಟ್ಟುವ ಕೆಲಸ: ರಾಹುಲ್ ವಿರುದ್ಧ ಯೋಗಿ
ಲಖನೌ: 'ಮನುಸ್ಮೃತಿ' ಕುರಿತು ಹೇಳಿಕೆ ನೀಡುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಮಹಿಳೆಯರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರವಾದ ರಾಯ್ಬರೇಲಿಯಲ್ಲಿ ಬಹು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಹುಲ್ ಗಾಂಧಿ ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರು ಇತ್ತೀಚಿನ ದಿನಗಳಲ್ಲಿ ನಮ್ಮ ಹೆಣ್ಣುಮಕ್ಕಳನ್ನು ಬೆದರಿಸುವ ಕೃತ್ಯದಲ್ಲಿ ತೊಡಗಿದ್ದಾರೆ. ಭಾರತದಲ್ಲಿ ಅನೇಕ ಸಂಪ್ರದಾಯಗಳಿವೆ, ಅವುಗಳನ್ನು ಜನರು ಅನುಸರಿಸಬಹುದು ಅಥವಾ ಬಿಡಬಹುದು. ಆದರೆ, ಯಾವುದೇ ಕಾರಣಕ್ಕೂ ಸತ್ಯಗಳನ್ನು ತಪ್ಪಾಗಿ ಪ್ರಚಾರ ಮಾಡಬಾರದು. ಮತ್ಸ್ಯ ಪುರಾಣ ಮತ್ತು ಮಹಾಭಾರತದಂತಹ ಅನೇಕ ಪ್ರಾಚೀನ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿರುವ ಮನುಸ್ಮೃತಿಯನ್ನು ಏಕೆ ಹಗುರವಾಗಿ ಕಾಣಬೇಕು? ಎಂದು ಯೋಗಿ ಪ್ರಶ್ನಿಸಿದರು.
ಇತ್ತೀಚೆಗೆ ಪುಣೆಯಲ್ಲಿ ನಡೆದ ‘ಛಾತ್ರೋ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ್ದ ರಾಹುಲ್ ಗಾಂಧಿ, ‘ಮನುಸ್ಮೃತಿಯ ಪ್ರಕಾರ ಮಹಿಳೆಯರು ಯಾವಾಗಲೂ ತಮ್ಮ ತಂದೆ, ಗಂಡ ಮತ್ತು ಮಕ್ಕಳ ನಿಯಂತ್ರಣದಲ್ಲೇ ಇರಬೇಕು‘ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಉತ್ತರ ಪ್ರದೇಶ ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.