ಅಮಿತ್ ಮಾಳವೀಯಗೆ ಗೇಟ್‌ ಪಾಸ್‌: ಬಿಜೆಪಿ ಡಿಜಿಟಲ್ ತಂತ್ರಗಾರಿಕೆ ಬದಲಾಯಿತೇ?

ಅಮಿತ್ ಮಾಳವೀಯಗೆ ಗೇಟ್‌ ಪಾಸ್‌: ಬಿಜೆಪಿ ಡಿಜಿಟಲ್ ತಂತ್ರಗಾರಿಕೆ ಬದಲಾಯಿತೇ?

ಅಮಿತ್ ಮಾಳವೀಯಗೆ ಗೇಟ್‌ ಪಾಸ್‌: ಬಿಜೆಪಿ ಡಿಜಿಟಲ್ ತಂತ್ರಗಾರಿಕೆ ಬದಲಾಯಿತೇ?

ನವದೆಹಲಿ: ಲೋಕಸಭೆ ಹಾಗೂ ಮುಂಬರುವ ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಬಿಜೆಪಿಯು ರಾಷ್ಟ್ರೀಯ ಪದಾಧಿಕಾರಿಗಳ ಹೊಸ ತಂಡವನ್ನು ಸೋಮವಾರ ಘೋಷಿಸಿದೆ.

ಸುದೀರ್ಘ 11 ವರ್ಷಗಳಿಂದ ಪಕ್ಷದ ಸಾಮಾಜಿಕ ಮಾಧ್ಯಮ ಪ್ರಚಾರವನ್ನು ಮುನ್ನಡೆಸುತ್ತಿದ್ದ ಅಮಿತ್ ಮಾಳವೀಯ ಅವರನ್ನು ಕೈಬಿಡಲಾಗಿದೆ. ಅಲ್ಲದೆ ಪಕ್ಷದ ಸಾಮಾಜಿಕ ಮಾಧ್ಯಮ (ಐಟಿ) ವಿಭಾಗದ ಮುಖ್ಯಸ್ಥರನ್ನಾಗಿ ದೀಪಕ್‌ ಮ್ಹಸ್ಕೆ ಅವರನ್ನು ನೇಮಿಸಲಾಗಿದೆ. 

2015ರಲ್ಲಿ ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷರಾಗಿದ್ದಾಗ ಐಟಿ ಸೆಲ್ ಮುಖ್ಯಸ್ಥರಾಗಿ ನೇಮಕಗೊಂಡ ಮಾಳವೀಯ, 11 ವರ್ಷಗಳ ಸುದೀರ್ಘ ಅವಧಿಗೆ ಆ ಹುದ್ದೆಯಲ್ಲಿದ್ದರು. 

ಮಾಳವೀಯಾ ಅವರು ‘ಫ್ರೆಂಡ್ಸ್ ಆಫ್ ಬಿಜೆಪಿ’ ಎಂಬ ತಂಡದ ಮೂಲಕ 2009ರಲ್ಲಿ ಪ್ರವರ್ಧಮಾನಕ್ಕೆ ಬಂದವರು. ಅವರನ್ನು ಪಕ್ಷದ ಐಟಿ ವಿಭಾಗದ ಮುಖ್ಯಸ್ಥರನ್ನಾಗಿ 2015ರಲ್ಲಿ ನೇಮಕ ಮಾಡಲಾಗಿತ್ತು. 

ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಮಿತ್ ಮಾಳವೀಯ ಅವರನ್ನು ಕೈಬಿಡಲು ಬಿಜೆಪಿ ತೀರ್ಮಾನ ಕೈಗೊಂಡಿದೆ. ಈ ಕುರಿತು ವಿವರವಾದ ವಿಶ್ಲೇಷಣೆ ಇಲ್ಲಿದೆ.

‘ಜೆನ್ ಝೀ’ ಯುವಜನರಲ್ಲಿ ತೀವ್ರ ಅಸಮಾಧಾನ:

ಇತ್ತೀಚೆಗೆ ‘ಕಾಕ್ರೋಚ್ ಜನತಾ ಪಾರ್ಟಿ’ ಮುನ್ನಡೆಸಿದ ‘ಜೆನ್ ಝೀ’ ಪ್ರತಿಭಟನೆಗಳು ಬಿಜೆಪಿಯ ಸಾಂಪ್ರದಾಯಿಕ ಡಿಜಿಟಲ್ ತಂತ್ರಗಾರಿಕೆಯ ಇತಿಮಿತಿಗಳನ್ನು ಬಯಲುಗೊಳಿಸಿತ್ತು. 

ಬಿಜೆಪಿಯು ಹಳೆಯ ಯುಗದ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್ ಪ್ರಚಾರ ಮಾದರಿಗಳನ್ನೇ ಯುವಜನರನ್ನು ತಲುಪಲು ಬಳಸಲಾಗುತ್ತಿತ್ತು. ಇನ್‌ಸ್ಟಾಗ್ರಾಮ್‌ನಂತಹ ಆಧುನಿಕ ವೇದಿಕೆಗಳಲ್ಲಿ ಯುವಕರನ್ನು ಸೆಳೆಯಲು ರೂಪಿಸಿದ ಹೊಸ ಜಾಹೀರಾತುಗಳು ಮತ್ತು ಪೋಸ್ಟ್‌ಗಳು ಆಕ್ರೋಶಕ್ಕೆ ಗುರಿಯಾದವು.

ತಂತ್ರಜ್ಞಾನ ಮತ್ತು ಸಂವಹನ ಮಾದರಿಗಳು ಬದಲಾಗಿದ್ದರೂ, ಹಳೆಯ ಮಾದರಿಯನ್ನೇ ಮುಂದುವರಿಸಿದ್ದು ಯುವಜನತೆ ಮತ್ತು ಪಕ್ಷದ ನಡುವೆ ಅಂತರವನ್ನು ಸೃಷ್ಟಿಸಲು ಕಾರಣವಾಯಿತು. 

ಆರ್‌ಎಸ್‌ಎಸ್‌ನಿಂದಲೂ ಆಕ್ಷೇಪ:

ಅಮಿತ್ ಮಾಳವೀಯ ಅವರ ಆಕ್ರಮಣಕಾರಿ ಸಂವಹನ ಶೈಲಿಯು ಪಕ್ಷದ ಒಳಗಿನ ಹಿರಿಯ ನಾಯಕರು ಮತ್ತು ಆರ್‌ಎಸ್‌ಎಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಪ್ರತಿಯೊಂದು ಸಂದರ್ಭದಲ್ಲೂ ಆಕ್ರಮಣಕಾರಿ ಧೋರಣೆ ಕೆಲಸ ಮಾಡುವುದಿಲ್ಲ, ಅದಕ್ಕೆ ತಾರ್ಕಿಕ ಕಾರಣಗಳೂ ಬೇಕು ಎಂಬ ಭಾವನೆ ಪಕ್ಷದ ನಾಯಕತ್ವದಲ್ಲಿ ಬಲವಾಯಿತು.

ನಂಬಿಕೆಗೆ ಉಂಟಾದ ಧಕ್ಕೆ:

ಬಿಜೆಪಿಯ ಪ್ರಚಾರ ತಂತ್ರವನ್ನು ಬಲಪಡಿಸಿದ ಕೀರ್ತಿ ಮಾಳವೀಯ ಅವರಿಗೆ ಸಲ್ಲುತ್ತದೆಯಾದರೂ, ಬರ ಬರುತ್ತಾ ಐ.ಟಿ ಸೆಲ್‌ನ ಅನೇಕ ಪೋಸ್ಟ್‌ಗಳು ‘ಸುಳ್ಳು ಸುದ್ದಿ’ ಎಂಬ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದವು.

ಮಿತಿ ಮೀರಿದ ಪೋಸ್ಟ್‌ಗಳು ಹಾಗೂ ವಿದೇಶಿ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ತರುವಂತಹ ಪೋಸ್ಟ್‌ಗಳು ಕೇಂದ್ರ ನಾಯಕತ್ವಕ್ಕೆ ಮುಜುಗರ ತಂದಿಟ್ಟವು. 

ಡಿಜಿಟಲ್ ಸಂವಹನದಲ್ಲಿ ಘನತೆ ಇರಬೇಕು. ಪದೇ ಪದೇ ಸತ್ಯಕ್ಕೆ ದೂರವಾದ ವಿಷಯಗಳನ್ನು ಹಂಚಲು ಸಾಧ್ಯವಿಲ್ಲ ಎಂದು ಪಕ್ಷದಲ್ಲೇ ಹಿರಿಯ ರಾಜಕಾರಣಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಡಿಜಿಟಲ್ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ಆಲೋಚನೆಗಳು ವೇಗವಾಗಿ ಬದಲಾಗುತ್ತವೆ. ಒಂದೇ ಹುದ್ದೆಯಲ್ಲಿ ದೀರ್ಘಕಾಲ ಇದ್ದುದರಿಂದ ಹೊಸತನ ಮತ್ತು ಸೃಜನಶೀಲತೆ ಕುಂದಿತ್ತು ಎಂದು ಪಕ್ಷದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಗೆ ಹೊಸ ಡಿಜಿಟಲ್‌ ಸವಾಲು

ಈಗ ನೂತನ ಅಧ್ಯಕ್ಷ ನಿತಿನ್ ನವೀನ್ ಅವರ ನಾಯಕತ್ವದಲ್ಲಿ ಇಡೀ ಸಾಮಾಜಿಕ ಮಾಧ್ಯಮ ತಂಡವನ್ನು ಪುನರ್ ರಚಿಸಲಾಗಿದ್ದು, ನೂತನ ಆಲೋಚನೆಗಳಿರುವ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. 

‘ಪಕ್ಷವು ಹೊಸ ಎತ್ತರಕ್ಕೆ ಏರಲು ಮತ್ತು ದೇಶದ ಮೂಲೆ ಮೂಲೆಗೆ ತನ್ನ ಸಂಘಟನೆ ವಿಸ್ತರಿಸಲು ಸಿದ್ಧವಾಗುತ್ತಿರುವ ನಿರ್ಣಾಯಕ ಹಂತದಲ್ಲಿ ಈ ನೇಮಕ ನಡೆದಿದೆ’ ಎಂದು ಮಾಳವೀಯಾ ʼಎಕ್ಸ್‌ʼನಲ್ಲಿ ಹೇಳಿದ್ದಾರೆ. 

ಬಿಜೆಪಿಯ ಉನ್ನತ ಮಟ್ಟದ ರಾಜಕೀಯ ತಂತ್ರಗಾರಿಕೆಯಲ್ಲಿ ಅಮಿತ್ ಮಾಳವೀಯ ಅವರ ನಿರ್ಗಮನವು ಒಂದು ಮಹತ್ವದ ಬದಲಾವಣೆಯ ಸೂಚನೆಯಾಗಿದೆ. ಕೇವಲ ಆಕ್ರಮಣಕಾರಿ ಟ್ರೋಲಿಂಗ್ ಮತ್ತು ಹಳೆಯ ಡಿಜಿಟಲ್ ತಂತ್ರಗಳಿಂದ ಭಾರತದ ಯುವ ಜನರನ್ನು ಸೆಳೆಯಲು ಸಾಧ್ಯವಿಲ್ಲ ಎಂಬ ಅರಿವು ಬಿಜೆಪಿಗೆ ಉಂಟಾಗಿದೆ. ಹೊಸ ನಾಯಕ ದೀಪಕ್‌ ಮ್ಹಸ್ಕೆ ನೇತೃತ್ವದ ನೂತನ ತಂಡವು ನಂಬಲರ್ಹ, ಸೃಜನಶೀಲ ಹಾಗೂ ಘನತೆಯುಳ್ಳ ಡಿಜಿಟಲ್ ಸಂವಹನಕ್ಕೆ ಆದ್ಯತೆ ನೀಡಬೇಕಾದ ಸವಾಲನ್ನು ಎದುರಿಸುತ್ತಿದೆ.

(ಆಧಾರ: ವಿವಿಧ ಸುದ್ದಿ ಮೂಲಗಳು)

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ