
ಶಹಾಬಾದ್: ಬಳಕೆಗೆ ಬಾರದ ಸ್ಥಿತಿಯಲ್ಲಿ ಉದ್ಯಾನಗಳು
ಶಹಾಬಾದ್: ನಗರದ ನಿವಾಸಿಗಳಿಗೆ ಉತ್ತಮ ಗಾಳಿ ಸೃಷ್ಟಿಸಬೇಕಿದ್ದ ಬಹುತೇಕ ಉದ್ಯಾನವನಗಳು ಈಗ ಅಶುದ್ಧ ವಾತಾವರಣ ನಿರ್ಮಾಣ ಮಾಡುವ ತಾಣಗಳಾಗಿ ಪರಿವರ್ತನೆಗೊಂಡಿವೆ. ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಯಾನಗಳು ಅದ್ವಾನದ ಹಾದಿ ಹಿಡಿದಿವೆ.
ನಗರಸಭೆಯಲ್ಲಿ 27 ವಾರ್ಡ್ಗಳಲ್ಲಿ 19 ಉದ್ಯಾನವನಗಳು ಒಂದಲ್ಲ ಒಂದು ರೀತಿಯಲ್ಲಿ ಹಾಳಾಗಿವೆ. ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಉದ್ಯಾನ ನಿರ್ಮಿಸಿದ್ದರೂ, ನಿರ್ವಹಣೆ ಕೊರತೆಯಿಂದ ಹಾಳಾಗಿವೆ.
ಕಾಂಪೌಂಡ್ ಇದ್ದರೆ ಆಟಿಕೆ ಸಾಮಗ್ರಿಗಳಿಲ್ಲ, ಇರುವ ಸಾಮಗ್ರಿಗಳು ತುಕ್ಕು ಹಿಡಿದು ಶೀತಲ ವ್ಯವಸ್ಥೆಗೆ ತಲುಪಿವೆ. ಕೂಡಲು ಆಸನ ಇದ್ದರೂ ಮುಳ್ಳುಕಟ್ಟೆಯಿಂದ ಮುಚ್ಚಿ ಹೋಗಿವೆ. ಜೋಕಾಲಿ ಮುರಿದು ನೇತಾಡುತ್ತಿವೆ. ಚರಂಡಿ ನೀರಿನಿಂದ ದುರ್ವಾಸನೆ ಹೊಡೆಯುತ್ತಿದೆ. ಮಕ್ಕಳು, ಸಾರ್ವಜನಿಕರು ಉದ್ಯಾನಗಳಲ್ಲಿ ಹೋಗಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿವೆ.
ಲಕ್ಷ್ಮೀ ಗಂಜಿಯಲ್ಲಿ ಇರುವ ಹೈಟೆಕ್ ಗಾರ್ಡನ್ನಲ್ಲಿ ಹಂದಿಗಳು ಮರಿ ಹಾಕಿ ಗೂಡು ಕಟ್ಟಿಕೊಂಡಿದೆ. ಗಾರ್ಡನ್ನಲ್ಲಿ ಇರುವ ಆಸನಗಳು ಸ್ಥಳೀಯರು ತಮ್ಮ ಮನೆಗೆ ಹೊತ್ತುಕೊಂಡು ಹೋಗಿದ್ದಾರೆ. ಹೀಗಾದರೆ ಗಾರ್ಡನ್ಗಳನ್ನು ಉಳಿಸುವವರು ಯಾರು ಎಂಬ ಪ್ರಶ್ನೆ ಜನರಿಗೆ ಕಾಡುತ್ತಿದೆ.
ಅಶೋಕ್ ನಗರ, ಶರಣ ನಗರ, ಲಕ್ಷ್ಮೀಗಂಜ್, ವಿನತ್ ನಗರ್ ಬಸವೇಶ್ವರನಗರ ಹಾಗೂ ಹಳೆ ಶಹಾಬಾದ್ ಹನುಮಾನ ನಗರದಲ್ಲಿ ಗಾರ್ಡನ್ ಇದ್ದರೂ ಇಲ್ಲದಂತಾಗಿದೆ. ಕೆಲ ಗಾರ್ಡನ್ಗಳಲ್ಲಿ ಸಮುದಾಯ ಭವನ, ದೇವಸ್ಥಾನಗಳು ನಿರ್ಮಾಣವಾಗಿವೆ. ಕೆಲವೆಡೆ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಅಕ್ರಮಿಸಿಕೊಂಡಿದ್ದಾರೆ. ಸಾರ್ವಜನಿಕರ ಶೌಚಾಲಯಲ ನಿರ್ಮಾಣವಾಗಿವೆ. ಅಳಿದುಳಿದ ಗಾರ್ಡನ್ಗಳು ರೋಗಗ್ರಸ್ತಗಳಾಗಿವೆ.
ಸ್ಥಳೀಯ ಆಡಳಿತ ಮತ್ತು ಅಧಿಕಾರಗಳು ಪ್ರತಿ ಬಾರಿ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಅಚ್ಚುಕಟ್ಟಾದ ಉದ್ಯಾನಗಳನ್ನು ನಿರ್ಮಿಸಿ ಹಸಿರು ವಾತಾವರಣ ನಿರ್ಮಾಣ ಮಾಡಲು ಲಕ್ಷಾಂತರ ರೂಪಾಯಿ ಹಣ ಮೀಸಲಿಟ್ಟು ಖರ್ಚು ಮಾಡುತ್ತಾರೆ ಆದರೆ ಅಭಿವೃದ್ಧಿ ಕಾಣದೆ ಪಾಳು ಬಿದ್ದಿವೆ.
ಬೆಳಿಗ್ಗೆ ನೂರಾರು ಜನ ವಾಕಿಂಗ್, ವ್ಯಾಯಾಮ ಮಾಡಲು ರಸ್ತೆಗಳನ್ನು ಅವಲಂಬಿಸಿದ್ದಾರೆ. ವಾಯುವಿಹಾರಿಗಳಿಗೆ ಅಪಘಾತ ಸಂಭವಿಸಿ ಕೈ ಕಾಲು ಮುರಿದುಕೊಂಡ ಉದಾಹರಣೆಗೂ ಇವೆ. ನಗರದಲ್ಲಿ ವಿಹರಿಸಲು ಒಂದು ಉತ್ತಮ ಮತ್ತು ಸುರಕ್ಷಿತ ಸ್ಥಳವಿಲ್ಲ. ನಗರದಲ್ಲಿ ಉದ್ಯಾನ ಉಳಿಸುವುದು ಅಗತ್ಯ ಎನ್ನುತ್ತಾರೆ ಪ್ರಜ್ಞಾವಂತರು.