
ರಾಜೀವ್ ಕನಸಿನ ಭಾರತ ನಿರ್ಮಾಣವೇ ನನ್ನ ಸಂಕಲ್ಪ: ಅಪ್ಪನನ್ನು ಸ್ಮರಿಸಿದ ರಾಹುಲ್
ನವದೆಹಲಿ: ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಅಂಗವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಅಪ್ಪನ ಆದರ್ಶಗಳನ್ನು ಸ್ಮರಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, 'ಭಾರತೀಯರಲ್ಲಿ ಸಾಮರಸ್ಯ, ಪ್ರತಿಯೊಬ್ಬರ ಹೃದಯದಲ್ಲೂ ಕರುಣೆ ಹಾಗೂ ಎಲ್ಲ ನಾಗರಿಕರಿಗೂ ನ್ಯಾಯ ಮತ್ತು ಪ್ರಜಾಪ್ರಭುತ್ವದ ಸಮಾನ ಹಕ್ಕುಗಳು - ಇವು ನನ್ನ ತಂದೆ ನೀಡಿದ ಪ್ರಮುಖ ಪಾಠಗಳು' ಎಂದು ಉಲ್ಲೇಖಿಸಿದ್ದಾರೆ.
‘ಅಪ್ಪ, ನಿಮ್ಮ ಈ ಬೋಧನೆಗಳೇ ನನ್ನ ಶಕ್ತಿ. ನಿಮ್ಮ ನೆನಪುಗಳೇ ನನ್ನ ಧೈರ್ಯ. ನೀವು ಕಂಡಿದ್ದ ಕನಸಿನ ಭಾರತವನ್ನು ನಿರ್ಮಿಸುವ ಸಂಕಲ್ಪವು ನನಗೆ ಸದಾ ದಾರಿದೀಪವಾಗಿ ಮುನ್ನಡೆಸಲಿದೆ,’ ಎಂದು ಬರೆದುಕೊಂಡಿದ್ದಾರೆ.
ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಸೇರಿದಂತೆ ಪ್ರಮುಖರು ಸ್ಮರಿಸಿದ್ದಾರೆ.
Tags
Nation