
ಚಿಕ್ಕಜಾಜೂರು, ಬಿ. ದುರ್ಗ ರಸ್ತೆಗಳು ಮೃತ್ಯು ಕೂಪದಂತೆ ಬದಲಾಗಿವೆ
ಚಿಕ್ಕಜಾಜೂರು: ಬಿ. ದುರ್ಗ ಹಾಗೂ ಚಿಕ್ಕಜಾಜೂರು ಹೋಬಳಿಯಾದ್ಯಂತ ಇರುವ ರಸ್ತೆಗಳು ಮೃತ್ಯು ಕೂಪದಂತೆ ಬದಲಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಹೊಸದುರ್ಗ– ದಾವಣಗೆರೆ ಮಾರ್ಗದ ಮುಖ್ಯ ರಸ್ತೆ ಹಾಗೂ ಆಡನೂರು ಗ್ರಾಮದ ದಿಬ್ಬದಿಂದ ಹೊಳಲ್ಕೆರೆ ತಾಲ್ಲೂಕಿನ ಗಡಿ ಗ್ರಾಮವಾದ ಬಂಡೆಬೊಮ್ಮೇನ ಹಳ್ಳಿವರೆಗಿನ ರಸ್ತೆಗಳು ಗುಂಡಿಮಯವಾಗಿದ್ದು, ಪ್ರಯಾಣಿಕರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ.
ಚಿಕ್ಕಜಾಜೂರು ಮುಖ್ಯ ರಸ್ತೆ, ಬಿ. ದುರ್ಗದ ಹೊರವಲಯ, ಸಾಸಲುಹಳ್ಳದ ಸೇತುವೆ ರಸ್ತೆ ಹಾಗೂ ಅಂದನೂರು ಕೆರೆ ಏರಿ ಮೇಲೆ ಹಾದು ಹೋಗಿರುವ ರಸ್ತೆಗಳು ವಾಹನ ಸವಾರರಿಗೆ ನರಕ ದರ್ಶನ ಮಾಡಿಸುತ್ತಿವೆ.
ತಾಲ್ಲೂಕಿನ ಬಹುತೇಕ ಕಡೆ ಈಚೆಗಷ್ಟೇ ಅಭಿವೃದ್ಧಿಪಡಿಸಿರುವ ರಸ್ತೆಗಳು ಮಳೆಯಿಂದಾಗಿ ಸಂಪೂರ್ಣವಾಗಿ ಹದಗೆಟ್ಟಿವೆ. ಅಲ್ಲದೆ, ಕೆಲವೆಡೆ ರೈತರು ಜಮೀನುಗಳಿಗೆ ಪೈಪ್ ಲೈನ್ ಹಾಕಿಕೊಳ್ಳಲು ಗುಂಡಿಗಳನ್ನು ತೋಡಿದ್ದು, ರಸ್ತೆ ಕೆಡಲು ಕಾರಣವಾಗಿದೆ.
ಸಾಸಲು ಹಳ್ಳದ ಸೇತುವೆಯನ್ನು ದುರಸ್ತಿ ಮಾಡಿಸುವಂತೆ ಅಲ್ಲಿನ ಜನ ಹಲವು ಬಾರಿ ಶಾಸಕ ಚಂದ್ರಪ್ಪ ಅವರಿರಿಗೆ ಮನವಿ ಮಾಡಿದ್ದು, ಹೊಸ ಸೇತುವೆ ನಿರ್ಮಿಸಿಕೊಡುವುದಾಗಿ ಭರಸವೆ ನೀಡಿದ್ದರು. ಆದರೆ, ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂದು ಈ ಭಾಗದ ಓಂಕಾರಸ್ವಾಮಿ. ಎಂ.ಕೆ. ರುದ್ರಪ್ಪ, ದಂಡಿಗೆನಹಳ್ಳಿ ಜಗದೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಿ. ದುರ್ಗ ಹೋಬಳಿಯ ಬಹುತೇಕ ರಸ್ತೆಗಳು ಹಾಗೂ ಕಡೂರು, ನಂದಿಹಳ್ಳಿ, ಐಯ್ಯನಹಳ್ಳಿ, ಕಾಳಘಟ್ಟ ರಸ್ತೆ, ಅಂತಾಪುರ, ನಂದಿಹಳ್ಳಿ ರಸ್ತೆ, ಕಡೂರಿನಿಂದ ಹನುಮನಹಳ್ಳಿ, ಕೊಡಗವಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಸಮೀಪದ ಚಿಕ್ಕಂದವಾಡಿಯಿಂದ ಅರಸನಘಟ್ಟ, ಹನುಮನಕಟ್ಟೆ ಸೇರಿ ಸುತ್ತಮುತ್ತಲ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಅಭಿವೃದ್ಧಿಗಾಗಿ ಎದುರು ನೋಡುತ್ತಿವೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಆದಷ್ಟು ಬೇಗ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ವಾಹನ ಚಾಲಕರು, ವಿವಿಧ ಗ್ರಾಮಗಳ ಮುಖಂಡರು ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-44-1200948228