
ಬೆಂಗಳೂರು | ಬಹುಭಾಷಾ ಸಂಗಮ: ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ವಕ್ಕೆ ಚಾಲನೆ
ಬೆಂಗಳೂರು: ಬಹುಭಾಷೆಗಳ ಸಂಗಮ, ಸಾಹಿತ್ಯದ ವೈವಿಧ್ಯ ಹಾಗೂ ಚಿಂತನೆಯ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ವಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಭಾಷೆಗಳ ಗಡಿ ದಾಟಿ ಸಾಹಿತ್ಯವು ಓದುಗರ ಮನಸ್ಸುಗಳನ್ನು ಬೆಸೆಯುವ ಕುರಿತು ಚರ್ಚೆಗಳಾದವು. ಒಂಬತ್ತು ವೇದಿಕೆಗಳಲ್ಲಿ ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಬೆಂಗಾಲಿ ಹಾಗೂ ಮಲೆಯಾಳ ಭಾಷೆಗಳಲ್ಲಿ ಸಂವಾದಗಳು ನಡೆದವು.
ಪುಸ್ತಕ ಪ್ರೇಮಿಗಳು ತಮ್ಮ ನೆಚ್ಚಿನ ಲೇಖಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ‘ಮುಖಾಮುಖಿ’ಯು ಲೇಖಕರ ಮಾತುಗಳ ಮೂಲಕ ಅವರ ಬರಹದ ಹಿಂದಿನ ಚಿಂತನೆ, ಅನುಭವ ಹಾಗೂ ಸೃಜನಶೀಲ ಲೋಕ ತೆರೆದುಕೊಳ್ಳಲು ಅವಕಾಶ ಕಲ್ಪಿಸಿತು.
‘ಅಂಗಳ’ ವೇದಿಕೆಯಲ್ಲಿ ಭಾಷೆಯ ಆಳ, ಅಗಲ, ಒಳನೋಟ ಹಾಗೂ ವಿವಿಧ ಮಗ್ಗಲುಗಳ ಕುರಿತು ಬೆಳಕು ಚೆಲ್ಲಿದರು. ‘ಮಂಟಪ’ ವೇದಿಕೆಯಲ್ಲಿ ಸಿನಿಮಾ, ಭಾಷೆ, ಸಾಹಿತ್ಯ ಹಾಗೂ ಮಾಧ್ಯಮ ಸೇರಿದಂತೆ ಭಾಷೆಯ ಶಕ್ತಿ, ಸಾಹಿತ್ಯದ ಹೊಣೆಗಾರಿಕೆ, ಓದುಗರ ಪಾತ್ರ ಮತ್ತು ಸಮಕಾಲೀನ ಸಮಾಜದೊಂದಿಗೆ ಸಾಹಿತ್ಯದ ಸಂಬಂಧದ ಕುರಿತು ಚರ್ಚೆಗಳು ನಡೆದವು. ‘ಮಥನ’ ಮತ್ತು ‘ಅಕ್ಷರ’ ವೇದಿಕೆಗಳಲ್ಲಿ ವಿವಿಧ ಭಾಷೆಗಳ ಸಾಹಿತ್ಯಕ್ಕೆ ಸಂಬಂಧಿಸಿದ ಸಂವಾದಗಳು ಜರುಗಿದವು. ‘ಅನಾವರಣ’ ವೇದಿಕೆಯಲ್ಲಿ ಇತ್ತೀಚೆಗೆ ರಚನೆಯಾದ ವಿವಿಧ ಭಾಷೆಗಳ ಹಲವು ಕೃತಿಗಳು ಲೋಕಾರ್ಪಣೆಗೊಂಡವು.
ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ‘ಚಿಣ್ಣರ ಲೋಕ’ ವೇದಿಕೆ ಗಮನ ಸೆಳೆಯಿತು. ‘ಕಾವ್ಯ ಕಣಜ’ (ಪೊಯೆಟ್-ಟ್ರೀ) ವೇದಿಕೆ ಕವಿತೆಗಳ ವಾಚನ ಹಾಗೂ ಲೇಖಕರು ಮತ್ತು ಓದುಗರ ನಡುವಿನ ಚರ್ಚೆಗೆ ಕೊಂಡಿಯಾಯಿತು. ‘ನ್ಯೂ ಝೆನ್’ ವೇದಿಕೆ ಯುವ ಮನಸ್ಸುಗಳಿಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಿತು.
ಪುಸ್ತಕ ಮಳಿಗೆಗಳು, ಆಟಿಕೆಗಳು, ವಿವಿಧ ಕರಕುಶಲ ವಸ್ತುಗಳ ಪ್ರದರ್ಶನವೂ ಸಾಹಿತ್ಯೋತ್ಸವದಲ್ಲಿ ಕಂಡವು.