
ಉಡುಪಿ| ಹೆದ್ದಾರಿ ಹೊಂಡಮಯ, ಸಂಚಾರ ದುಸ್ತರ; ವಾಹನ ಸವಾರರಿಗೆ ಅಪಾಯ
ಹೆಬ್ರಿ: ಉಡುಪಿ– ಹೆಬ್ರಿ– ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಹೆಬ್ರಿ ಕೆಳಪೇಟೆ, ಅನಂತಪದ್ಮನಾಭ ದೇವಸ್ಥಾನದ ಬಳಿ, ಹಳೆ ಪೊಲೀಸ್ ಠಾಣೆಯ ಎದುರು ಮತ್ತು ಸೊಸೈಟಿ ಎದುರು ರಸ್ತೆಯಲ್ಲಿ ಭಾರಿ ಗಾತ್ರದ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿವೆ.
ಹೆದ್ದಾರಿಯಲ್ಲಿರುವ ಹೊಂಡದಲ್ಲಿ ಮಳೆ ನೀರು ನಿಂತು ಹೊಂಡ ಇರುವುದು ಗೊತ್ತಾಗದೆ ವಾಹನಗಳು ಹೊಂಡಕ್ಕೆ ಬೀಳುತ್ತಿವೆ. ದ್ವಿಚಕ್ರ ವಾಹನಗಳ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ.
ಪ್ರತಿವರ್ಷ ಮಳೆಗಾಲದಲ್ಲಿ ಇದೇ ಸ್ಥಳದಲ್ಲಿ ಹೊಂಡಗಳು ಬೀಳುತ್ತಿವೆ. ಹೆಬ್ರಿಯ ಮುಖ್ಯರಸ್ತೆಯು ರಾಷ್ಟ್ರೀಯ ಹೆದ್ದಾರಿಯಾದ ಬಳಿಕ ಹೊಂಡ ಮುಚ್ಚುವ ಕಾರ್ಯಗಳು ವಿಳಂಬವಾಗುತ್ತಿದೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಬೇರೆ ಊರಿನಿಂದ ಸಾವಿರಾರು ವಾಹನಗಳು ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ.
ಪ್ರತಿವರ್ಷ ಗೋಳು: ಪ್ರತಿವರ್ಷ ಹೆಬ್ರಿ ಕೆಳಪೇಟೆಯಲ್ಲಿ ಚರಂಡಿ ನೀರು ಹರಿದು ರಸ್ತೆಯಲ್ಲಿ ಗುಂಡಿಗಳಾಗುತ್ತಿದೆ. ಜನರು ಪ್ರತಿಭಟನೆ ನಡೆಸಿದ ನಂತರ ರಸ್ತೆಗೆ ಕಾಂಕ್ರೀಟ್ ಅಳವಡಿಸಿ ಹೋಗುತ್ತಾರೆ. ಮುಂದಿನ ವರ್ಷ ಅದೇ ಸಮಸ್ಯೆ ಅದೇ ಜಾಗದಲ್ಲಿ ಇರುತ್ತದೆ. ಆದ್ದರಿಂದ ಇಲ್ಲಿಗೆ ಶಾಶ್ವತ ಯೋಜನೆಯ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೆಸರಿನ ಸಿಂಚನ: ವಾಹನಗಳು ವೇಗವಾಗಿ ಚಲಿಸುವುದರಿಂದ ಗುಂಡಿಗಳಲ್ಲಿ ನಿಂತ ಕೆಸರು ನೀರು ಜನರ ಮೈಗೆ ಸಿಂಚನವಾಗುತ್ತದೆ. ಶಾಲಾ ಮಕ್ಕಳಿಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಹೆಚ್ಚಿನ ಬೈಕ್ ಸವಾರರಿಗೆ ಈ ಜಾಗದಲ್ಲಿ ಬೃಹತ್ ಗಾತ್ರದ ಗುಂಡಿಗಳು ಇವೆ ಎಂದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಅನೇಕ ಬೈಕ್ ಸವಾರರು ಇಲ್ಲಿ ಬಿದ್ದಿದ್ದಾರೆ. ಸ್ವಲ್ಪ ಎಡವಿದರೂ ಪ್ರಾಣಕ್ಕೆ ಕುತ್ತು ಬರಬಹುದು. ಚರಂಡಿ ನಿರ್ವಹಣೆ ಇಲ್ಲದೆ ಬಹಳ ಸಮಯ ಕಳೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೆಬ್ರಿ ಕಾರ್ಕಳ ರಾಜ್ಯ ರಸ್ತೆಯ ಎಣ್ಣೆಹೊಳೆಯಲ್ಲಿ ಕೆಲವು ಕಡೆಯಲ್ಲಿ ಹೊಂಡಗಳು ಬಿದ್ದಿವೆ. ಸ್ಥಳೀಯ ರಸ್ತೆಗಳಲ್ಲೂ ಹಲವು ಕಡೆಯಲ್ಲಿ ಹೊಂಡಗಳಾಗಿವೆ. ಗ್ರಾಮೀಣ ರಸ್ತೆಗಳಲ್ಲಿ ಹೊಂಡಗಳಿಂದ ಸಂಚರಿಸುವುದೇ ಕಷ್ಟವಾಗುತ್ತಿದೆ ಎನ್ನುತ್ತಾರೆ ಜನರು.
‘ಶೀಘ್ರ ರಸ್ತೆ ದುರಸ್ತಿಗೊಳಿಸಿ’
‘ಉಡುಪಿ– ಹೆಬ್ರಿ– ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಭಾರಿ ಗಾತ್ರದ ಹೊಂಡಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಿಸಿ ಶೀಘ್ರ ಹೊಂಡ ಮುಚ್ಚುವ ಕಾರ್ಯ ನಡೆಸಿ ಅಪಾಯ ತಪ್ಪಿಸಬೇಕು. ದಿನನಿತ್ಯ ನೂರಾರು ಆಂಬುಲೆನ್ಸ್ಗಳು ಕೂಡ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಎಲ್ಲರಿಗೂ ದೊಡ್ಡ ಸಮಸ್ಯೆಯಾಗುತ್ತಿದೆ. ಶಾಲಾ ಮಕ್ಕಳು ಈ ರಸ್ತೆಯನ್ನು ಅವಲಂಬಿಸಿರುವುದರಿಂದ ರಸ್ತೆ ದುರಸ್ತಿ ಶೀಘ್ರದಲ್ಲಿ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕುಚ್ಚೂರು ಶ್ರೀಕಾಂತ್ ಪೂಜಾರಿ ಆಗ್ರಹಿಸಿದ್ದರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-28-613728485