
ಚಿಕ್ಕಬಳ್ಳಾಪುರ| ಮುಜರಾಯಿ ದೇಗುಲ ನಾಶ, ಮಠದ ಜಮೀನು ಮಾರಾಟ: ಪ್ರಮೋದ್ ಮುತಾಲಿಕ್
ಚಿಕ್ಕಬಳ್ಳಾಪುರ: ‘ನಗರದ ವಾಪಸಂದ್ರದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇಗುಲವನ್ನು ನಿಡುಮಾಮಿಡಿ ಮಠದವರು ಅಭಿವೃದ್ಧಿ ಹೆಸರಿನಲ್ಲಿ ಭಗ್ನಗೊಳಿಸುತ್ತಿದ್ದಾರೆ. ಇಲ್ಲಿದ್ದ ಶಿವನ ಕಂಚಿನ ಮೂರ್ತಿ ಮಾಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರು ಸಮಗ್ರ ತನಿಖೆ ನಡೆಸಬೇಕು’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ನಗರದ ಸರ್ವೆ ನಂ.2019, 174, 7ರಲ್ಲಿ ಪುರಾತನ ಮಠ ಹಾಗೂ ಮುಜರಾಯಿ ಇಲಾಖೆ ಆಸ್ತಿ ಇದೆ. ಈ ಆಸ್ತಿಯನ್ನು ನಿಡುಮಾಮಿಡಿ ಮಠದವರು ಅತಿಕ್ರಮಿಸಿ ಕಬಳಿಸುತ್ತಿದ್ದಾರೆ. ಈ ಅತಿಕ್ರಮಣದ ವಿಚಾರವಾಗಿ ದೂರು ನೀಡಿದರೂ ತಹಶೀಲ್ದಾರರು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಇಲ್ಲಿನ ದೇವಾಲಯ ಮತ್ತು ಆಸ್ತಿ ಕಬಳಿಸಲು ಜೀರ್ಣೋದ್ಧಾರದ ಹೆಸರಿನಲ್ಲಿ ಆ.22ರಿಂದ 24ರವರೆಗೆ ಮಠದವರು ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ ತಡೆಯಬೇಕು. ಇಲ್ಲದಿದ್ದರೆ ಅಂದೇ ಇದರ ವಿರುದ್ಧ ಪ್ರತಿಭಟಿಸುತ್ತೇವೆ. ಅನಾಹುತಕ್ಕೆ ಸರ್ಕಾರ ಹೊಣೆ ಆಗುತ್ತದೆ ಎಂದರು.
ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಸಮಗ್ರವಾಗಿ ದಾಖಲೆಗಳನ್ನು ನೀಡಿದ್ದೇವೆ. ಮುಜರಾಯಿ ಆಸ್ತಿ ರಕ್ಷಣೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರ ಜವಾಬ್ದಾರಿ. ಕೊಂಡಲಯ್ಯ ಮತ್ತು ನಿಡುಮಾಮಡಯ್ಯ ಅವರಿಗೆ ಮೂಲ ಮಠವು ಸೇರಿತ್ತು. ಆದರೆ ನಂತರ ನಿಡುಮಾಮಡಯ್ಯ ಅವರ ಹೆಸರನ್ನು ನಿಡುಮಾಮಿಡಿ ಮಠ ಎಂದು ತಿದ್ದಿ ಈ ಜಾಗವನ್ನು ಕಬಳಿಸಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆಗಳು ಇವೆ. ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನ ನಿಡುಮಾಮಿಡಿ ಮಠಕ್ಕೂ ವಾಪಸಂದ್ರದ ಕೊಂಡಲಯ್ಯ ಮಠಕ್ಕೂ ಸಂಬಂಧವಿಲ್ಲ. ವಾಪಸಂದ್ರದಲ್ಲಿ ಮಠದ ಜಾಗವನ್ನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.