
Bengaluru: ಬೆಂಗಳೂರಿನ ಹೋಟೆಲ್ಗಳಿಗೆ ದಂಡದ ಬಿಸಿ ಮುಟ್ಟಿಸಿದ ಜಿಬಿಎ: 6 ಹೋಟೆಲ್ಗಳಿಗೆ 1.60 ಲಕ್ಷ ರೂ. ದಂಡ
ಬೆಂಗಳೂರಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದ ಹಾಗೂ ಆಹಾರದ ಗುಣಮಟ್ಟ ಪಾಲನೆ ಮಾಡದ ಹೋಟೆಲ್ಗಳ ಮೇಲೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರದ ಪಾಲಿಕೆಗಳು ಹೊಸ ಅಸ್ತ್ರವನ್ನು ಪ್ರಯೋಗಿಸಿವೆ. ಇದೀಗ ಈ ರೀತಿಯ ಹೋಟೆಲ್ಗಳಿಗೆ ಬಿಸಿ ಮುಟ್ಟಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಹೋಟೆಲ್ಗಳಿಗೆ ದಂಡದ ಬಿಸಿ ಮುಟ್ಟಿಸಲಾಗುತ್ತಿದ್ದು ಬೆಂಗಳೂರಿನ 6 ಹೋಟೆಲ್ಗಳಿಗೆ 1.60 ಲಕ್ಷ ರೂ. ದಂಡ ವಿಧಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಬ್ಯಾಟರಾಯನಪುರ ಹಾಗೂ ಯಲಹಂಕ ವಿಭಾಗದ ಆರೋಗ್ಯ ವೈದ್ಯಾಧಿಕಾರಿ ಮತ್ತು ಅವರ ತಂಡವು ಆಗಸ್ಟ್ 13ರ ಗುರವಾರ ವಿವಿಧ ಆಹಾರ ಮಳಿಗೆಗಳು ಹಾಗೂ ಹೋಟೆಲ್ಗಳಲ್ಲಿ ತಪಾಸಣೆಯನ್ನು ನಡೆಸಿ, ನಿಯಮ ಪಾಲಿಸದ 6 ಹೋಟೆಲ್ಗಳಿಗೆ 1.60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ತಪಾಸಣೆ ನಡೆಸಲಾದ ಹೋಟೆಲ್ ಹಾಗೂ ದಂಡ ವಿವರ
1. Hyatt Centric: ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸದಿರುವುದು ಹಾಗೂ ನೊಣಗಳು ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ₹40,000 ದಂಡ ವಿಧಿಸಲಾಗಿದೆ.
2. Peepai Brewery & Kitchen: ಸ್ಟೋರ್ ರೂಮ್ನಲ್ಲಿ ಅವಧಿ ಮೀರಿದ ಅಡುಗೆ ಎಣ್ಣೆ ಪತ್ತೆಯಾಗಿದ್ದು, ಕೋಲ್ಡ್ ಸ್ಟೋರೇಜ್ ಘಟಕದಲ್ಲಿ ಸಂಗ್ರಹಿಸಿದ್ದ ಮಾಂಸವನ್ನು ಮುಚ್ಚದೇ ಹಾಗೂ ಲೇಬಲ್ ಮಾಡದೇ ಇಡಲಾಗಿತ್ತು. ಮಾಂಸ ಖರೀದಿಸಿದ ದಿನಾಂಕಕ್ಕೆ ಸಂಬಂಧಿಸಿದ ಇನ್ವಾಯ್ಸ್ ಲಭ್ಯವಿರಲಿಲ್ಲ. FSSAI ಹಾಗೂ ಘನ ತ್ಯಾಜ್ಯ ನಿರ್ವಹಣೆ (SWM) ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ₹80,000 ದಂಡ ವಿಧಿಸಲಾಗಿದೆ.
3. Thalassery Restaurant: ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸದಿರುವುದು, ನೊಣಗಳು ಕಂಡುಬಂದಿದ್ದು, ಅಶುಚಿಯಾದ ಸ್ಥಳ ಹಾಗೂ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ₹20,000 ದಂಡ ವಿಧಿಸಲಾಗಿದೆ.
4. Chickpete Donne Biriyani: ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸದಿರುವುದು, ನೊಣಗಳು ಕಂಡುಬಂದಿದ್ದು, ಅಶುಚಿಯಾದ ಸ್ಥಳ ಹಾಗೂ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ₹5,000 ದಂಡ ವಿಧಿಸಲಾಗಿದೆ.
5. Nandhana Palace: ತ್ಯಾಜ್ಯ ವಿಂಗಡಣೆಯಲ್ಲಿ ಲೋಪ, ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದರಿಂದ ನೋಟಿಸ್ ನೀಡಿ ₹15,000 ದಂಡ ವಿಧಿಸಲಾಗಿದೆ.
6. Swathi Hotel: ಸ್ವಚ್ಛತೆ ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.
ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳ ಪಾಲನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬೆಂಗಳೂರು ಉತ್ತರ ನಗರ ಪಾಲಿಕೆಯ ವತಿಯಿಂದ ಮುಂದಿನ ದಿನಗಳಲ್ಲಿಯೂ ತಪಾಸಣೆ ಹಾಗೂ ಅಗತ್ಯ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.