
ತುಂಗಭದ್ರಾ ಹಿನ್ನೀರು ದುರಂತ: 3 ಕಿ.ಮೀ. ದೂರದಲ್ಲಿತ್ತು ನಾಪತ್ತೆಯಾಗಿದ್ದವನ ಕಳೇಬರ
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ತಂಬ್ರಹಳ್ಳಿ ಬಳಿ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಮೂವರಲ್ಲಿ ಶುಕ್ರವಾರ ಮೂರನೇ ಯುವಕನ ಮೃತದೇಹವೂ ಪತ್ತೆಯಾಗಿದೆ.
ತಂಬ್ರಹಳ್ಳಿಯ ರಂಗನಾಥ ದೇವಸ್ಥಾನದ ಬಳಿ ಹಿನ್ನೀರಿನಲ್ಲಿ ಮಡಿವಾಳರ ರಾಜನ ಶವ ಪತ್ತೆಯಾಗಿದೆ.
ತೆಪ್ಪ ಮುಳುಗಿದ್ದ ಪ್ರದೇಶದಿಂದ ಅಂದಾಜು 3 ಕಿ.ಮೀ.ದೂರದಲ್ಲಿ ರಾಜನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಅಗ್ನಿಶಾಮಕದಳ, ಕಲಬುರ್ಗಿಯ ಎಸ್ಡಿಆರ್ಎಫ್ ತಂಡ ಹಾಗೂ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಹಿನ್ನೀರು ಪ್ರದೇಶಕ್ಕಿಳಿದು ಕಾರ್ಯಾಚರಣೆ ನಡೆಸಿದಾಗ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿದಿದ್ದಾರೆ.
ಮಂಗಳವಾರ ಸಂಜೆ ಮೀನು ಹಿಡಿಯಲೆಂದು ಮೂವರು ಯುವಕರು ತೆಪ್ಪದಲ್ಲಿ ತೆರಳಿದ್ದರು. ಆದರೆ ಬಲವಾದ ಗಾಳಿ ಬೀಸಿದ್ದರಿಂದ ತೆಪ್ಪ ಮುಗುಚಿ ಬಿದ್ದಿತ್ತು. ಬುಧವಾರ ಯಮನೂರಪ್ಪ(20), ಗುರುವಾರ ಅಜ್ಜಪ್ಪ (26) ಅವರ ಮೃತದೇಹ ಪತ್ತೆಯಾಗಿತ್ತು. ಎರಡು ದಿನ ಹುಡುಕಾಡಿದರೂ ರಾಜನ ಮೃತದೇಹ ಪತ್ತೆಯಾಗಿರಲಿಲ್ಲ. ಸ್ಥಳ ಬದಲಿಸಿ ಹುಡುಕುವ ತಂತ್ರ ಶುಕ್ರವಾರ ಬೆಳಿಗ್ಗೆ ಫಲ ಕೊಟ್ಟಿತು.
ಮೃತರಾದ ಯಮನೂರಪ್ಪ ಮತ್ತು ರಾಜ ಸ್ವಂತ ಅಣ್ಣ ತಮ್ಮಂದಿರು. ಅಜ್ಜಪ್ಪ ಇನ್ನೊಂದು ಮನೆಯ ಕಟುಂಬದ ಆಧಾರವಾಗಿದ್ದರು. ಮೂವರು ಯುವಕರ ಸಾವಿನಿಂದ ಊರಿಗೆ ಊರೇ ದುಃಖದಲ್ಲಿ ಮುಳುಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.