
ಗುಳೇದಗುಡ್ಡ: ಕ್ರೀಡಾಂಗಣಕ್ಕೆ ಜಾಗ ಕೊರತೆ, ಕಾಮಗಾರಿಗಾಗಿ ₹2 ಕೋಟಿ ಹಣ ಮಂಜೂರು
ಗುಳೇದಗುಡ್ಡ: ತಾಲ್ಲೂಕಿನಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದು, ದೇಶ, ವಿದೇಶದಲ್ಲಿ ನಡೆದ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ಪಟ್ಟಣ ಸೇರಿದಂತೆ ಗ್ರಾಮೀಣ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಕ್ರೀಡಾಂಗಣ ಇಲ್ಲವಾಗಿದೆ. ಆದಷ್ಟು ಬೇಗನೆ ಸರ್ಕಾರ ಕ್ರೀಡಾಂಗಣ ನಿರ್ಮಿಸಬೇಕು ಎಂಬುದು ಕ್ರೀಡಾಪಟುಗಳ ಅಗ್ರಹ.
ಕಳೆದ ವರ್ಷ ರಾಜ್ಯ ಬಜೆಟ್ನಲ್ಲಿ ತಾಲ್ಲೂಕು ಕ್ರೀಡಾಂಗಣಕ್ಕೆ ₹2 ಕೋಟಿ ಅನುದಾನ ತೆಗೆದಿರಿಸಲಾಗಿದೆ. ಆದರೆ, ಅದು ಇದುವರೆಗೂ ಬಳಕೆಯಾಗಿಲ್ಲ. ಜಾಗದ ಕೊರತೆ ಎಂದು ಹೇಳಲಾಗುತ್ತಿದೆ. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪ್ರಯತ್ನದ ಕೊರತೆ ಕಾಣುತ್ತಿದೆ ಎನ್ನುವುದು ಕ್ರೀಡಾಪಟುಗಳ ಆರೋಪ.
ಕ್ರೀಡಾ ತರಬೇತಿ ದೊರೆತರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಕ್ಕಳು ಭಾಗವಹಿಸಬಹುದು. ಅವರಿಗಾಗಿಯೇ ವಲಯ, ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟ ಹಾಗೂ ದಸರಾ ಕ್ರೀಡೆಗಳು ಜರುಗುತ್ತವೆ. ಆದರೆ, ಶಾಲಾ ಕಾಲೇಜುಗಳಲ್ಲಿಯೂ ಕ್ರೀಡಾ ಮೈದಾನದ ಕೊರತೆ ಇರುವುದರಿಂದ ಅವರಿಗೆ ತರಬೇತಿ ನೀಡಲು ಮತ್ತು ಅಭ್ಯಾಸ ಮಾಡಲು ತಾಲ್ಲೂಕು ಕ್ರೀಡಾಂಗಣ ಅಗತ್ಯವಾಗಿದೆ.
ಕ್ರಿಕೆಟ್, ಹಾಕಿ, ಫುಟ್ಬಾಲ್ ಮುಂತಾದ ಕ್ರೀಡೆಗಳಿಗೆ ತರಬೇತಿ ನೀಡಲು ವಿಶಾಲವಾದ ಕ್ರೀಡಾಂಗಣ ಶಾಲಾ, ಕಾಲೇಜುಗಳಲ್ಲಿಲ್ಲ. ಹೀಗಾಗಿ ತಾಲ್ಲೂಕು ಕ್ರೀಡಾಂಗಣ ಅವಶ್ಯಕವಾಗಿದೆ ಎಂದು ಕ್ರೀಡಾ ತರಬೇತುದಾರ ಈರಣ್ಣ ಅಲದಿ ಹೇಳುತ್ತಾರೆ.
ಇಚ್ಛಾಶಕ್ತಿ ಕೊರತೆ: ಪಟ್ಟಣದ ಸುತ್ತಮುತ್ತ ಸಾಕಷ್ಟು ಜಮೀನಿದೆ. ಸೂಕ್ತ ಬೆಲೆ ನೀಡಿ, ರೈತರ ಮನವೊಲಿಸಿ ಆಸಕ್ತಿಯಿಂದ ಖರೀದಿ ಮಾಡುವ ಇಚ್ಛಾಶಕ್ತಿ ಕೊರತೆ ಕಾರಣದಿಂದ ಕ್ರೀಡಾಂಗಣ ನಿರ್ಮಾಣವಾಗದಿರುವುದಕ್ಕೆ ಕಾರಣವಾಗಿದೆ.
ಕ್ರೀಡಾಂಗಣವಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕ್ರೀಡಾಂಗಣ ನಿರ್ಮಿಸಲು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಮನವಿ ಮಾಡಲಾಗಿದೆ. ಸಕಾರಾತ್ಮವಾಗಿ ಸ್ಪಂದಿಸಿದ್ದು, ಕ್ರೀಡಾಂಗಣ ನಿರ್ಮಿಸುವ ಭರವಸೆ ನೀಡಿದ್ದಾರೆ ಎಂದು ಬಿಇಒ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್.ಹಳಗೇರಿ ತಿಳಿಸಿದರು.
ಕ್ರೀಡಾಂಗಣ ಆದರೆ, ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಅನುಕೂಲವಾಗುತ್ತದೆ. ಉತ್ತಮ ಸೌಲಭ್ಯ ಹೊಂದಿದ ಸಿಂಥೆಟಿಕ್ ಮೈದಾನ ಆಗಬೇಕು ಎಂಬುದು ನಮ್ಮ ಬಯಕೆ. ಈಗ ಅಭ್ಯಾಸ ಮಾಡಲು ಹಲವು ಕ್ರೀಡಾಪಟುಗಳು ವಿಜಯಪುರಕ್ಕೆ ಹೋಗುತ್ತಾರೆ ಎಂದು ಕ್ರೀಡಾಪಟುಗಳಾದ ಯುವರಾಜ ಗಾಣಿಗೇರ, ನಾಗರಾಜ ಗಾಣಿಗೇರ ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-19-1238476657