
ಸೇಡಂ ತಾಲ್ಲೂಕಿನ 24 ಸಾವಿರ ರೈತರಿಗೆ ₹65 ಕೋಟಿ ಬೆಳೆ ವಿಮೆ ಪರಿಹಾರ ಜಮಾ
ಸೇಡಂ:2025-26ನೇ ಸಾಲಿನ ಬೆಳೆ ವಿಮೆ ಪರಿಹಾರ ಹಣವು ತಾಲ್ಲೂಕಿನ 24 ಸಾವಿರಕ್ಕೂ ಅಧಿಕ ರೈತರ ಖಾತೆಗೆ ₹65 ಕೋಟಿಗೂ ಬೆಳೆವಿಮೆ ಪರಿಹಾರ ಹಣ ಜಮಾವಣೆ ಆಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಪ್ರಜಾವಾಣಿಗೆ ಧೃಢಪಡಿಸಿವೆ.
ತಾಲ್ಲೂಕಿನಲ್ಲಿ ಒಟ್ಟು 46 ಸಾವಿರಕ್ಕೂ ಅಧಿಕ ರೈತರಿದ್ದು, ಮುಂಗಾರಿನ ಒಟ್ಟು 29,304 ರೈತರು ಬೆಳೆವಿಮೆ ಮಾಡಿಸಿದ್ದರು. ಅದರಲ್ಲಿ ಈಗಾಗಲೇ ಮೊದಲ ಕಂತಿನ(ಮದ್ಯಂತ ವಿಮೆ) ಒಟ್ಟು 29,304 ರೈತರಿಗೆ ಒಟ್ಟು ₹20.76 ಕೋಟಿ ಹಣ 2025ರ ಡಿಸೆಂಬರ್ ತಿಂಗಳಲ್ಲಿಯೇ ಜಮಾ ಆಗಿದೆ. ಎರಡನೇ ಕಂತಿನ ಹಿಂಗಾರಿನ ತೊಗರಿ 25,347 ರೈತರಿಗೆ ₹51 ಕೋಟಿ ಬೆಳೆ ವಿಮೆ ಪರಿಹಾರ ಜಮಾ ಆಗಬೇಕಿತ್ತು. ಅದರಲ್ಲಿ ಈಗಾಗಲೇ 24 ಸಾವಿರಕ್ಕೂ ರೈತರಿಗೆ ₹45 ಕೋಟಿಗೂ ಅಧಿಕ ಬೆಳೆ ವಿಮೆ ಪರಿಹಾರ ಕೆಲವು ದಿನಗಳ ಹಿಂದಷ್ಟೇ ಆಗಿದೆ. ತಾಲ್ಲೂಕಿನ ಮಳಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 1700ಕ್ಕೂ ಅಧಿಕ ರೈತರಿಗೆ ₹5 ಕೋಟಿ ವಿಮೆ ಪರಿಹಾರ ಮಾತ್ರ ಬಾಕಿಯಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವಿಶಾಲಕುಮಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ರೈತರು ಸಂರಕ್ಷಣಾ ಪೋರ್ಟಲನಲ್ಲಿ ತಮ್ಮ ಬೆಳೆವಿಮೆ ಸಂಖ್ಯೆ ಹಾಕಿ ಬೆಳೆ ವಿಮೆ ಪರಿಹಾರ ಸೇರಿದಂತೆ ತಮ್ಮ ಮಾಹಿತಿಯನ್ನು ಪರಿಶೀಲಿಸಬಹುದು. ಮಳಖೇಡ ಸೇರಿದಂತೆ ಉಳಿದ ಕೆಲವು ಗ್ರಾಮಗಳ ರೈತರಿಗೆ ಮುಂದಿನ ಕೆಲವೇ ದಿನಗಳಲ್ಲಿ ಹಣ ಜಮಾವಣೆ ಆಗಲಿದೆ ಎಂದು ಇಫ್ಕೋ ಟೋಕಿಯೋ ವಿಮಾ ಕಂಪೆನಿಯ ಅಧಿಕಾರಿಗಳು ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ರೈತರು ಈಗಾಗಲೇ 2026-27ನೇ ಸಾಲಿನ ಮುಂಗಾರು ಬೆಳೆ ಬಿತ್ತಿ, ಕೆಲವು ಕಡೆಗಳಲ್ಲಿ ರಾಶಿ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿನ ರೈತರು ಅನಾವೃಷ್ಟಿಯಿಂದ ಮುಂಗಾರು ಬೆಳೆಗಳನ್ನೇ ನಾಶಮಾಡಿದ್ದಾರೆ. ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಹಣ ಮುಂಗಾರು ಬೆಳೆ ಬಿತ್ತನೆ ಪೂರ್ವದಲ್ಲಿಯೇ ಜಮಾ ಆಗಬೇಕಿತ್ತು. ಆದರೆ ವಿನಾ ಕಾರಣ ಅಧಿಕಾರಿಗಳು ಮತ್ತು ವಿಮಾ ಕಂಪೆನಿಯವರು ವಿಳಂಬ ನೀತಿ ಅನುಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರೈತ ವಿನೋದ ದುಗನೂರ.
ರೂ.49 ಕೋಟಿ ಅತಿವೃಷ್ಟಿ ಪರಿಹಾರ
ತಾಲ್ಲೂಕಿನಲ್ಲಿ 2025-26ನೇ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ಹಾನಿಯಾದ ರೈತರ ಖಾತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಹೆಕ್ಟೇರ್ ತಾಲಾ ರೂ.8,500 ದಂತೆ ರೂ.17 ಸಾವಿರ ಜಮಾವಣೆ ಮಾಡಿವೆ. ಈ ಪರಿಹಾರವು ತಾಲ್ಲೂಕಿನ ಸುಮಾರು 30,563 ರೈತರಿಗೆ ರೂ.49,30 ಕೋಟಿ ಅತಿವೃಷ್ಟಿ ಪರಿಹಾರ ತಲುಪಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವಿಶಾಲಕುಮಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-31-1890860422