
ಮಂಡ್ಯ: ಮಳೆಗಾಲದಲ್ಲೂ 189 ಕೆರೆಗಳು ಭಣಭಣ
ಮಂಡ್ಯ: ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟ ಕಾರಣ ಜಿಲ್ಲೆಯ 189 ಕೆರೆಗಳು ಸಂಪೂರ್ಣ ಬರಿದಾಗಿವೆ. ಹೀಗಾಗಿ ಈ ಕೆರೆಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಜನ–ಜಾನುವಾರುಗಳಿಗೆ ನೀರಿನ ಸಂಕಷ್ಟ ಎದುರಾಗಿದೆ.
ಕಾವೇರಿ ನೀರಾವರಿ ನಿಗಮ (ಸಿ.ಎನ್.ಎನ್.ಎಲ್), ಹೇಮಾವತಿ ಎಡದಂಡೆ ನಾಲೆ (ಎಚ್.ಎಲ್.ಬಿ.ಸಿ), ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗ (ಪಿ.ಆರ್.ಇ.ಡಿ) ಮತ್ತು ಸಣ್ಣ ನೀರಾವರಿ (ಎಂ.ಐ) ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟು 968 ಕೆರೆಗಳು ಇವೆ. ಇವುಗಳಲ್ಲಿ ಭರ್ತಿಯಾಗಿರುವುದು ಕೇವಲ 15 ಕೆರೆ!
53 ಕೆರೆಗಳಲ್ಲಿ ಶೇ 75ರಷ್ಟು ನೀರು, 137 ಕೆರೆಗಳಲ್ಲಿ ಶೇ 50ರಷ್ಟು ನೀರು, 213 ಕೆರೆಗಳಲ್ಲಿ ಶೇ 25ರಷ್ಟು ನೀರು, 361 ಕೆರೆಗಳಲ್ಲಿ ಅಲ್ಪಸ್ವಲ್ಪ (ಶೇ 25ಕ್ಕಿಂತ ಕಡಿಮೆ) ನೀರು ಸಂಗ್ರಹವಾಗಿದೆ. ಕೆರೆಗಳು ಭರ್ತಿಯಾಗದ ಕಾರಣ ಇವುಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೇಸಿಗೆಯಲ್ಲಿ ಕೊಳವೆಬಾವಿಗಳು ಬತ್ತುವುದರಿಂದ ಕೃಷಿ ಚಟುವಟಿಕೆಗೂ ಧಕ್ಕೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಶೇ 42ರಷ್ಟು ಮಳೆ ಕೊರತೆ (ಮಿ.ಮೀ.ಗಳಲ್ಲಿ): ಪೂರ್ವ ಮುಂಗಾರು ಸಂದರ್ಭದಲ್ಲಿ 159.0 ವಾಡಿಕೆ ಮಳೆಗೆ 139.8ರಷ್ಟು ಮಾತ್ರ ಮಳೆಯಾಯಿತು. ಶೇ 12ರಷ್ಟು ಮಳೆ ಕೊರತೆಯಾದ ಕಾರಣ ಹಾಗೂ ಸಕಾಲದಲ್ಲಿ ಮಳೆ ಸುರಿಯದ ಕಾರಣ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ಮುಂಗಾರು ಅವಧಿಯಲ್ಲಿ ಇದುವರೆಗೆ 129.2ರಷ್ಟು ವಾಡಿಕೆ ಮಳೆಗೆ 80.8ರಷ್ಟು ಮಾತ್ರ ಮಳೆಯಾಗಿದೆ. ಅಂದರೆ ಜಿಲ್ಲೆಯಲ್ಲಿ ಶೇ 42 ಮಳೆ ಕೊರತೆಯಾಗಿದೆ. ಇದರಿಂದ ಕೆರೆ–ಕಟ್ಟೆಗಳು ನೀರಿಲ್ಲದೆ ಭಣಗುಡುತ್ತಿವೆ.
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 174 ಕೆರೆಗಳಿದ್ದು, ಈ ಬಾರಿ ಭರ್ತಿಯಾಗಿರುವುದು ಕೇವಲ 15 ಮಾತ್ರ. ಕೆಆರ್ಎಸ್ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 109.22 ಅಡಿ. ಈ ನೀರನ್ನು ಕುಡಿಯುವುದಕ್ಕೆ ಮೀಸಲಿಟ್ಟಿರುವ ಕಾರಣ, ಕೃಷಿ ಚಟುವಟಿಕೆ ಮತ್ತು ಕೆರೆ– ಕಟ್ಟೆಗಳನ್ನು ತುಂಬಿಸಲು ನೀರು ಹರಿಸುತ್ತಿಲ್ಲ ಎಂಬುದು ರೈತರ ಆರೋಪ.
ಕಾಲುವೆಗೆ ಬಾರದ ನೀರು: ಹೇಮಾವತಿ ಎಡದಂಡೆ ನಾಲಾ ವ್ಯಾಪ್ತಿಯಲ್ಲಿ ಬರುವ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ಮತ್ತು ಮಂಡ್ಯ ತಾಲ್ಲೂಕುಗಳಲ್ಲಿ 329 ಕೆರೆಗಳಿವೆ. ಇವುಗಳಲ್ಲಿ ಒಂದೇ ಒಂದು ಕೆರೆಯೂ ಭರ್ತಿಯಾಗಿಲ್ಲ. ಹೇಮಾವತಿ ಎಡದಂಡೆ ಕಾಲುವೆಗೆ ಹಾಸನ ಜಿಲ್ಲೆಯ ಗೊರೂರು ಬಳಿ ಹೇಮಾವತಿ ನದಿಗೆ ನಿರ್ಮಿಸಿರುವ ಹೇಮಾವತಿ ಜಲಾಶಯ (ಗೊರೂರು ಅಣೆಕಟ್ಟು) ನೀರಿನ ಮೂಲವಾಗಿದೆ. 213 ಕಿ.ಮೀ.ನಿಂದ ನೀರು ಕಾಲುವೆಗಳಿಗೆ ಹರಿದು ಬಾರದ ಕಾರಣ ಕೆರೆ–ಕಟ್ಟೆಗಳು ಒಣಗಿವೆ.
ಪಿ.ಆರ್.ಇ.ಡಿ ವ್ಯಾಪ್ತಿಯಲ್ಲಿರುವ 417 ಕೆರೆಗಳು ಮಳೆಯನ್ನು ಅವಲಂಬಿಸಿವೆ. ಈ ಬಾರಿ ಮಳೆ ಕೈಕೊಟ್ಟ ಕಾರಣ 14 ಕೆರೆಗಳಲ್ಲಿ ಮಾತ್ರ ಶೇ 75ರಷ್ಟು ನೀರು ಹೊಂದಿವೆ. 57 ಸಂಪೂರ್ಣ ಬರಿದಾಗಿದ್ದರೆ, 168 ಕೆರೆಗಳಲ್ಲಿ ಅಲ್ಪಸ್ವಲ್ಪ ನೀರು ಸಂಗ್ರಹವಾಗಿದೆ.
ಸಚಿವರ ಭರವಸೆ: ಮಂಡ್ಯ ನಗರದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ, ‘ಹೇಮಾವತಿ ಡ್ಯಾಂನಿಂದ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಕೆರೆತೊಣ್ಣೂರು ಭಾಗದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಸಂಬಂಧ ಹಾಸನ ಜಿಲ್ಲೆಯ ಸಚಿವರೊಂದಿಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಕೆರೆಗಳಲ್ಲಿ ಸಂಗ್ರಹವಾಗಿರುವ ನೀರಿನ ವಿವರ
ಇಲಾಖೆ;ಒಟ್ಟು ಕೆರೆ;ಪೂರ್ಣ ಭರ್ತಿ;ಶೇ 50ರಷ್ಟು;ಶೇ 25ಕ್ಕಿಂತ ಕಡಿಮೆ;ಸಂಪೂರ್ಣ ಖಾಲಿ
ಕಾವೇರಿ ನೀರಾವರಿ ನಿಗಮ;174;15;77;20;11
ಹೇಮಾವತಿ ಎಡದಂಡೆ ಕಾಲುವೆ;329;00;8;163;115
ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗ;417;00;43;168;57
ಸಣ್ಣ ನೀರಾವರಿ;48;00;9;10;6
ಒಟ್ಟು;968;15;137;361;189
ಪ್ರಸಕ್ತ ಸಾಲಿನ ಮಳೆ ವಿವರ (ಮಿ.ಮೀ.)
ತಿಂಗಳು;ವಾಡಿಕೆ;ವಾಸ್ತವ;ಹೆಚ್ಚುವರಿ/ಕೊರತೆ
ಏಪ್ರಿಲ್;46.6;19.1;–59
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-40-1406360813