ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಗೆ ಟಿ.ಶಿವಪ್ರಕಾಶ್‍ರವರ ಕೊಡುಗೆ ಅಪಾರ : ಚಿಕ್ಕಪ್ಪನಹಳ್ಳಿ ಷಣ್ಮುಖ

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

 

ಚಿತ್ರದುರ್ಗ: ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆ ಜಾರಿಗಾಗಿ ಹುಟ್ಟಿಕೊಂಡ ಜಿಲ್ಲಾ ನೀರಾವರಿ ಹೋರಾಟ ಸಮಿತಿಯಲ್ಲಿ ಟಿ.ಶಿವಪ್ರಕಾಶ್ ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂದು ರೈತ ಮುಖಂಡ ಟಿ.ನುಲೇನೂರು ಶಂಕರಪ್ಪ ಸ್ಮರಿಸಿದರು.

ಶುಕ್ರವಾರ ನಿಧನರಾದ ವಿಶ್ರಾಂತ ಪತ್ರಕರ್ತ ಟಿ.ಶಿವಪ್ರಕಾಶ್‍ಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನುಡಿನಮನದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜಮುಖಿಯಾಗಿ ಬದುಕಿದ ಟಿ.ಶಿವಪ್ರಕಾಶ್ ಸ್ನೇಯಮಯಿಯಾಗಿ ಎಲ್ಲರೊಂದಿಗೆ ಒಡನಾಟವಿಟ್ಟುಕೊಂಡು ನೀರಾವರಿ ಹೋರಾಟ ಸಮಿತಿಯ ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ಗುಣಗಾನ ಮಾಡಿದರು.

ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ ಪತ್ರಕರ್ತನಾಗಿದ್ದ ಟಿ.ಶಿವಪ್ರಕಾಶ್‍ರವರಲ್ಲಿ ಎಡ ಬಲ ಪಂಥೀಯ ಎಂಬ ಮನೋಭಾವನೆಯಿರಲಿಲ್ಲ. ವೈಯಕ್ತಿಕ ಬದುಕಿನ ಜೊತೆ ಪತ್ರಿಕಾವೃತ್ತಿಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರು.

ಸಾಕಷ್ಟು ಕಷ್ಠಗಳನ್ನು ಅನುಭವಿಸಿದರೂ ಬೇರೆಯವರು ತೊಂದರೆಯಲ್ಲಿದ್ದರೆ ಮರುಗುತ್ತಿದ್ದರು. ಎಲ್ಲರಿಗೂ ಧ್ವನಿಯಾಗುವ ಪತ್ರಕರ್ತರ ಸಂಕಟಕ್ಕೆ ಬೇರೆ ಯಾರು ಧ್ವನಿಯಾಗುವುದಿಲ್ಲ ಎನ್ನುವುದು ನೋವಿನ ಸಂಗತಿ. ಅಪ್ಪರ್‍ಭದ್ರಾ ಯೋಜನೆ ಅಧ್ಯಯನಕ್ಕೆ ಮೊದಲು ಒಪ್ಪಿಗೆ ಸೂಚಿಸಿ ಹಣಕಾಸಿನ ನೆರವು ನೀಡಿ  ಸದಾ ಸಮಿತಿಯ ಜೊತೆಗಿರುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಸಾಕಷ್ಟು ಪತ್ರಕರ್ತರು ತಮ್ಮ ಆರೋಗ್ಯ ಹದಗೆಟ್ಟರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಆರ್ಥಿಕ ಶಕ್ತಿಯಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸರ್ಕಾರದ ಗಮನ ಸೆಳೆದು ಚಿಕಿತ್ಸೆಗೆ ನೆರವು ದೊರಕಿಸುವಲ್ಲಿ ಪತ್ರಕರ್ತರು ಮುಂದಾದರೆ ಅಕಾಲಿಕವಾಗಿ ಎದುರಾಗುವ ಸಾವು ತಪ್ಪಿಸಬಹುದು.
ಒತ್ತಡದ ನಡುವೆ ಕೆಲಸ ಮಾಡುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆಯೂ ಕಾಳಜಿ ವಹಿಸುವ ಅಗತ್ಯತೆಯಿದೆ ಎಂದರು.

ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ ಇಪ್ಪತ್ತೈದು ವರ್ಷಗಳ ಹಿಂದೆ ಹುಟ್ಟಿಕೊಂಡ ಜಿಲ್ಲಾ ನೀರಾವರಿ ಹೋರಾಟ ಸಮಿತಿಗೆ ಟಿ.ಶಿವಪ್ರಕಾಶ್‍ರವರ ಕೊಡುಗೆ ಅಪಾರವಾಗಿತ್ತು. ಮಿತಭಾಷಿ, ಮೃದು ಸ್ವಭಾವದವರಾಗಿದ್ದ ಮೃತರು ಎಲ್ಲರ ಜೊತೆ ಬೆರೆಯುತ್ತಿದ್ದರು. ಎಲೆಮರೆಯ ಕಾಯಿಯಂತೆ ನೀರಾವರಿ ಹೋರಾಟ ಸಮಿತಿಯ ಎಲ್ಲಾ ಹೋರಾಟಕ್ಕೆ ಕೈಜೋಡಿಸಿದರು. ವೈಯಕ್ತಿಕ ಬದುಕನ್ನು ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಅಕಾಲಿಕ ಮರಣಕ್ಕೆ ತುತ್ತಾಗಬೇಕಾಯಿತು. ಭಗವಂತ ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಸುದ್ದಿಗಿಡುಗ ಪತ್ರಿಕೆ ಸಂಪಾದಕ ಶ.ಮಂಜುನಾಥ್ ಮಾತನಾಡುತ್ತ ಅಜಾತ ಶತ್ರುವಾಗಿದ್ದ ಟಿ.ಪ್ರಕಾಶ್ ಒಂದು ಕಾಲದಲ್ಲಿ ನನಗೆ ಅನ್ನದಾತರಾಗಿದ್ದರು ಎಂದು ಕೃತಜ್ಞತಾ ಭಾವದಿಂದ ನೆನಪಿಸಿಕೊಂಡರು. ಯಾರಾದರೂ ಪತ್ರಕರ್ತರ ಆರೋಗ್ಯ ಕೆಟ್ಟಾಗ ಅವರ ನೆರವಿಗೆ ಸರ್ಕಾರ ಮುಂದೆ ಬರಲಿ ಎಂದು ಒಕ್ಕೊರಲಿನಿಂದ ಪತ್ರಕರ್ತರೆಲ್ಲಾ ಸರ್ಕಾರದ ಗಮನ ಸೆಳೆಯೋಣ ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಅಹೋಬಲಪತಿ ಮಾತನಾಡಿ ಟಿ.ಶಿವಪ್ರಕಾಶ್‍ರವರಲ್ಲಿ ಬದ್ದತೆಯಿತ್ತು. ಅಪ್ಪತಪ್ಪಿ ಯಾರ ಜೊತೆಯೂ ತಕರಾರು ಮಾಡಿಕೊಂಡವರಲ್ಲ. ಎಲ್ಲರ ಪ್ರೀತಿಯ ಶಿವಣ್ಣ ಎಂದೆ ಚಿರಪರಿಚಿತರಾಗಿದ್ದರು. ಜೀವಿತಾವಧಿಯಲ್ಲಿ ಪತ್ರಕರ್ತರು ಒಬ್ಬರನ್ನೊಬ್ಬರು ದ್ವೇಷಿಸುವ ಬದಲು ಸಿಕ್ಕ ಸಮಯದಲ್ಲಿ ಕಷ್ಟ-ಸುಖಗಳನ್ನು ಪರಸ್ಪರ ಹಂಚಿಕೊಂಡಾಗ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಪತ್ರಕರ್ತ ಲಕ್ಷ್ಮಣ್ ಮಾತನಾಡಿ ದಾವಣಗೆರೆಯಿಂದ ಪ್ರಕಟಗೊಳ್ಳುತ್ತಿದ್ದ ಜನತಾವಾಣಿ ದಿನಪತ್ರಿಕೆಗೆ ಜಿಲ್ಲಾ ವರದಿಗಾರರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಟಿ.ಶಿವಪ್ರಕಾಶ್ ಎಲ್ಲರ ಒಡನಾಡಿಯಾಗಿದ್ದರು. ಯಾರ ಮನಸ್ಸಿಗೂ ಬೇಸರ ನೋವಾಗದಂತೆ ಒಂದು ದಿನವೂ ಮಾತನಾಡಿದವರಲ್ಲ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಚಂದ್ರವಳ್ಳಿ ಪತ್ರಿಕೆ ಸಂಪಾದಕ ಹೆಂಜಾರಪ್ಪ ಮಾತನಾಡುತ್ತ ಟಿ.ಶಿವಪ್ರಕಾಶ್ ಎಲ್ಲರ ಪ್ರೀತಿ ವಿಶ್ವಾಸಗಳಿಸಿ ಸ್ನೇಹಮಯಿಯಾಗಿ ಜೀವಿಸಿದವರು. ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಎಲ್ಲಾ ಸಭೆ ಸಮಾರಂಭ, ಹೋರಾಟಗಳಿಗೆ ಶಕ್ತಿಯಾಗಿದ್ದರು ಎಂದು ಬಣ್ಣಿಸಿದರು.

ನುಡಿನಮನದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್‍ಗೌಡಗೆರೆ ಮಾತನಾಡುತ್ತ ಟಿ.ಶಿವಪ್ರಕಾಶ್‍ರವರು ಇಷ್ಟು ಬೇಗನೆ ಎಲ್ಲರನ್ನು ಬಿಟ್ಟು ಅಗಲುತ್ತಾರೆಂದು ನಿರೀಕ್ಷಿಸಿರಲಿಲ್ಲ. ಆದರೆ ಹುಟ್ಟಿದ ಪ್ರತಿಯೊಬ್ಬರು ಒಂದು ದಿನ ಇಹಲೋಕ ತ್ಯಜಿಸಲೇಬೇಕು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅವರ ಕುಟುಂಬಕ್ಕೆ ನೆರವು ನೀಡುವ ಬಗ್ಗೆ ಭರವಸೆ ನೀಡಿದರು.

ದೃಶ್ಯ ಮಾಧ್ಯಮದ ಬಸವರಾಜ್ ಮುದನೂರು, ವಿನಯ್ ಸೇರಿದಂತೆ ಅನೇಕ ಪತ್ರಕರ್ತರು ನುಡಿನಮನದಲ್ಲಿ ಪಾಲ್ಗೊಂಡಿದ್ದರು.

The post ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಗೆ ಟಿ.ಶಿವಪ್ರಕಾಶ್‍ರವರ ಕೊಡುಗೆ ಅಪಾರ : ಚಿಕ್ಕಪ್ಪನಹಳ್ಳಿ ಷಣ್ಮುಖ first appeared on Kannada News | suddione.



source https://suddione.com/t-sivaprakashrams-contribution-to-chitradurga-district-irrigation-struggle-committee-is-immense-chikppanahalli-shanmukh/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ