ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿ ಸಂಗಮೇಶ್ವರ ದೇವಸ್ಥಾನ ಬಳಿ ಶ್ರೀರಾಮನ ವಿಗ್ರಹ ಪತ್ತೆಯಾಗಿದೆ. ನವೆಂಬರ್ 17ರಂದು ದೇವಸ್ಥಾನವನ್ನು ನೆಲಸಮ ಮಾಡಿ, ಶ್ರೀರಾಮ ವಿಗ್ರಹವನ್ನು ಎಸೆಯಲಾಗಿತ್ತು. ಇದೀಗ ವಿಗ್ರಹ ಸಿಕ್ಕಿದೆ.
ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಜಮೀನಿನಲ್ಲಿ, ನೂರಾರು ವರ್ಷದ ಇತಿಹಾಸವಿರುವ ಶ್ರೀರಾಮನ ದೇವಸ್ಥಾನವಿತ್ತು. ಬೆಂಗಳೂರಿನ ವ್ಯಕ್ತಿಯೊಬ್ಬರು ದೇವಸ್ಥಾನ ಜಮೀನು ಖರೀದಿ ಮಾಡಿದ್ದರು. ಬೆಂಗಳೂರಿನ ವಿಮಲ್ ರಾಜನ್ ಎಂಬುವ ವ್ಯಕ್ತಿ ರಾತ್ರೋರಾತ್ರಿ ದೇವಸ್ಥಾನವನ್ನು ಕೆಡವಿ ವಿಗ್ರಹವನ್ನು ವೇದಾವತಿ ನದಿಯಲ್ಲಿ ಬಿಸಾಡಿದ್ದರು ಎಂದು ಹೇಳಲಾಗಿತ್ತು.
ಈ ಘಟನೆ ಸಂಬಂಧ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿದ ಪೊಲೀಸರು ತೀವ್ರ ತನಿಖೆ ನಡೆಸಿದ್ದರು. ಕೊನೆಗೂ ವಿಗ್ರಹ ಪತ್ತೆಯಾಗಿದ್ದು, ಇಂದು ವೇದಾವತಿ ನದಿಯಲ್ಲಿ ವಿಗ್ರಹ ಇರುವುದು ಪತ್ತೆಯಾಗಿದೆ. ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಆನಂದ್ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಶ್ರೀರಾಮನ ವಿಗ್ರಹವನ್ನು ನದಿಯಿಂದ ಮೇಲೆ ತೆಗೆದು ಪೊಲೀಸ್ ಠಾಣೆಗೆ ತಂದಿಡಲಾಗಿದೆ.
The post ಕಡೆಗೂ ಸಿಕ್ತು ಜಮೀನಿನ ಆಸೆಗಾಗಿ ಬಿಸಾಡಿದ್ದ ಐತಿಹಾಸಿಕ ಶ್ರೀರಾಮನ ವಿಗ್ರಹ..! first appeared on Kannada News | suddione.
source https://suddione.com/the-idol-of-historical-sri-rama-who-was-abandoned-for-the-desire-of-land-was-found/