
ನಿಮ್ಮ ಮಗನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ: ತಮಿಳುನಾಡು ಜನರಿಗೆ CM ವಿಜಯ್
ಚೆನ್ನೈ: ‘ನಿಮ್ಮ ಅಣ್ಣನನ್ನು, ನಿಮ್ಮ ತಮ್ಮನನ್ನು, ನಿಮ್ಮ ಮಗನನ್ನೇ ಗೆಲ್ಲಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ. ನಿಮ್ಮ ಕರ್ತವ್ಯ ಮುಗಿಯಿತು ಎಂದು ನಮ್ಮನ್ನು ಬಿಟ್ಟು ಬಿಡಬೇಡಿ. ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನೀವು ನಮ್ಮೊಂದಿಗೆ ಇರಬೇಕಾದ ಅಗತ್ಯವಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್ ಶನಿವಾರ ಹೇಳಿದ್ದಾರೆ.
ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್ನಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿರುವ ಅವರು, ‘ನಿಮಗಾಗಿ ನಾವು ರೂಪಿಸಿರುವ ಎಲ್ಲಾ ಯೋಜನೆಗಳು ಸಾಕಾರಗೊಳ್ಳುವುದು ನಿಮ್ಮ ಬೆಂಬಲವಿದ್ದರೆ ಮಾತ್ರ. ಜನರೇ ನಿಜವಾದ ಆಡಳಿತಗಾರರು; ನಾವೆಲ್ಲರೂ ನಿಮ್ಮ ಸೇವಕರು. ಬನ್ನಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ’ ಎಂದು ಕರೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಇದೇ ಮೊದಲ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಅವರು, ‘ಭ್ರಷ್ಟಾಚಾರ ನಿರ್ಮೂಲನೆಯು ಸ್ವಾತಂತ್ರ್ಯಕ್ಕೆ ಸಮಾನವಾದದ್ದೇ ಆಗಿದೆ’ ಎಂದು ಪ್ರತಿಪಾದಿಸಿದ್ದಾರೆ. ‘ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕಲು ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ವಿರೋಧಿ ಶಕ್ತಿಗಳು ಹಾಗೂ ಆಡಳಿತದ ವಿರುದ್ಧದ ಪಿತೂರಿಗಳನ್ನು ಹತ್ತಿಕ್ಕಲಾಗುವುದು’ ಎಂದು ಹೇಳಿದ್ದಾರೆ.
‘ಆಡಳಿತಾತ್ಮಕ ವಿಚಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುವಾಗ, ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ನೀತಿಗಳನ್ನು ಸದಾ ವಿರೋಧಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
‘ರಾಜ್ಯದ ಹಕ್ಕುಗಳಿಗಾಗಿನ ಹೋರಾಟವನ್ನು ಎಂದಿಗೂ ಕೈಬಿಡುವುದಿಲ್ಲ, ಸಾರ್ವಜನಿಕ ಹಿತಾಸಕ್ತಿಯೇ ನಮ್ಮ ಆದ್ಯತೆ. 2036ರ ವೇಳೆಗೆ ತಮಿಳುನಾಡಿನ ಆರ್ಥಿಕತೆಯನ್ನು ₹1.5 ಟ್ರಿಲಿಯನ್ಗೆ ಏರಿಸೋಣ, ಉತ್ತಮ ಆಡಳಿತಕ್ಕೆ ಜನರ ನಿರಂತರ ಬೆಂಬಲ ಅತ್ಯಗತ್ಯ’ ಎಂದು ಕರೆ ನೀಡಿದ್ದಾರೆ.