
ಯರಗಟ್ಟಿ: ಮಳೆ ಕೊರತೆಯಿಂದ ನಾಲ್ಕ ಕ್ವಿಂಟಲ್ ಹೆಸರ ಬರೋದು ಖಾತ್ರಿ ಇಲ್ಲ
ಯರಗಟ್ಟಿ: ‘ನಾಲ್ಕು ಎಕರೆ ಜಮೀನಿನ್ಯಾಗ ಹೆಸರ ಬೆಳಿದೇವಿ. ಹೋದ ವರ್ಷ ಇದ ಭೂಮ್ಯಾಗ 20 ಕ್ವಿಂಟಲ್ ಇಳುವರಿ ಬಂದಿತ್ತು. ಈ ಸಲಾ ನಾಲ್ಕ ಕ್ವಿಂಟಲ್ ಬರೋದು ಖಾತ್ರಿ ಇಲ್ಲ...’
ತಾಲ್ಲೂಕಿನ ಕುರಬಗಟ್ಟಿಯ ರೈತ ಗಂಗಾಧರ ಪ್ರಕಾಶ ಉಳ್ಳೇಗಡ್ಡಿ ‘ಪ್ರಜಾವಾಣಿ’ ಮುಂದೆ ತಮ್ಮ ಸಂಕಷ್ಟ ವಿವರಿಸಿದ್ದು ಹೀಗೆ.
‘ಇನ್ನೊಂದ ಹೊಲದಾಗ ಗೊಂಜಾಳ ಬೆಳಿದೇವಿ. ಮಳಿ ಕೈಕೊಟ್ಟಿದ್ದಕ್ಕ ಅದು ಹೇಳಿಕೊಳ್ಳುವ್ಹಂಗ ಬಂದಿಲ್ಲ. ದನಕ್ಕ ಮೇವೂ ಆಗಾತಿಲ್ಲ. ಶೇಂಗಾ ಕಾಯಿನೂ ಬಿಟ್ಟಿಲ್ಲ, ಬಳ್ಳಿನೂ ಬೆಳಿದಿಲ್ಲ’ ಎನ್ನುತ್ತ ಬೇಸರ ವ್ಯಕ್ತಪಡಿಸಿದರು.
‘ಮುಂಗಾರು ಹಂಗಾಮಿನ ಆರಂಭದಾಗ ಮಳಿ ಆಗಿದ್ದನ್ನೇ ನಂಬಿ ಬಿತ್ತಗಿ ಮಾಡೇವ್ರಿ. ನಂದ ಆರು ಎಕರೆ ಜಮೀನ ಐತ್ರಿ. ನಾಲ್ಕ ಎಕರೆದಾಗ ಗೊಂಜಾಳ, ಎರಡು ಎಕರೆದಾಗ ಹೆಸರ ಬೆಳಿದೇವ್ರಿ. ಸಾಲ ಸೋಲ ಮಾಡಿ ಬೀಜ, ಗೊಬ್ಬರಾ ತಂದ ಹಾಕೇವ್ರಿ. ಸಿಕ್ಕಾಪಟ್ಟೆ ಖರ್ಚು ಮಾಡೇವ್ರಿ. ಆದ್ರ ಇಳುವರಿನ ಬಂದಿಲ್ರಿ. ಈಗ ಸಾಲ ತೀರಿಸೋದು ಕಷ್ಟ ಆಗೇತ್ರಿ’ ಎಂದು ರೈತ ಬಸವರಾಜ ಯರಝರ್ವಿ ತಿಳಿಸಿದರು.
‘ಆಗಾಗ ಜಿಟಿಟಿ ಮಳಿ ಆಗೇತ್ರಿ. ವಾತಾವರಣ ಅಷ್ಟ ತಂಪಾಗಿದ್ದ ಬಿಟ್ರ, ನೆಲಾನ ತೊಯ್ದಿಲ್ರಿ’ ಎಂದರು.
‘ನಾವು ಗೊಂಜಾಳ, ಹೆಸರ, ಶೇಂಗಾ ಬೆಳಿದೇವ್ರಿ. ಮಳಿ ಕೈಕೊಟ್ಟಿದ್ದಕ್ಕ ಯಾವ ಬೆಳಿನೂ ಕೈಗೆ ಬಂದಿಲ್ರಿ. ಎಲ್ಲಾ ಒಣಗಿ ಹೋಗ್ಯಾವ್ರಿ. ಸರ್ಕಾರದಾವ್ರ ಏನಾರ ಆಸರ ಆಗ್ತಾರೇನೂ ಅಂತಾ ಎದುರು ನೋಡ್ಕೊಂತ ಕುಂತೇವ್ರಿ’ ಎನ್ನುತ್ತಾರೆ ಮತ್ತೊಬ್ಬ ರೈತ ಶಿವಾನಂದ ಉಳ್ಳೇಗಡ್ಡಿ.
ಈ ರೈತರಷ್ಟೇ ಅಲ್ಲ: ಯರಗಟ್ಟಿ ತಾಲ್ಲೂಕಿನಲ್ಲಿ ಬಹುತೇಕ ರೈತರು ಹೀಗೆ ಸಮಸ್ಯೆ ವಿವರಿಸುತ್ತಾರೆ. ವಿವಿಧ ಗ್ರಾಮಗಳಲ್ಲಿ ಒಂದು ಸುತ್ತು ಹಾಕಿದರೆ ಹಾಕು. ಬರದ ಚಿತ್ರಣ ಕಣ್ಣೆದುರು ಬಂದು ನಿಲ್ಲುತ್ತದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-21-1004692265