
ಕಾಫಿನಾಡಿನಲ್ಲಿ ಆನೆ– ಮಾನವ ಸಂಘರ್ಷ: ಬೇಕಿದೆ ಕಾರಿಡಾರ್, ಸಹಬಾಳ್ವೆಯ ಬದುಕು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅನಾದಿ ಕಾಲದಿಂದಲೂ ಕಾಡಾನೆ ಮಾನವ ಒಟ್ಟಿಗೆ ಜೀವಿಸುತ್ತಿದ್ದರೂ ಇತ್ತೀಚಿನ ದಶಕಗಳಲ್ಲಿ ಕಾಡಾನೆ ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣಿಸಿದೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಸಂಘರ್ಷ ಇಲ್ಲದ ದಿನವೇ ಇಲ್ಲ ಎನ್ನುವಂತಾಗಿದೆ.
ಕೇವಲ ಕಾಡಾನೆ ಗಳಿಂದ ಬೆಳೆನಾಶ ಮಾತ್ರವೇ ಆಗುತ್ತಿಲ್ಲ. ಮಾನವ ಜೀವ ಹಾನಿಯೂ ಆಗುತ್ತಿರುವುದು ಜನರ ಅಸಹನೆಗೆ ಕಾರಣವಾಗಿದೆ. ಇರುವ ಎಲ್ಲ ಕಾಡಾನೆಗಳನ್ನು ಹಿಡಿದು ಒಂದು ವಿಶಾಲ ಪ್ರದೇಶದಲ್ಲಿ ಕೂಡಿ ಹಾಕಿ ಬಿಡಿ ಎಂದು ಹೇಳುವಷ್ಟರ ಮಟ್ಟಿಗೆ ಅಸಹನೆ ಹೆಚ್ಚಿದೆ.
ಈ ವರ್ಷದ ಆರಂಭದಿಂದಲೇ ಕಾಡಾನೆ ದಾಳಿಗೆ ಮೃತಪಡುವವರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಕೇವಲ ವಯಸ್ಸಾದವರು, ತೋಟದ ಕಾರ್ಮಿರು ಮಾತ್ರವಲ್ಲ, ಈ ವರ್ಷ ವಿದ್ಯಾರ್ಥಿನಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿಯವರ ಪತ್ನಿ, ಪ್ರವಾಸಿಗ ಮಹಿಳೆ ಹೀಗೆ ಸಮಾಜದ ನಾನಾ ಸ್ತರದ ಜನರು ಆನೆ ದಾಳಿಗೆ ಸಿಲುಕಿ ಮೃತಪಟ್ಟರು. ಒಟ್ಟಾರೆ, ಕಾಡಾನೆ ದಾಳಿಗೆ ಸಿಲುಕಿ ಈ 8 ತಿಂಗಳಿನಲ್ಲಿ 9 ಮಂದಿ ಮೃತಪಟ್ಟಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಾಡಾನೆಗಳ ವಿರುದ್ಧ ಜನರೂ ಸಿಡಿದಿದ್ಧಾರೆ. ಕಳೆದ ವರ್ಷ ಸೆರೆ ಸಿಕ್ಕ ‘ಕಾಜೂರು ಕರ್ಣ‘ ಎಂಬ ಹೆಸರಿನ ಕಾಡಾನೆ ಮೈಮೇಲೆ ಎಲ್ಲಾ ಕಡೆ ಕಲ್ಲಿನಿಂದ ಹೊಡೆದ ಗಾಯಗಳಿದ್ದವು. ಕಾಲಿನಿಂದ ಹೊರ ತೆಗೆದದ್ದು 2 ಗುಂಡುಗಳು, ಗಾಯದಿಂದ ಹೊರ ಬಂದಿದ್ದು ಬಕೆಟ್ಗಟ್ಟಲೆ ಕೀವು. ಇದು ಕೇವಲ ಒಂದು ಆನೆಯ ಕಥೆಯಲ್ಲ. ತೋಟಗಳಲ್ಲಿ ಅಲೆಯುವ ಕಾಡನೆಗಳ ವ್ಯಥೆಯೂ ಇದೇ ಆಗಿದೆ. ಹೀಗಾಗಿ, ಕಾಡಾನೆಗಳು ಸಹ ಮನುಷ್ಯರನ್ನು ಕಂಡರೆ ಸಾಕು ದಾಳಿ ಎಸಗುತ್ತಿವೆ.
ಸಂಘರ್ಷ ತಡೆಗೆ ಈ ಹಿಂದಿನ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಅವರು, ‘ಒಂದು ನಿರ್ದಿಷ್ಟ ಜಾಗದಲ್ಲಿ ಸುತ್ತಲೂ ರೈಲ್ವೆ ಬ್ಯಾರಿಕೇಡ್ ಹಾಕಿ, ತೊಂದರೆ ಕೊಡುವ ಎಲ್ಲ ಆನೆಗಳನ್ನೂ ಅಲ್ಲಿ ಇರಿಸುವ ಯೋಜನೆ ರೂಪಿಸಿದ್ದರು. ಆದರೆ, ಈಗ ಖಾತೆ ಬದಲಾವಣೆಯ ನಂತರ ಈ ಯೋಜನೆ ಕಾರ್ಯಗತವಾಗುತ್ತದೆಯೇ ಇಲ್ಲವೇ ಎಂಬುದು
ಅರಣ್ಯದ ಸುತ್ತಲೂ ರೈಲ್ವೆ ಬ್ಯಾರಿಕೇಡ್ ಹಾಕಿದರೆ ಕಾಡಾನೆ ಮಾನವ ಸಂಘರ್ಷವನ್ನು ಶಾಶ್ವತವಾಗಿ ತಡೆಯಬಹುದು ಎಂಬ ಅಭಿಪ್ರಾಯವೂ ಇದೆ. ಆದರೆ, ಎಲ್ಲ ಕಡೆ ಬ್ಯಾರಿಕೇಡ್ ಹಾಕುವ ಭೌಗೋಳಿಕ ರಚನೆ ಜಿಲ್ಲೆಯಲ್ಲಿಲ್ಲ. ಹೀಗಾಗಿ, ಇದು ಸಹ ಸಂಘರ್ಷ ತಡೆಗೆ ಶಾಶ್ವತ ಪರಿಹಾರ ಕ್ರಮ ಆಗದು.
ಕಾಡಾನೆಗಳ ಸಂಚಾರಕ್ಕೆ ಇಲ್ಲ ದಾರಿ!
ಆನೆ ನಡೆದಿದ್ದೇ ದಾರಿ ಎಂಬ ಮಾತು ಈಗ ಸುಳ್ಳಾಗುತ್ತಿದೆ. ಕಾಡಾನೆಗಳಿಗೆ ನಡೆಯಲು ದಾರಿಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಬಹುತೇಕ ಪರಿಸರವಾದಿಗಳ ಅಭಿಪ್ರಾಯ.
ಚಾಲುಕ್ಯರ ಕಾಲದಲ್ಲಿ 60 ಸಾವಿರ ಆನೆಗಳು ಅವರ ಗಜಸೇನೆಯಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ಸೇನೆಯಲ್ಲೇ 60 ಸಾವಿರ ಆನೆಗಳಿದ್ದರೆ, ಇನ್ನು ಕಾಡಿನಲ್ಲಿ ಎಷ್ಟಿರಬಹುದಿತ್ತು? ಈಗ ಅವುಗಳ ಸಂಖ್ಯೆಯನ್ನು ಗಮನಿಸಿದರೆ ಮುಂದೆ ಅವುಗಳೂ ಡೈನೊಸಾರಸ್ ತರಹ ಆಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಾರೆ.
ಮುಖ್ಯವಾಗಿ, ಕಾಡಾನೆಗಳು ಹಿಂಡಿನೊಂದಿಗೆ ಬಹು ಹಿಂದಿನಿಂದಲೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡುತ್ತಲೇ ಇವೆ. ಆಹಾರ ಮತ್ತು ಸಂತಾನೋತ್ವತ್ತಿಗಾಗಿ ಅವು ಒಂದೇ ಕಡೆ ನಿಲ್ಲದೇ ಬಹುದೂರದವರೆಗೂ ಹೋಗುತ್ತವೆ. ಈ ಸುದೀರ್ಘ ಪ್ರಯಾಣ ಪ್ರತಿ ಆನೆಯ ಜೀನ್ನಲ್ಲೇ ಇರುತ್ತದೆ. ಈಗ ಅವುಗಳ ನಡೆಯುವ ಹಾದಿಯಲ್ಲಿ ಜಲಾಶಯಗಳು ನಿರ್ಮಾಣವಾಗಿವೆ, ತೋಟಗಳು ಸೃಷ್ಟಿಯಾಗಿವೆ. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಕಾಡಾನೆ ಮಾನವ ಸಂಘರ್ಷ ಅತಿಯಾಗುತ್ತಿದೆ.
ಈಗ ಆನೆಗಳು ಒಂದು ಬಗೆಯ ಜೈಲಿನಲ್ಲಿ ಇದ್ದಂತಹ ಸ್ಥಿತಿ ಇದೆ. ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳು ನಿರ್ಮಾಣವಾದ ಬಳಿಕವಂತೂ ಅವುಗಳ ವಲಸೆ ಬಹುತೇಕ ನಿಂತಿದೆ. ಇದು ಸಹ ಸಂಘರ್ಷ ಹೆಚ್ಚಲು ಕಾರಣ ಎನಿಸಿದೆ.
ದತ್ತು ಸ್ವೀಕಾರ ಯೋಜನೆ ಜಾರಿಯಾಗಲಿ
ಕಾಡಾನೆಗಳ ಸ್ಥಿತಿ ಒಂದು ಬಗೆಯದ್ದಾದರೆ ಶಿಬಿರದಲ್ಲಿರುವ ಸಾಕಾನೆಗಳ ಸ್ಥಿತಿಯೂ ಅಷ್ಟೇ ದಯನೀಯವಾಗಿದೆ. ಹೆಣ್ಣಾನೆಗಳ ಕೊರತೆಯಿಂದ ಅವುಗಳು ಬಳಲಿವೆ.
ಮತ್ತೊಂದೆಡೆ ಶಿಬಿರದಲ್ಲಿರುವ ಆನೆಗಳಿಗೆ ಸಾಕಾಗುವಷ್ಟು ಪೌಷ್ಠಿಕ ಆಹಾರ ನೀಡುವುದು ಮತ್ತು ಅವುಗಳ ನಿರ್ವಹಣೆಯೂ ಬಹು ದುಬಾರಿ ಎನಿಸಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಇಎಸ್ (ಏಷ್ಯನ್ ಎಲಿಫಾಂಟ್ ಸಪೋರ್ಟ್) ಸಂಸ್ಥೆಯ ಕರ್ನಾಟಕದ ಪ್ರತಿನಿಧಿ ಡಾ.ಮಮತಾ ಸತ್ಯನಾರಾಯಣ, ‘ಮೈಸೂರು ಮೃಗಾಲಯದಲ್ಲಿ ಪ್ರತಿ ಪ್ರಾಣಿಯನ್ನೂ ದತ್ತು ಸ್ವೀಕರಿಸಲು ಅವಕಾಶ ಇದೆ. ಸಾಕಷ್ಟು ಮಂದಿ ಆ ಪ್ರಾಣಿಗಳ ಆಹಾರಕ್ಕೆ ಒಂದು ವರ್ಷಕ್ಕೆ ತಗುಲುವ ವೆಚ್ಚವನ್ನು ಪಾವತಿಸಿ ಹೃದಯವೈಶಾಲ್ಯತೆ ಮೆರೆದಿದ್ದಾರೆ. ಇದೇ ಬಗೆಯ ದತ್ತು ಸ್ವೀಕಾರ ಯೋಜನೆಯನ್ನು ಶಿಬಿರದಲ್ಲಿರುವ ಆನೆಗಳಿಗೂ ಜಾರಿಗೆ ತಂದರೆ, ಅವುಗಳಿಗೂ ಪೌಷ್ಠಿಕ ಆಹಾರ ದೊರೆಯುತ್ತದೆ ಮಾತ್ರವಲ್ಲ ನಿರ್ವಹಣಾ ವೆಚ್ಚವೂ ಇಳಿಕೆಯಾಗುತ್ತದೆ ಎಂದು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-51-1369512257