
ಸುಬ್ಬು ಪಾತ್ರ ನನಗಿಷ್ಟ.. ಸೆಟ್ಗೆ ಭೇಟಿ ಕೊಟ್ಟ ಅಭಿಮಾನಿ ಬಗ್ಗೆ ಅಮೋಘ್ ಏನಂದ್ರು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಶ್ರಾವಣಿ ಸುಬ್ರಮಣ್ಯ’ ಮುಕ್ತಾಯದ ಹಂತದಲ್ಲಿದೆ. ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿರುವ ಶ್ರಾವಣಿ ಸುಬ್ರಮಣ್ಯ ಕೊನೆಯ ಸಂಚಿಕೆಗಳು ಪ್ರಸಾರವಾಗುತ್ತಿವೆ.
ಸುಬ್ರಮಣ್ಯ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ಅಮೋಘ್ ಆದಿತ್ಯ ತಮ್ಮ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಧಾರಾವಾಹಿ ಮುಕ್ತಾಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷ ಏನೆಂದರೆ ಅಭಿಮಾನಿಯೊಬ್ಬರು ಧಾರಾವಾಹಿ ಚಿತ್ರೀಕರಣದ ಸೆಟ್ಗೆ ಬಂದು ಉಡುಗೊರೆ ಕೊಟ್ಟ ಬಗ್ಗೆ ನಟ ಮಾಹಿತಿ ಹಂಚಿಕೊಂಡಿದ್ದಾರೆ.
ನಟ ಅಮೋಘ್ ಆದಿತ್ಯ ವಿಡಿಯೊದಲ್ಲಿ ಹೇಳಿದ್ದೇನು?
‘ಇನ್ನೇನು ಕೆಲವೇ ದಿನಗಳಲ್ಲಿ ಧಾರಾವಾಹಿ ಮುಗಿಯಲಿದೆ. ಈಗ ಸಿನಿಮಾ ಮಾಡಬೇಕಾ? ಧಾರಾವಾಹಿಯಲ್ಲಿ ನಟಿಸಬೇಕಾ ಎಂಬ ಗೊಂದಲದಲ್ಲಿ ಮನೆಗೆ ಹೊರಟಿದ್ದೆ. ಆದರೆ ಹೊರಡುವ ಮುಂಚೆ ಇಂದು ನಡೆದ ಘಟನೆ ಬಗ್ಗೆ ನಿಮಗೆಲ್ಲಾ ಹೇಳಲೇಬೇಕು’ ಎಂದಿದ್ದಾರೆ.
‘ಒಂದು ಹುಡುಗಿ ಮೈಸೂರಿನಿಂದ ನಮ್ಮ ಸೆಟ್ಗೆ ಬಂದು ನಾನು ಮಾಡುವ ಸುಬ್ಬು ಪಾತ್ರ ಇಷ್ಟ ಅಂತ ಹೇಳಿ ನನಗೊಂದು ವಾಚ್ ಅನ್ನು ಉಡುಗೊರೆ ಕೊಟ್ಟಿದ್ದಾರೆ. ಅದನ್ನು ನೋಡಿ ನನಗೆ ಎಷ್ಟು ಖುಷಿ ಆಯ್ತು ಅಂದ್ರೆ, ನಾನು ನಿರ್ವಹಿಸುತ್ತಿರುವ ಪಾತ್ರ ಇಷ್ಟೊಂದು ಮಟ್ಟಿಗೆ ತಲುಪಿದೆ ಎಂಬ ಖುಷಿ ಒಂದು ಕಡೆಯಾದರೆ, ಮೈಸೂರಿನಿಂದ ಬಸ್ಸಿನಲ್ಲಿ ಪ್ರಯಾಣ ಮಾಡಿ, ನೇರವಾಗಿ ಸೆಟ್ಗೆ ಬಂದು ನನಗೆ ವಾಚ್ ಕೊಟ್ಟಿದ್ದಾರೆ. ಕಲಾವಿದರಿಗೆ ಇಷ್ಟೊಂದು ಪ್ರಶಂಸೆ ಸಿಕ್ಕಿದಾಗ ಇನ್ನು ಹೆಚ್ಚು ಒಳ್ಳೆಯ ಪಾತ್ರಗಳನ್ನು ಮಾಡಬೇಕೆಂದು ಆಸೆಯಾಗುತ್ತದೆ. ನಿಮ್ಮ ಪ್ರೀತಿ, ಅಭಿಮಾನಕ್ಕೆ ಸದಾ ಚಿರಋಣಿಯಾಗಿರುತ್ತೇನೆ’ ಎಂದು ಹೇಳಿದ್ದಾರೆ.
‘ಹೂಮಳೆ’, ‘ದೊರೆಸಾನಿ’, ‘ಸತ್ಯ’, ‘ಗೀತಾ’ ‘ಅಂತರಪಟ’ ‘ಲಕ್ಷ್ಮೀ ಟಿಫನ್ ರೂಮ್’ ಧಾರಾವಾಹಿಗಳಲ್ಲಿ ಫೋಷಕ ಪಾತ್ರಗಳಲ್ಲಿ ನಟ ಅಮೋಘ್ ಆದಿತ್ಯ ನಟಿಸಿದ್ದಾರೆ. ಬಳಿಕ ಶ್ರಾವಣಿ ಸುಬ್ರಮಣ್ಯದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ನಟ ಅಮೋಘ್ ಆದಿತ್ಯ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.