
ಮುಂಡರಗಿ ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಗುಳೆ ಹೊರಟ ಕೃಷಿ ಕಾರ್ಮಿಕರು
ಮುಂಡರಗಿ: ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಇದು ರೈತರಿಗಷ್ಟೇ ಅಲ್ಲದೆ ಕೃಷಿ ಕೂಲಿ ಕಾರ್ಮಿಕರಿಗೂ ಹಲವು ಸಂಕಷ್ಟಗಳನ್ನು ಸೃಷ್ಟಿಸಿದೆ. ಬರದ ಕಾರಣದಿಂದ ತಾಲ್ಲೂಕಿನ ಹಲವು ಗ್ರಾಮಗಳ ಬಡ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ದೂರದ ನಗರಗಳಿಗೆ ವಲಸೆ ಹೋಗುವಂತಾಗಿದೆ.
ಮುಂಗಾರು ಆರಂಭದಿಂದಲೂ ಸಮರ್ಪಕವಾಗಿ ಮಳೆ ಸುರಿಯದ ಕಾರಣ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡವು. ಇದರಿಂದ ಕೃಷಿ ಭೂಮಿಯಲ್ಲಿ ಕೂಲಿ ಕೆಲಸ ದೊರೆಯದೆ ಕಂಗಾಲಾದ ಬಡ ಕೂಲಿ ಕಾರ್ಮಿಕರು ಕುಟುಂಬ ಸಮೇತ ಗುಳೆ ಹೋಗತೊಡಗಿದ್ದಾರೆ.
ತಾಲ್ಲೂಕಿನ ಮುರುಡಿ ತಾಂಡಾ, ಡೋಣಿ ತಾಂಡಾ, ವಿರುಪಾಪೂರ ತಾಂಡಾ, ಶಿಂಗಟರಾಯನಕೇರಿ ತಾಂಡಾ, ಜಾಲವಾಡಗಿ ತಾಂಡಾ ಸೇರಿ ತಾಲ್ಲೂಕಿನ ಹಲವಾರು ಗ್ರಾಮಗಳ ಜನರು ಉದ್ಯೋಗ ಅರಸಿ, ಗೋವಾ, ಕೇರಳ, ಮಂಗಳೂರು, ಉಡುಪಿ ಮೊದಲಾದ ಭಾಗಗಳಿಗೆ ತೆರಳುತ್ತಿದ್ದಾರೆ. ಅಲ್ಲಿ ನಿತ್ಯ ಕೂಲಿ ₹600ರಿಂದ ₹800 ದೊರೆಯುತ್ತಿದ್ದು, ಜೀವನ ನಡೆಸಲು ಇದು ಅನಿವಾರ್ಯವಾಗದೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ ಒಟ್ಟು 45,092 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಕೈಗೊಳ್ಳಲಾಗಿತ್ತು. ಮಳೆ ಕೊರತೆಯಿಂದ ಶೇ 71ರಷ್ಟು ಬೆಳೆ ನಾಶವಾಗಿದೆ. ಶೇ 31ರಷ್ಟು ಮಳೆ ಕೊರತೆ ಉಂಟಾಗಿದ್ದು, ರೈತರು ಹಾಗೂ ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಆರಂಭದಲ್ಲಿ ಸುರಿದ ಅಲ್ಪ ಮಳೆಗೆ ಬಿತ್ತನೆಯಾಗಿದ್ದ ಬೆಳೆ ಒಣಗಿದೆ. ಬಿತ್ತಿರುವ ಬೆಳೆ ಕೈಹಿಡಿಯುವುದಿಲ್ಲ ಎಂಬುದನ್ನರಿತು ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ರೈತರು ಬೆಳೆಯನ್ನು ಹರಗಿ ನಾಶಮಾಡಿದ್ದಾರೆ.
‘ಜಿಲ್ಲಾಧಿಕಾರಿ ನೇತೃತ್ವದ ತಂಡ ಹಾಗೂ ಸಚಿವ ಬಸವರಾಜ ರಾಯರಡ್ಡಿ ನೇತೃತ್ವದ ತಂಡಗಳು ಈಗಾಗಲೇ ತಾಲ್ಲೂಕಿನಾದ್ಯಂತ ಸಂಚರಿಸಿ ಬರ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದರು.
‘ಇದ್ದೂ ಇಲ್ಲದಂತಾದ ನೀರಾವರಿ ಯೋಜನೆ’
ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ತಾಲ್ಲೂಕಿನ ರೈತರು ಪ್ರತಿ ವರ್ಷ ಸಮೃದ್ಧವಾಗಿ ಎರಡು ಬೆಳೆಗಳನ್ನು ಬೆಳೆಯಬಹುದಿತ್ತು. ಕೂಲಿ ಕಾರ್ಮಿಕರು ಸಹ ಸಂತೋಷದಿಂದ ಬದುಕಬಹುದಿತ್ತು. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ನೀರಾವರಿ ಇದ್ದೂ ಇಲ್ಲದಂತಾಗಿದೆ. ಯೋಜನೆ ಅನುಷ್ಠಾನಗೊಂಡು ಮೂರು ದಶಕಗಳು ಕಳೆದರೂ ಎಲ್ಲ ಜಮೀನಿಗೆ ನೀರು ಹರಿಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-23-1637807371