
ಸಚಿವ ಸ್ಥಾನಕ್ಕೆ ಹೈಕಮಾಂಡ್ಗೆ ಹಣ ಕೊಟ್ಟಿಲ್ಲ: ಜಮೀರ್ ಅಹಮದ್ ಖಾನ್
ಚಿತ್ರದುರ್ಗ: ‘ಸಚಿವ ಸ್ಥಾನ ಪಡೆಯಲು ಹೈಕಮಾಂಡ್ಗೆ ಹಣ ಕೊಡಬೇಕು ಎಂಬುದು ಊಹಾಪೋಹ. ಹಣ ಕೊಡುವ ಯಾವುದೇ ಸಂಪ್ರದಾಯ ಇಲ್ಲ. ಸಮೀಕ್ಷೆ ನಡೆಸಿ ಅದರ ಅನುಸಾರ ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ನಲ್ಲಿದೆ’ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
‘ಡಿಕೆಶಿ ಸರ್ಕಾರವು ರಿಯಲ್ ಎಸ್ಟೇಟ್ ಸರ್ಕಾರ ಎಂದು ಆರ್.ಅಶೋಕ ದೂರಿದ್ದಾರೆ. ಅವರು ಏನಾದರೂ ಹೇಳಿಕೊಳ್ಳಲಿ. 2028ಕ್ಕೆ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ. ಬಿಜೆಪಿಯವರು ರಾಜಕೀಯಕ್ಕೆ ಏನು ಬೇಕಾದರೂ ಹೇಳುತ್ತಾರೆ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಭಾರತ ಹಿಂದೂ ರಾಷ್ಟ್ರವಾದರೆ ಮನುಸ್ಮೃತಿ ಮತ್ತೆ ಜಾರಿಗೆ ಬರುತ್ತದೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ದೇಶದಲ್ಲಿ ಸರ್ವ ಧರ್ಮ, ಸರ್ವ ಸಮುದಾಯಗಳು ಒಂದಾಗಿ ಬಾಳುತ್ತಿವೆ. ದೇಶ ಸ್ವಾತಂತ್ರ್ಯ ಗಳಿಸುವಲ್ಲಿ ಎಲ್ಲಾ ಸಮಾಜದವರ ಹೋರಾಟ, ತ್ಯಾಗ, ಬಲಿದಾನವಿದೆ. ಬಿಜೆಪಿಯವರು ರಾಜಕೀಯಕ್ಕಾಗಿ ಹಿಂದೂ ರಾಷ್ಟ್ರದ ವಿಚಾರ ಮುಂದೆ ತರುತ್ತಾರೆ’ ಎಂದರು.
‘ಸಚಿವ ಸ್ಥಾನ ತಪ್ಪಿರುವುದಕ್ಕೆ ಕೆಲವರಿಗೆ ಅಸಮಾಧಾನ ಇರುವುದು ನಿಜ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಲ್ಲರ ಜತೆಗೆ ಮಾತಾಡುತ್ತಿದ್ದಾರೆ. ಅಸಮಾಧಾನವನ್ನು ಸರಿ ಮಾಡುತ್ತಾರೆ. ನಾನು ಇದೇ ಖಾತೆ ಬೇಕು ಎಂದು ಬೇಡಿಕೆ ಇಡುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಸಚಿವ ನಾಗೇಂದ್ರ ಅವರಿಗೆ ಎಸ್ಐಟಿ ಕ್ಲೀನ್ಚಿಟ್ ಕೊಟ್ಟಿದೆ. ಹೀಗಾಗಿ ಅವರು ಮತ್ತೆ ಸಚಿವರಾಗಿದ್ದಾರೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಬರಗಾಲ ಇರುವ ಕಾರಣ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಬೆಳೆ ಪರಿಶೀಲನೆ ನಡೆಸುತ್ತಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಿ ಬರ ಪರಿಹಾರ ಸಂಬಂಧ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಮಂಜಪ್ಪ, ಮುಖಂಡರಾದ ಮೊಹಮ್ಮದ್ ರೆಹಮಾನ್, ಕಮ್ರಾನ್, ನಯಾಜ್ ಪಾಷಾ, ಮೆಹಬೂಬ್ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-44-1040695693