
ಮುಂಗಾರು ಕೈಕೊಟ್ಟ ಪರಿಣಾಮ ಬೆಳೆ ಒಣಗುತ್ತಿದೆ: ಅಂತರ್ಜಲ ಕುಸಿತ
ಕೊರಟಗೆರೆ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಗಳಿಗೆ ಸಂಪೂರ್ಣ ಹಿನ್ನಡೆಯಾಗಿದೆ. ಬಿತ್ತನೆಯಾಗಿದ್ದ ಬೀಜಗಳು ಮೊಳಕೆಯೊಡೆಯುವ ಮುನ್ನವೇ ಒಣಗುತ್ತಿವೆ.
ತಾಲ್ಲೂಕಿನ ಪ್ರಮುಖ ಬೆಳೆಗಳಾದ ಶೇಂಗಾ, ಮುಸುಕಿನ ಜೋಳ, ತೊಗರಿ, ಅಲಸಂದೆ, ಹೆಸರು ಕಾಳು ಸೇರಿದಂತೆ ಹಲವು ಬೆಳೆಗಳ ಬಿತ್ತನೆಗೆ ಸೂಕ್ತ ಕಾಲ ಈಗಾಗಲೇ ಮೀರಿದೆ. ಕೆಲವು ಪ್ರದೇಶಗಳಲ್ಲಿ ಅಲ್ಪಸ್ವಲ್ಪ ಮಳೆಗೆ ರೈತರು ಬಿತ್ತನೆ ಮಾಡಿದ್ದರೂ ಒಣಗಿ ಹೋಗಿದೆ.
ಮಳೆಗೆ ಎದುರು ನೋಡುತ್ತಿರುವ ರೈತರು ಮಳೆ ಬಂದಲ್ಲಿ ರಾಗಿ ಬಿತ್ತನೆಗೆ ಕಾಯುತ್ತಿದ್ದಾರೆ.
ಮೂರು ವರ್ಷಗಳಿಂದ ಉತ್ತಮ ಮಳೆಯಾಗಿದ್ದ ಪರಿಣಾಮ ಅಂತರ್ಜಲಮಟ್ಟ ಏರಿಕೆಯಾಗಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೊಳವೆಬಾವಿಗಳಲ್ಲಿಯೂ ನೀರು ಕಾಣಿಸಿಕೊಂಡಿತ್ತು. ಆದರೆ ಪ್ರಸಕ್ತ ವರ್ಷ ಮಳೆ ತೀವ್ರ ಕೊರತೆಯಾಗಿರುವುದರಿಂದ ಅಂತರ್ಜಲಮಟ್ಟ ಕುಸಿಯುವ ಆತಂಕ ಎದುರಾಗಿದೆ. ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿಗೂ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗುವ ಆತಂಕ ವ್ಯಕ್ತವಾಗಿದೆ.
ಕಳೆದ ವರ್ಷಗಳಲ್ಲಿ ನೀರಿನಿಂದ ತುಂಬಿದ್ದ ಕೆರೆ–ಕಟ್ಟೆಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವುದರ ಜತೆಗೆ ಜನ, ಜಾನುವಾರುಗಳ ಕುಡಿಯುವ ನೀರಿಗೂ ತಾತ್ವಾರ ಎದುರಾಗುವ ಸಾಧ್ಯತೆ ಇದೆ.
ಬರ ಘೋಷಣೆಗೆ ಒತ್ತಾಯ: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ವಿಶೇಷ ಅನುದಾನ ಬಿಡುಗಡೆ ಮಾಡಿ ಬೆಳೆ ನಷ್ಟ ಪರಿಹಾರ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಲ್ಲೂಕಿನ ರೈತರು ಆಗ್ರಹಿಸಿದ್ದಾರೆ.
‘ಅಲ್ಪ ಮಳೆಯಾದಾಗ ಶೇಂಗಾ ಬಿತ್ತಿದ್ದೆವು. ಮಳೆ ಮುಂದುವರಿಯುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಬಿತ್ತನೆ ಮಾಡಿದ ನಂತರ ಮಳೆ ಬರಲಿಲ್ಲ. ಮೊಳಕೆಯೊಡೆದ ಬೆಳೆ ಒಣಗುತ್ತಿದೆ. ಮತ್ತೆ ಬಿತ್ತನೆ ಮಾಡಲು ಹಣವಿಲ್ಲ’ ಎಂದು ಗೌರಗಾನಹಳ್ಳಿ ವೆಂಕಟೇಶಯ್ಯ ಹೇಳಿದರು.
‘ಮನೆಯ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಕೃಷಿ ವೆಚ್ಚ ಎಲ್ಲವೂ ಹೆಚ್ಚಾಗಿದೆ. ಈಗ ಬಿತ್ತಿದ್ದ ಬೆಳೆ ಉಳಿಯದ ಸ್ಥಿತಿ ಬಂದಿದೆ. ಜಾನುವಾರುಗಳಿಗೆ ಮೇವು ಸಿಗುವುದೂ ಕಷ್ಟವಾಗುವ ಭಯವಿದೆ’ ಎಂದು ಚಿಕ್ಕಪಾಳ್ಯದ ರಾಮಾಂಜಿನಪ್ಪ ಆತಂಕ ವ್ಯಕ್ತಪಡಿಸಿದರು.
ಅಲ್ಪಾವಧಿ ಬೆಳೆ ಆಯ್ಕೆ ಮಾಡಿ
ಮಳೆ ಕೊರತೆಯಿಂದ ಬಿತ್ತನೆ ಸಾಧ್ಯವಾಗದ ಪ್ರದೇಶಗಳಲ್ಲಿ ರೈತರು ಆತುರದಿಂದ ಬೀಜ ಬಿತ್ತನೆ ಮಾಡಬಾರದು. ಲಭ್ಯವಿರುವ ತೇವಾಂಶ ಹಾಗೂ ಮುಂದಿನ ಮಳೆಯ ಮುನ್ಸೂಚನೆ ಆಧರಿಸಿ ಕಡಿಮೆ ಅವಧಿಯ ಮತ್ತು ಕಡಿಮೆ ನೀರು ಬೇಡುವ ಬೆಳೆಗಳನ್ನು ಆಯ್ಕೆ ಮಾಡಬೇಕು. ಹಿಂಗಾರು ಮಳೆಯಾದಲ್ಲಿ ರಾಗಿ ಸೇರಿದಂತೆ ಪರ್ಯಾಯ ಬೆಳೆಗಳ ಬಿತ್ತನೆಗೆ ಕೃಷಿ ಇಲಾಖೆಯಿಂದ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಬಿತ್ತನೆಗೊಂಡ ಬೆಳೆಗಳ ಸ್ಥಿತಿಯನ್ನು ಗ್ರಾಮವಾರು ಪರಿಶೀಲಿಸಲಾಗುತ್ತಿದೆ.
ಕಲ್ಲೇಶ ಪ್ರಸಾದ್, ಕೃಷಿ ಅಧಿಕಾರಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-17-1121199482